ಹೊನ್ನಾವರ : ದಮನಿತರನ್ನು, ದುರ್ಬಲರನ್ನು, ಗ್ರಾಮೀಣ ಜನರನ್ನು ಮನುಷ್ಯರೆಂದು ಕಾಣುವ ಹೃದಯ ವೈಶಾಲ್ಯತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಹೊನ್ನಾವರ ಹಿರಿಯ ಸಿವಿಲ್ ನ್ಯಾಯಾಧೀಶ ಎಮ್.ವಿ ಚೆನ್ನಕೇಶವ ರೆಡ್ಡಿ ಕರೆ ನೀಡಿದರು.ಅವರು ಚಿತ್ತಾರ ಸರ್ಕಾರಿ ಪ್ರೌಢಶಾಲೆಯಲ್ಲಿ ಲಿಗಲ್ ಲಿಟ್ರಿಸಿ ಕ್ಲಬ್ ಉದ್ಘಾಟಿಸಿ ಕಾನೂನು ಸಾಕ್ಷರತಾ ಸಮಿತಿ ವತಿಯಿಂದ ನೀಡಿರುವ ಕಂಪ್ಯೂಟರ್ ಹಾಗೂ ಸುಲಭ ಕಾನೂನು ಪುಸ್ತಕಗಳನ್ನು ಶಾಲಾ ಗ್ರಂಥಾಲಯಕ್ಕೆ ಹಸ್ತಾಂತರಿಸಿ ಮಾತನಾಡುತ್ತಿದ್ದರು.ಅರಣ್ಯ ಭಾಗದಲ್ಲಿ ಎಲ್ಲಾ ಉನ್ನತ ಸೌಲಭ್ಯಗಳಿಂದ ದೂರ ಇದ್ದು ಸೀಮಿತ ಅವಕಾಶದಲ್ಲಿ ಉತ್ತಮ ಅಧ್ಯಯನ-ಶಿಸ್ತನ್ನು ಅಳವಡಿಸಿಕೊಂಡು ಪ್ರತಿವರ್ಷವೂ ಇಲ್ಲಿನ ವಿದ್ಯಾರ್ಥಿಗಳು ಮಾಡುತ್ತಿರುವ ಸಾಧನೆ ಇತರರಿಗೆ ಮಾದರಿಯಾದ್ದರಿಂದ ಕಾನೂನು ಸಾಕ್ಷರತಾ ಸಮಿತಿಯು ಕೊಡಮಾಡುವ ಕಂಪ್ಯೂಟರನ್ನು ಹಾಗೂ ಪುಸ್ತಕದ ನೆರವನ್ನು ಚಿತ್ತಾರ ಸರ್ಕಾರಿ ಪ್ರೌಢಶಾಲೆಗೆ ನೀಡಲು ಸಮಿತಿ ತೀರ್ಮಾನಿಸಿತು ಎಂದರು.ಕಾನೂನು ಸಾಕ್ಷರತಾ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಧುಕರ ಪಿ. ಭಾಗ್ವತ ಮಾತನಾಡಿ ಪ್ರಯತ್ನ ಮತ್ತು ಶಿಸ್ತಿನ ಒಟ್ಟೂ ಮೊತ್ತವೇ ಸಾಧನೆ. ವಿದ್ಯಾರ್ಜನೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಸಾಧನೆ ಸಾದ್ಯ. ವಿದ್ಯಾರ್ಥಿಗಳು ನೀತಿವಂತರಾಗಿ ಬದುಕನ್ನು ಪ್ರೀತಿಸುವ, ಹಿರಿಯರನ್ನು ಗೌರವಿಸುವ ಸುತ್ತಿನ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಬೆಳೆಯಬೇಕು. ಕಾನೂನು ಸಾಕ್ಷರತಾ ಕಾರ್ಯಕ್ರಮದಿಂದ ಪ್ರತಿಯೊಂದು ಶಾಲೆಯ ಪ್ರತಿಯೊಂದು ತರಗತಿಯ ಒಬ್ಬೊಬ್ಬರು ಪ್ರೇರಿತರಾದರೆ ಕಾನೂನು ಸಾಕ್ಷರತಾ ಸಮಿತಿಯ ಉದ್ದೇಶ ಸಫಲ ಆದಂತೆ. ಆದ್ದರಿಂದ ವಿದ್ಯಾರ್ಥಿಗಳು ಲಿಗಲ್ ಲಿಟ್ರಿಸಿ ಕ್ಲಬ್ನ ಕಂಪ್ಯೂಟರನ್ನು, ಪುಸ್ತಕಗಳನ್ನು ಜ್ಞಾನಾರ್ಜನೆಗಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೌಢಶಾಲೆಯ ಪ್ರಾಚಾರ್ಯ ದೀಪಕ ನಾಯ್ಕ ಹಾಗೂ ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ವೇದಿಕೆಯಲ್ಲಿ ಹೆಚ್ಚುವರಿ ಸರ್ಕಾರಿ ವಕೀಲ ಪ್ರಮೋದ ಎಲ್.ಭಟ್ಟ, ವಕೀಲರ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ, ಹಿರಿಯ ವಕೀಲರಾದ ಮಾಧವ ಜಾಲಿಸತ್ಗಿ, ವಿ.ಎಂ. ಭಂಡಾರಿ, ಉದಯ ಬಿ. ನಾಯ್ಕ ಹಾಗೂ ಇನ್ನೀತರರು ಉಪಸ್ಥಿತರಿದ್ದರು. ಆರಂಭದಲ್ಲಿ ಕು. ಅನುಷಾ ಯಾಜಿ ಪ್ರಾರ್ಥನಾ ಗೀತೆ ಹಾಡಿದರು. ಶಿಕ್ಷಕ ಪ್ರಕಾಶ ನಾಯ್ಕ ಸ್ವಾಗತಿಸಿದರು. ಶಿಕ್ಷಕಿಯರಾದ ಸುಪ್ರಿಯಾ ಹೆಗಡೆ ಮತ್ತು ಮಹಾಲಕ್ಷ್ಮೀ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Leave a Comment