ಹಳಿಯಾಳ:- ಹಳಿಯಾಳ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಏರಟೆಲ್, ವೋಡಾಪೋನ, ಐಡಿಯಾ, ಬಿ.ಎಸ್.ಎನ್.ಎಲ್ ಕಂಪನಿಯವರು ವಿಶೇಷ ಕೊಡುಗೆ ಫುಲ್ ಟಾಕ್ ಟೈಮ್ ಯೋಜನೆಯಡಿಯಲ್ಲಿ ಗ್ರಾಹಕರಿಗೆ ತಿಂಗಳ,ಮೂರು ತಿಂಗಳ ಕರೆನ್ಸಿ ನೀಡಿ, ಸರಿಯಾದ ನೆಟ್ವರ್ಕ ನೀಡದೆ ಗ್ರಾಹಕರ ಸುಲಿಗೆ ಮಾಡುತ್ತಿದ್ದು. ಹಗಲಿನಲ್ಲೇ ಗ್ರಾಹಕರಿಗೆ ಮೋಸ ಮಾಡುತ್ತಿರುವ ಈ ಕಂಪೆನಿಗಳ ವಿರುದ್ದ ಕ್ರಮ ಜರುಗಿಸಿ ಗ್ರಾಹಕರಿಗೆ ನ್ಯಾಯ ಒದಗಿಸುವಂತೆ ಜಯ ಕರ್ನಾಟಕ ಸಂಘಟನೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಸಾರ್ವಜನಿಕರು, ಗ್ರಾಹಕರು ಏರಟೆಲ್ ಸೇರಿದಂತೆ ವಿವಿಧ ಕಂಪೆನಿಗಳ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅದನ್ನು ಪ್ರದರ್ಶಿಸುತ್ತಾ, ಪ್ರತಿಭಟನಾ ಮೇರವಣಿಗೆ ಮೂಲಕ ಇಲ್ಲಿಯ ಮಿನಿ ವಿಧಾನ ಸೌಧಕ್ಕೆ ಆಗಮಿಸಿ ಕೇಂದ್ರ ಸಂಪರ್ಕ ಸಚಿವ ಮನೋಜ ಸಿನ್ಹಾ ಅವರ ಹೆಸರಿನಲ್ಲಿದ್ದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ ಹಳಿಯಾಳ ತಾಲೂಕಿನಾದ್ಯಂತ ಎಲ್ಲ ನೆಟ್ ವರ್ಕ ಕಂಪನಿಗಳು ತಮ್ಮ ತಮ್ಮ ಕಂಪನಿಗಳ ಪ್ರಚಾರ ಮಾಡಿ, ಜನರಿಗೆ ಅನೇಕ ರೀತಿಯ ಟಾಕ್ ಟೈಮ್ ಮತ್ತು ಇಂಟರನೆಟ್ ಸೇವೆ ಕೊಡುತ್ತೇವೆಂದು ಹೇಳಿ ಜನರಿಂದ ಹಣ ಪಡೆದುಕೊಂಡು ತಮ್ಮ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಯಾವ ಕಂಪನಿಯು ಸಹ ಸರಿಯಾದ ನೆಟವರ್ಕ, ಇಂಟರನೆಟ್ ಕೊಡದೆ ಅಸಮರ್ಥ ಸೇವೆ ನೀಡುತ್ತಾ ಗ್ರಾಹಕರಿಂದ ಹಗಲು ದರೊಡೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಹಳಿಯಾಳದಲ್ಲಿ ಈವರೆಗೆ ಸುಮಾರು 1ಲಕ್ಷಕ್ಕೂ ಹೆಚ್ಚು ಗ್ರಾಹಕರು ಮೊಬೈಲ ಬಳಸುತ್ತಿದ್ದಾರೆ. ಏರಟೆಲ್ ಕಂಪನಿಯು 4ಜಿ ಸೇವೆ ಕೊಡುತ್ತೇನೆಂದು ಹೇಳಿ ಅಸಂಖ್ಯಾತ ಗ್ರಾಹಕರಿಗೆ ಕರೆನ್ಸಿ ಮಾರಾಟ ಮಾಡಿದೆ. ಆದರೆ ಇವರು ಕೊಡುತ್ತಿರುವ ಸೇವೆ 2ಜಿ ನೆಟವರ್ಕಗಿಂತ ಕೀಳುಮಟ್ಟದಾಗಿದ್ದು ಪರೋಕ್ಷವಾಗಿ ಗ್ರಹಕರಿಗೆ ಕೊಟ್ಯಂತರ ರೂ. ಹಾನಿಯನ್ನು ಏರಟೆಲ್ ಮಾಡಿದೆ ಎಂದು ಗಂಭೀರವಾಗಿ ಆರೋಪಿಸಿರುವ ಸಂಘಟನೆಯವರು, ಸಮಸ್ತ ಹಳಿಯಾಳ ಜನತೆಯ ಪರವಾಗಿ ಈ ಹಿಂದೆ ಮನವಿ ಸಲ್ಲಿಸಿದ್ದರು ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಏರಟೆಲ್ ಕಂಪನಿಯು ತಮ್ಮ ಸೇವೆಯನ್ನು ಅಭಿವೃದ್ಧಿಪಡಿಸಿ ಕಂಪೆನಿ ಹೇಳಿದಂತೆ ಗ್ರಾಹಕರಿಗೆ ಸಮರ್ಥ 4ಜಿ ನೆಟವರ್ಕ ವ್ಯವಸ್ಥೆಯನ್ನು ಕೊಡಬೇಕು. ಅಲ್ಲಿಯವರೆಗೆ ಕಂಪನಿಯು ಹಳಿಯಾಳದಲ್ಲಿ ತನ್ನ ಎಲ್ಲಾ ರೀತಿಯ ವ್ಯವಹಾರವನ್ನು ಬಂದ ಮಾಡಬೇಕೆಂದು ಆಗ್ರಹಿಸಲಾಗಿದೆ. ಒಂದಾನು ವೇಳೆ ಇದೇ ರೀತಿ ಮುಂದುವರೆದಲ್ಲಿ ಮುಂದೆ ಯಾವುದೇ ಗ್ರಾಹಕರಿಂದ ಏನಾದರೂ ಕಂಪನಿಯ ಆಸ್ತಿ ಪಾಸ್ತಿಗೆ ಹಾನಿಯಾದಲ್ಲಿ ಇದಕ್ಕೆ ಕಂಪನಿಯೇ ನೇರ ಹೊಣೆಗಾರರು ಆಗಿರುತ್ತಾರೆ. ಅಲ್ಲದೇ ಜಯ ಕರ್ನಾಟಕ ಸಂಘಟನೆಯಿಂದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ವಿಲಾಸ ಕಣಗಲಿ ಮಾಧ್ಯಮದವರಿಗೆ ತಿಳಿಸಿದರು. ಪ್ರತಿಭಟನೆಯಲ್ಲಿ ಗಣೇಶ ಗೋಸಪ್ಪನವರ, ಸಂಜು ಚಲವಾದಿ, ಮಹೇಶ ಹುಲಕೊಪ್ಪ, ಶಿರಾಜ ಮುನವಳ್ಳಿ, ಅನಿಸ ಪಿರವಾಲೆ, ಗೋಪಿ ಗರಗ, ವಿನೋದ ಗಿಂಡೆ, ವಿಕ್ರಾಂತ ಶೆಟ್ಟಿ, ಸಿಕಂದರ ಮುಜಾವರ, ವಿಶಾಲ ಕರ್ಜಗಿ, ನಾರಾಯಣ ಬೋವಿ, ಆನಂದ ಬೋವಿ, ಸಂಜು ನಾಯ್ಕ, ರವಿ ಚಲವಾದಿ ಮೊದಲಾದವರು ಇದ್ದರು.
Leave a Comment