ಹಳಿಯಾಳ :- ಮಳೆ,ಗಾಳಿ, ಪ್ರಕೃತಿ ವಿಕೋಪದಿಂದ ಮನೆ,ಆಸ್ತಿಪಾಸ್ತಿ ಹಾಗೂ ಜಾನುವಾರುಗಳಿಗೆ ಹಾನಿ ಸಂಭವಿಸುವ ಪ್ರಕರಣಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮಾನವೀಯತೆ ದೃಷ್ಠಿಯಿಂದ ತ್ವರಿತವಾಗಿ ಕಾರ್ಯನಿರ್ವಹಿಸಿ ಅಂತಹವರಿಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವಂತೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಕರೆ ನೀಡಿದರು. ಪಟ್ಟಣದ ಬಾಬು ಜಗಜ್ಜೀವನರಾಮ ಸಭಾ ಭವನದಲ್ಲಿ ಸ್ವಚ್ಚ ಭಾರತ ಮಿಷನ್ ಜಿಲ್ಲಾ ಪಂಚಾಯತನವರ ಆಶ್ರಯದಲ್ಲಿ ನಡೆದ 2018ರ ಸ್ವಚ್ಚ ಸರ್ವೇಕ್ಷಣ್ ಗ್ರಾಮೀಣ ತಾಲೂಕಾ ಮಟ್ಟದ ಕಾರ್ಯಾಗಾರವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಯಿಂದ ಹಿಡಿದು ಪ್ರತಿಯೊಂದು ಹಂತದಲ್ಲಿರುವ ವ್ಯಕ್ತಿಯೂ ಸ್ವಚ್ಚತೆಗೆ ಆದ್ಯತೆ ನೀಡಬೇಕು, ತಮ್ಮ ಸುತ್ತಮುತ್ತಲ ಪರಿಸರ ಸ್ವಚ್ಚವಾಗಿಟ್ಟುಕೊಳ್ಳಬೇಕು. ಎಲ್ಲಿಯಾದರೂ ನೈರ್ಮಲ್ಯ, ಅಸ್ವಚ್ಚ ಪರಿಸರ ಕಾಣಿಸಿದರೇ ಕೂಡಲೇ ಪುರಸಭೆ, ಗ್ರಾಮ ಪಂಚಾಯತಗಳಿಗೆ ದೂರು ನೀಡಿ ಪರಿಸರ ಸ್ವಚ್ಚ ಮತ್ತು ಸುಂದರವಾಗಿಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು. ಅಲ್ಲದೇ ಪ್ರತಿಯೊಬ್ಬರು ಶೌಚಾಲಯಗಳನ್ನು ಬಳಸುವಂತೆ ಕರೆ ನೀಡಿದರು. ಪ್ರಕೃತಿ ವಿಕೋಪದಡಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳ ಬಳಿ 5 ಕೋಟಿ ಹಣ ಮೀಸಲಾಗಿದೆ ಅಲ್ಲದೇ ಸರ್ಕಾರದ ಬಳಿ ಹಣದ ಕೊರತೆ ಇಲ್ಲ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಹಾಗೂ ಮಾನವೀಯತೆಯಿಂದ ಕಾರ್ಯನಿರ್ವಹಿಸುವಂತೆ ಒತ್ತಿ ಹೇಳಿದರು. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಮಳೆಯಾಗಿದ್ದು ಪ್ರಸ್ತುತ ಹಳಿಯಾಳ ಭಾಗದಲ್ಲಿ ಶೇ.26 ಮಳೆ ಕೊರತೆ ಇದೆ. ಆದರೇ ರೈತರು ಬೆಳೆದ ಭತ್ತ, ಕಬ್ಬು, ಮೆಕ್ಕೆಜೋಳ, ಹತ್ತಿ ಫಸಲು ಉತ್ತಮವಾಗಿದೆ ಎಂದ ದೇಶಪಾಂಡೆ ಜೋಯಿಡಾದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಮಿಶಾಳೆ, ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ತಹಶೀಲ್ದರ್ ವಿದ್ಯಾಧರ ಗುಳಗುಳಿ, ಕೃಷಿ ಅಧಿಕಾರಿ ನಾಗೇಶ ನಾಯ್ಕ, ಪುರಸಭೆ ಅಧಿಕಾರಿ ಕೇಶವ ಚೌಗಲೆ,ತಾಪಂ ಅಧಿಕಾರಿ ಜಕ್ಕಪ್ಪಗೊಳ ಇತರರು ಇದ್ದರು.
Leave a Comment