ಹಳಿಯಾಳ: ಯಾವುದೇ ಕ್ಷೇತ್ರದಲ್ಲಾಗಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಹಳಿಯಾಳದಲ್ಲಿ ಅಂತರರಾಜ್ಯ ಕಳ್ಳರನ್ನು ಹಿಡಿದ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನೀಕರನ್ನು ಗುರುತಿಸಿ ಸನ್ಮಾನಿಸುವ ಉತ್ತಮ ಕಾರ್ಯದ ಮೂಲಕ ಇತರರಿಗೂ ಪ್ರೇರಣೆ ನೀಡುವ ಮಹತ್ವದ ಕೆಲಸ ಸ್ಥಳೀಯ ಸಂಘ-ಸಂಸ್ಥೆಗಳು ಮಾಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿನ ತಹಶೀಲ್ದಾರ ಕಛೇರಿಯ ಸಭಾಭವನದಲ್ಲಿ ನಿವೃತ್ತ್ತ ಸರ್ಕಾರಿ ನೌಕರರ ಸಂಘ, ದುರ್ಗಾದೌಡ ಸಮೀತಿ, ಜಯ ಕರ್ನಾಟಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಲಯನ್ಸ್ ಕ್ಲಬ್, ಹೋಟೆಲ್ ಮಾಲಿಕರ ಸಂಘ, ಹಿರಿಯ ನಾಗರಿಕರ ಸಂಘ, ಪತಂಜಲಿ, ಅಟೋ ರಿಕ್ಷಾ ಸಂಘ, ಪತ್ರಕರ್ತರ ಸಂಘ, ಜೀಜಾ ಮಾತಾ ಮಹಿಳಾ ಸಂಘ, ನಿವೃತ್ತ ಮಾಜಿ ಸೈನಿಕರ ಸಂಘ, ಮಾಲಿಕರು ವಾಹನ ಚಾಲಕರ ಸಂಘ, ವಾಲ್ಮೀಕಿ ಸಂಘದ ಸಹಭಾಗಿತ್ವದಲ್ಲಿ ಅಂತರಾಜ್ಯ ಕುಖ್ಯಾತ ದರೋಡೆಕೊರರನ್ನು ಹಿಡಿದು ಬಂಧಿಸುವಲ್ಲಿ ಸಾಹಸ ತೋರಿದವರನ್ನು ಶೌರ್ಯ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿ ಅವರು ಮಾತನಾಡಿದರು. ದುರ್ಗಾದೌಡ ಸಮೀತಿ ಮುಖಂಡ ರಾಜು ಧೂಳಿ ಮಾತನಾಡಿ ರಾಮಾಯಣದ ಪ್ರಹಸನವನ್ನು ತಿಳಿಸಿ ಸಮಾಜದಲ್ಲಿ ಜಾಂಬವಂತನ ಕಾರ್ಯ ಸಾರ್ವಜನೀಕರು ಮಾಡಬೇಕಿದೆ ಎಂದ ಅವರು ಸಾಹಸ ಮೆರೆದವರಿಗೆ ಸ್ಪೂರ್ತಿದಾಯಕ ಸನ್ಮಾನ ಇದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಳಿಯಾಳದ ಪೋಲಿಸ್ ಇಲಾಖೆಯ ಹವಾಲ್ದಾರ್ ಅಶೋಕ ಹುಬ್ಬಳ್ಳಿ, ಅಜಂಗಾವ ಹಾಗೂ ಕೆಸರೊಳ್ಳಿ ಗ್ರಾಮಸ್ಥರಾದ ಮಹಾಂತೇಶ ವಾಲೇಕರ, ದಿನೇಶ ವಾಲೇಕರ, ಮಹಾಬಳೇಶ್ವರ ವಡ್ಡರ, ದೇವೆಂದ್ರ ಹುಲಿಮಣಿ, ಮಂಜುನಾಥ ಮಾಳಗಿ, ಲಕ್ಷ್ಮಣ ಗೌಡಾ, ಲಕ್ಷ್ಮಣ ಚೌವಾಣರನ್ನು ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪೋಲಿಸ್ ಸಿಬ್ಬಂದಿ ಅಶೋಕ ಉಳವಿ ಕ್ಷೇತ್ರದ ಊರಾದ ಹಳಿಯಾಳದಲ್ಲಿ ಅನ್ಯಾಯ, ದೌರ್ಜನ್ಯ ಹೆಚ್ಚು ಸಮಯ ನಡೆಯಲ್ಲ. ನಮ್ಮ ನಿಷ್ಠೆ ಹಾಗೂ ಕಾರ್ಯಕ್ಕೆ ಜನತೆ ನೀಡಿರುವ ಗೌರವ ಹೆಚ್ಚಿನ ಜವಾಬ್ದಾರಿ ನೀಡಿದ್ದು ಸ್ಪೂರ್ತಿದಾಯಕ ಸನ್ಮಾನಕ್ಕೆ ಚಿರರುಣಿಯಾಗಿದ್ದೇನೆಂದರು. ಪತ್ರಕರ್ತ ಪ್ರಸಾದ ವಝೆ ಮಾತನಾಡಿ ಸಾಧನೆಗೆ ಅಸಾಧ್ಯವಾದ್ದೂ ಯಾವುದಿಲ್ಲ. ಪರಿಚಯ ಹಾಗೂ ಸಾಧನೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಸಾಧನೆ ಮಾಡಿದರೆ ಸಾಕು ಸಮಾಜಕ್ಕೆ ಪರಿಚಯ ತಾನಾಗಿಯೇ ಆಗುತ್ತೆ ಅನ್ನುವುದುಕ್ಕೆ ಈ ಸಾಧಕರೆ ಸಾಕ್ಷಿಯಾಗಿದ್ದಾರೆಂದರು. ಈ ಸಂದರ್ಭದಲ್ಲಿ ದುರ್ಗಾದೌಡ ಸಮಿತಿಯ ಪ್ರಸಾದ ಹುನ್ಸವಾಡಕರ, ಸಿಪಿಐ ಸುಂದ್ರೇಶ ಹೊಳೆಣ್ಣವರ, ಪತ್ರಕರ್ತರ ಸಂಘದ ಅಧ್ಯಕ್ಷರಾದ ಓರವಿಲ್ ಫರ್ನಾಂಡಿಸ್, ಜಿಜಾ ಮಾತಾ ಸಂಘದ ಮಂಗಲಾ ಕಶೀಲಕರ, ಕರ್ನಾಟಕ ರಕ್ಷಣಾ ವೇದಿಕೆಯ ಬಸವರಾಜ ಬೇಂಡಿಗೇರಿಮಠ, ಲಯನ್ಸ ಕ್ಲಬ್ನ ಮಹಾಂತೇಶ ಹೀರೆಮಠ, ಡಿ.ಎಂ ಸಾವಂತ, ಅನಂತ ಲಾಡ, ಜಿಡಿ ಗಂಗಾಧರ, ಶಿರಾಜ ಮುನವಳ್ಳಿ, ಇದ್ದರು.
Leave a Comment