ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರ ಬಾಕಿ ಹಣವನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ ಕಳುಹಿಸಿದ ಕಬ್ಬಿನ ಬಾಕಿ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದ್ದು. ಕಾರ್ಖಾನೆಯ ಈ ರೈತ ವಿರೋಧಿ ನೀತಿಯನ್ನು ಖಂಡಿಸಿ ಅಗಸ್ಟ ದಿ.6 ರಂದು ಕಾರ್ಖಾನೆಗೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಹಳಿಯಾಳ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಹೇಳಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಭಟನೆಯ ಕುರಿತು ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷದ 305ರೂ ಬಾಕಿ ಹಣ ಹಾಗೂ 2017-18ನೇ ಸಾಲಿಗೆ ಕಾರ್ಖಾನೆಗೆ ಕಳುಹಿಸಿದ ಕಬ್ಬಿನ ಹಣವನ್ನು ಎಪ್ರಿಲ್ 30 ರ ಒಳಗೆ ರೈತರಿಗೆ ನೀಡುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಕೊಂಡಿದ್ದ ಕಾರ್ಖಾನೆ ಅಧಿಕಾರಿಗಳು ಈವರೆಗೆ ಹಣವನ್ನು ನೀಡದೆ ರೈತರಿಗೆ ಮೊಸ ಮಾಡಿದ್ದಾರೆಂದು ಆರೋಪಿಸಿದರು. ಜಿಲ್ಲಾಡಳಿತಕ್ಕೂ ಗೌರವ ನೀಡದೆ ಕಾರ್ಖಾನೆಯವರು ದಿ.23-7-2018ರಂದು ಬರೆದ ಲಿಖಿತ ಪತ್ರದಲ್ಲಿ ರೈತರಿಗೆ 305ರೂ. ಕೊಡುವ ಇಚ್ಚೆ ಇಲ್ಲದಿರುವುದನ್ನು ತೊರ್ಪಡಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಊಗ್ರ ಪ್ರತಿಭಟನೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಅಗಸ್ಟ್ ದಿ.6ರಂದು ಬೆಳಿಗ್ಗೆ 11ಗಂಟೆಗೆ ಪಟ್ಟಣದ ಮರಾಠಾ ಭವನದಲ್ಲಿ ಸಭೆ ಸೇರಿ ಅಲ್ಲಿಂದ ಪ್ರತಿಭಟನಾ ಮೇರವಣಿಗೆ ಮೂಲಕ ಸಕ್ಕರೆ ಕಾರ್ಖಾನೆಗೆ ಆಗಮಿಸಿ ಅಲ್ಲಿ ಕಾರ್ಖಾನೆಗೆ ಮುತ್ತಿಗೆ ಹಾಕಿ ಬೇಡಿಕೆ ಈಡೇರಿಸುವ ವರೆಗೆ ಅನಿರ್ದಿಷ್ಟ ಅವಧಿಯ ವರೆಗೆ ಪ್ರತಿಭಟನೆ ನಡೆಸಲಾಗುವುದೆಂದು ಅವರು ಕಾಜಗಾರ ಸ್ಪಷ್ಟಪಡಿಸಿದರು. ಕಿತ್ತೂರಿನ ರೈತ ಮುಖಂಡ ಪ್ರವೀಣ ಸರದಾರ ಮಾತನಾಡಿ ಭಾರಿ ಪ್ರಮಾಣದಲ್ಲಿ ಚಕ್ಕಡಿ ಗಾಡಿಗಳೊಂದಿಗೆ ಎಲ್ಲೆಡೆಯಿಂದ ರೈತರು ಆಗಮಿಸಿ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಘೊಷಿಸಿದರು. ಸುದ್ದಿಗೊಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಾರಿ ವಿ ಘಾಡಿ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಮಂಜುಳಾ ಗೌಡಾ, ಜಿಆರ್ ಪಾಟೀಲ್, ಯುಕೆ ಬೋಬಾಟಿ, ಎಸ್ಎನ್ ಬನವಣ್ಣನವರ, ಸಂಜು ಪವಾರ, ನಾರಾಯಣ ಬೋಬಾಟಿ, ಶಿವಪುತ್ರ ನುಚ್ಚಂಬ್ಲಿ, ಜೀವಪ್ಪ, ಅಶೋಕ ಘೋಟ್ನೇಕರ, ಗಣಪತಿ ಕರಂಜೆಕರ, ಪ್ರಕಾಶ ಫಾಕ್ರಿ ಇತರರು ಇದ್ದರು.
Leave a Comment