ಹಳಿಯಾಳ:- ತಾಲೂಕಿನ ಸಾಂಬ್ರಾಣಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ರೈತರು ಬೆಳೆದ (ಬೆಳೆ)ಫಸಲನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಗೊಳಿಸಿ, ರೈತರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಆರೋಪಿಸಿ ಬುಡಕಟ್ಟು ಸಿದ್ದಿ ಸಮುದಾಯದಕ್ಕೆ ಸೇರಿದ ರೈತರು ಹಾನಿಗೊಳಗಾದ ಬೆಳೆಯೊಂದಿಗೆ ಶುಕ್ರವಾರ ಹಳಿಯಾಳ ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಬುಡಕಟ್ಟು ಸಿದ್ದಿ ಜನಾಂಗದ ಧ್ವನಿಯಾಗಿರುವ ಜಿಲ್ಲಾ ಬುಡಕಟ್ಟು ಅಭೀವ್ಯಕ್ತಿ ವೇದಿಕೆ ಸಂಘಟನೆಯ ನೇತೃತ್ವದಲ್ಲಿ ದೌರ್ಜನ್ಯಕ್ಕೆ ಒಳಗಾದ ಅರಣ್ಯವಾಸಿಗಳಾದ ಸಿದ್ದಿ ಸಮುದಾಯದ ರೈತರು ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಹಾನಿಗೊಂಡ ಲಕ್ಷಾಂತರ ರೂ. ಬೆಲೆಯ ಗೋವಿನ ಜೋಳ ಫಸಲನ್ನು ಹಳಿಯಾಳದ ಮಿನಿ ವಿಧಾನಸೌಧದಕ್ಕೆ ತೆರಳುವ ಗೇಟ್ನಲ್ಲಿ ಹಾಕಿ ಅರಣ್ಯಾಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಗೇಟ್ ತಡೆದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿದ್ಯಾಧರ ಗುಳಗುಳಿಯವರಿಗೆ ರಾಜ್ಯಪಾಲರಿಗೆ, ಕಂದಾಯ ಸಚಿವರಿಗೆ, ಜಿಲ್ಲಾದಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ ದಿಯೋಗ ಸಿದ್ದಿ ಸಲ್ಲಿಸಿದರು. ಮನವಿಯಲ್ಲಿ ಸಾಂಬ್ರಾಣಿ ವಲಯದ ಬುಕ್ಕಿನಕೊಪ್ಪ ಗ್ರಾಮದ ರೇಣುಕಾ ಪಾವಲು ಸಿದ್ಧಿಯ ಭೂಮಿ ಸರ್ವೆ ನಂ.: 37 ರಲ್ಲಿ ಅನೇಕ ದಶಕಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದು ಅರಣ್ಯ ಹಕ್ಕು ಸಮಿತಿ ವತಿಯಿಂದ ಜಿ.ಪಿ.ಎಸ್. ಮಾಡಿ ಚಕಬಂದಿ ಮಾಡಿದ್ದು ಹಾಗೂ 2005ರ ಪೂರ್ವದ ಸಂಪೂರ್ಣ ದಾಖಲೆಗಳನ್ನು ಒದಗಿಸಿದ್ದು, ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ ವಾಸಿಗಳ ಮಾನ್ಯ ಮಾಡುವ ಆದೇಶ ಸಂಖ್ಯೆ 2006 ರಂತೆ ಭೂಮಿ ಮಾನ್ಯ ಮಾಡಲು ಸಂಬಂಧಪಟ್ಟಂತಹ ಅಧಿಕಾರಿಗಳಿಗೆ ದಾಖಲೆಗಳನ್ನು ಪೂರೈಸಿ ಪ್ರಕರಣಗಳು ಉಪಸಮಿತಿ ಮತ್ತು ಜಿಲ್ಲಾ ಸಮಿತಿ ಸಮ್ಮುಖದಲ್ಲಿವೆ ಅಲ್ಲದೇ ಬುಡಕಟ್ಟು ಸಮುದಾಯದ ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ 2005ರ ಪೂರ್ವ ದಾಖಲೆ ಪೂರೈಸಿದಲ್ಲಿ ಭೂಮಿ ಹಕ್ಕು ಮಾನ್ಯ ಮಾಡುವ ಆದೇಶವನ್ನು ಕೇಂದ್ರ ಸಚಿವಾಲಯ ಹಾಗೂ ಕರ್ನಾಟಕ ರಾಜ್ಯದ ಆದೇಶದ ಪ್ರಕಾರ ಯಾವುದೇ ಬುಡಕಟ್ಟು ಸಮುದಾಯದ ಹಕ್ಕನ್ನು ಕಸಿದುಕೊಳ್ಳಬಾರದೆಂಬ ಸುಪ್ರಿಂಕೋರ್ಟ್ ಆದೇಶ ಇದ್ದರೂ ಸಹ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ 1989 ರಿಂದ ಸಿದ್ಧಿ ಬುಡಕಟ್ಟು ಬದುಕಿನ ಜೊತೆ ಚೆಲ್ಲಾಟ ಆಡುತ್ತಾ ಪ್ರತಿ ವರ್ಷ ಸಿದ್ದಿ ರೈತರು ಬೆಳೆದ ಫಸಲನ್ನು ಬೇಕಂತಲೇ ನಾಶ ಮಾಡುತ್ತಾ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಲಾಗಿದೆ. ಶುಕ್ರವಾರ ಸಾಂಬ್ರಾಣಿ ವಲಯದ ಅರಣ್ಯ ಇಲಾಖೆಯ ಉಮೇಶ ಹಾಗೂ ಶೋಭಾ ಎನ್ನುವ ಅಧಿಕಾರಿಗಳು ರೇಣುಕಾ ಸಿದ್ದಿಯ ಹೊಲಕ್ಕೆ ತೆರಳಿ ಆಕೆಯ ಮೇಲೆ ದೌರ್ಜನ್ಯ ನಡೆಸಿ ಬೆಳೆ ಹಾಳು ಮಾಡಿದ್ದಾರೆಂದು ನೇರವಾಗಿ ಆರೋಪಿಸಿರುವ ಬುಡಕಟ್ಟು ವೇದಿಕೆ ದಿಯೋಗ ಸಿದ್ದಿ ಸರ್ವೋಚ್ಚ ನ್ಯಾಯಾಲಯ ಹಾಗೂ ಸರ್ಕಾರಗಳ ಆದೇಶವನ್ನು ಮಾನ್ಯ ಮಾಡದ ಹಳಿಯಾಳ ಅರಣ್ಯ ಇಲಾಖೆಯವರು ಗಿರಿಜನ, ಅರಣ್ಯವನ್ನು ನಂಬಿಕೊಂಡು ಶತಮಾನಗಳಿಂದ ಬದುಕು ಸಾಗಿಸುತ್ತಿರುವ ಸಮಾಜದ ಮುಖ್ಯವಾಹಿನಿಯಿಂದ ತೀರ ಹಿಂದೂಳಿದಿರುವ ಜನಾಂಗದ ಮೇಲೆ ಪದೆ ಪದೆ ನಡೆಯುತ್ತಿರುವ ದೌರ್ಜನ್ಯದಿಂದ ತಾವು ಬೇಸತ್ತಿದ್ದು ಇನ್ನು ಮುಂದೆ ಊಗ್ರ ಹೋರಾಟ ನಡೆಸಲಾಗುವುದು ಅಲ್ಲದೇ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ಕಾನೂನಾತ್ಮಕ ಹೋರಾಟವನ್ನು ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಚಾಂದೆಸಾಬ ಹಳಬ, ಇಸ್ಮಾಯಿಲಸಾಬ,ಫಾತಿಮಾಬಿ ಜಮಾದಾರ, ಫರಾಶಿ ಸಿದ್ದಿ, ಇಸ್ಮಾಯಿ ಮಾಪ್ಟೆಕರ, ಬುಡ್ಡೆಸಾಬ ಕಕ್ಕೇರಿ, ಶರಿಫ ಮುಜಾವರ, ಬಸಪ್ಪ ಬಾಳೆಕಾಯಿ, ನನ್ನೆಸಾಬ ಹವಾಲ್ದಾರ್ ಇತರರು ಇದ್ದರು.
Leave a Comment