ಹೊನ್ನಾವರ:’
ಪಶ್ಚಿಮ ಘಟ್ಟದಲ್ಲಿ ಅರಣ್ಯ ನಾಶ ಹಿಗೆಯೇ ಮುಂದುವರಿದರೆ ಮುಂದೊಂದು ದಿನ ಉಸಿರಾಟಕ್ಕೆ ಆಮ್ಲಜನಕ ಸಿಗದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ. ಎಚ್ಚರಿಸಿದರು.
ಎನ್ಎಸ್ಎಸ್,ರೆಡ್ಕ್ರಾಸ್ ಘಟಕ ಹಾಗೂ ಹೊನ್ನಾವರ ಅರಣ್ಯ ವಿಭಾಗ ಇವುಗಳ ಆಶ್ರಯದಲ್ಲಿ ಇಲ್ಲಿಯ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಮಂಗಳವಾರ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಜಾಗತಿಕವಾಗಿ ಜೈವಿಕ ಮಹತ್ವವುಳ್ಳ ಪಶ್ಚಿಮಘಟ್ಟದ ಸೆರಗಿನಲ್ಲಿರುವ ಅತಿಹೆಚ್ಚು ಮಳೆಯಾಗುವ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾಗಿರುವುದು ವಿಪರ್ಯಾಸದ ಸಂಗತಿ.ಜಾಗತಿಕ ತಾಪಮಾನ ಹೀಗೆ ಏರುತ್ತ ಹೋದಲ್ಲಿ ಸಮುದ್ರಮಟ್ಟದಲ್ಲಿ ಏರಿಕೆಯಾಗಿ ಕರಾವಳಿ ನೀರಲ್ಲಿ ಮುಳುಗಬಹುದು.ವಾತಾವರಣದಲ್ಲಿನ ಇಂಗಾಲದ ಡೈಆಕ್ಸೈಡ್ ಹೀರಿಕೊಂಡು 1 ಮರ ಪ್ರತಿವರ್ಷ 1 ಟನ್ ಆಮ್ಲಜನಕ ಉತ್ಪಾದಿಸುತ್ತದೆ.ಗಿಡಗಳನ್ನು ಬೆಳೆಸುವ ಮೂಲಕ ತಾಪಮಾನ ಏರಿಕೆಯನ್ನು ನಿಯಂತ್ರಿಸಬಹುದು.’ ಎಂದು ಅವರು ವಿವರಿಸಿದರು.
ಜಿಲ್ಲೆಯಲ್ಲಿ ಪ್ರಾಕೃತಿಕ ಸೌಂದರ್ಯವುಳ್ಳ ಅಪ್ಸರಕೊಂಡದಂಥ ಬೀಚ್ಗಳಿವೆ.ಆದರೆ ಈ ಪರಿಸರ ತಾಣಗಳಲ್ಲಿ ಪ್ಲಾಸ್ಟಿಕ್,ಮದ್ಯದ ಬಾಟಲಿಮೊದಲಾದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಚೆಲ್ಲಿರುವುದು ಕಂಡುಬರುತ್ತದೆ.ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಬೇಕು’ ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಸ್.ಎಸ್.ಹೆಗಡೆ ಮಾತನಾಡಿ,’ಸಮಾಜ ಕಟ್ಟುವಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಕೊಡುಗೆ ಸಲ್ಲಿಸಲು ಸಾಧ್ಯವಿದೆ.ಗಿಡ-ಮರಗಳನ್ನು ಬೆಳೆಸುವುದರಿಂದ ತನಗೇನು ಸಿಗುತ್ತದೆ ಎನ್ನುವ ಸ್ವಾರ್ಥಪರ ಚಿಂತನೆ ಸರಿಯಲ್ಲ.ಪರಿಸರ ಹಾಗೂ ಸಮಾಜಕ್ಕೆ ಒಳಿತಾಗುವ ನಿಟ್ಟಿನಲ್ಲಿ ಗಿಡ-ಮರಗಳನ್ನು ಸಂರಕ್ಷಿಸುವ ಕಾರ್ಯವಾಗಬೇಕು’ ಎಂದು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್.,ವಲಯ ಅರಣ್ಯಾಧಿಕಾರಿ ಪಿ.ಸಿ.ರವೀಂದ್ರ ಉಪಸ್ಥಿತರಿದ್ದರು.
ರೆಡ್ಕ್ರಾಸ್ ಸಂಚಾಲಕ ಪ್ರೊ.ಎಂ.ಜಿ.ಹೆಗಡೆ ಸ್ವಾಗತಿಸಿದರು.ಪ್ರೊ.ಪ್ರಶಾಂತ ಹೆಗಡೆ ನಿರೂಪಿಸಿದರು.ಎನ್ಎಸ್ಎಸ್ ಅಧಿಕಾರಿ ಪ್ರೊ.ಜಿ.ಎಸ್.ಹೆಗಡೆ ವಂದಿಸಿದರು.ವಿದ್ಯಾರ್ಥಿಗಳು,ಶಿಕ್ಷಕರು ಹಾಗೂ ಕಾಲೇಜಿನ ಇತರ ಸಿಬ್ಬಂದಿಗಳು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Leave a Comment