ಹಳಿಯಾಳ:- ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರ ಬಾಕಿ ಹಣವನ್ನು ಹಾಗೂ ಪ್ರಸಕ್ತ ಸಾಲಿನಲ್ಲಿ ಕಳುಹಿಸಿದ ಕಬ್ಬಿನ ಬಾಕಿ ಹಣವನ್ನು ನೀಡದೆ ರೈತರಿಗೆ ಮೊಸ ಮಾಡುತ್ತಿದೆ ಎಂದು ಆರೋಪಿಸಿ ಹಳಿಯಾಳ ಕಬ್ಬು ಬೆಳೆಗಾರ ಸಂಘದವರ ನೇತೃತ್ವದಲ್ಲಿ ಕಾರ್ಖಾನೆ ವ್ಯಾಪ್ತಿಯ 7 ತಾಲೂಕುಗಳ ನೂರಾರು ಕಬ್ಬು ಬೆಳೆಗಾರ ರೈತರು ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಅನಿರ್ಧಿಷ್ಠಾವಧಿ ಧರಣಿ ಪ್ರಾರಂಭಿಸಿದ್ದಾರೆ. ಪಟ್ಟಣದ ಮರಾಠಾ ಭವನದ ಎದುರು ಸಭೆ ಸೇರಿದ ಧಾರವಾಡ, ಕಿತ್ತೂರು ಕಲಘಟಗಿ, ಮುಂಡಗೋಡ,ದಾಂಡೇಲಿ, ಹಳಿಯಾಳ ಹಾಗೂ ಅಳ್ನಾವರ ಭಾಗದ ರೈತರು ಪ್ರತಿಭಟನಾ ಮೇರವಣಿಗೆ ಮೂಲಕ ವನಶ್ರೀ ವೃತ್ತ, ಶಿವಾಜಿ ವೃತ್ತ ಪ್ರಮುಖ ಬೀದಿಗಳಲ್ಲಿ ಸಾಗಿ ಪಟ್ಟಣದ ಹೊರವಲಯವಾದ ಹುಲ್ಲಟ್ಟಿಯಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಆಗಮಿಸಿ ಕಾರ್ಖಾನೆಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಳಿಯಾಳ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಂಕರ ಕಾಜಗಾರ ಕಳೆದ ವರ್ಷದ 305ರೂ ಬಾಕಿ ಹಣ ಹಾಗೂ 2017-18ನೇ ಸಾಲಿಗೆ ಕಾರ್ಖಾನೆಗೆ ಕಳುಹಿಸಿದ ಕಬ್ಬಿನ ಹಣವನ್ನು ಎಪ್ರಿಲ್ 30 ರ ಒಳಗೆ ರೈತರಿಗೆ ನೀಡುವುದಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಒಪ್ಪಿಕೊಂಡಿದ್ದ ಕಾರ್ಖಾನೆ ಅಧಿಕಾರಿಗಳು ಈವರೆಗೆ ಹಣವನ್ನು ನೀಡದೆ ರೈತರಿಗೆ ಮೊಸ ಮಾಡಿದ್ದಾರೆಂದು ಆರೋಪಿಸಿದರು. ಜಿಲ್ಲಾಡಳಿತಕ್ಕೂ ಗೌರವ ನೀಡದೆ ಕಾರ್ಖಾನೆಯವರು ದಿ.23-7-2018ರಂದು ಬರೆದ ಲಿಖಿತ ಪತ್ರದಲ್ಲಿ ರೈತರಿಗೆ 305ರೂ. ಕೊಡುವ ಇಚ್ಚೆ ಇಲ್ಲದಿರುವುದನ್ನು ತೊರ್ಪಡಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ರೈತರು ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗಿದೆ. ರೈತರಿಗೆ ಬಾಕಿ ಹಣ ದೊರೆಯುವವರೆಗೆ ಕಾರ್ಖಾನೆ ಎದುರಿನಿಂದ ರೈತರು ಕದಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆಯ ಮುಖ್ಯಸ್ಥ ಹಾಗೂ ಆಡಳಿತಾಧಿಕಾರಿ ಕಣ್ಣನ್, ಸದ್ಯದ ಪರಿಸ್ಥಿತಿಯಲ್ಲಿ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ, ನಷ್ಟದಲ್ಲಿ ಕಾರ್ಖಾನೆಯನ್ನು ನಡೆಸಲಾಗುತ್ತಿದೆ. ರೈತರ ಬೇಡಿಕೆಯನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಬಳಿಕ ಅವರ ನಿರ್ದೇಶನದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸದ್ಯದ ಪರಿಸ್ಥಿತಿಯಲ್ಲಿ 305ರೂ ನೀಡುವುದು ಕಷ್ಟದಾಯಕವಾಗಿದೆ ಎಂದು ಪ್ರತಿಭಟನಾಕಾರರಿಗೆ ತಿಳಿದು ಅಲ್ಲಿಂದ ತೆರಳಿದರು. ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು. ರೈತರು ಭಜನೆ, ಹೋರಾಟದ ಹಾಡುಗಳ ಮೂಲಕ ಕಾರ್ಖಾನೆಯ ರೈತ ವಿರೋಧಿ ನೀತಿಯನ್ನು ವಿರೋಧಿಸುತ್ತಿರುವುದು ಕಂಡು ಬಂದಿತು. ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಾರಿ ವಿ ಘಾಡಿ, ಪ್ರಧಾನ ಕಾರ್ಯದರ್ಶಿ ಅಶೋಕ ಮೇಟಿ, ಮುಖಂಡರಾದ ಮಂಜುಳಾ ಗೌಡಾ,ಎಸ್ಕೆ ಗೌಡಾ, ಜಿ.ಆರ್.ಪಾಟಿಲ್, ಯುಕೆ ಬೋಬಾಟಿ, ಎಸ್ಎನ್ ಬನವಣ್ಣನವರ, ಸಂಜು ಪವಾರ, ನಾರಾಯಣ ಬೋಬಾಟಿ, ಶಿವಪುತ್ರ ನುಚ್ಚಂಬ್ಲಿ, ಜೀವಪ್ಪ, ಅಶೋಕ ಘೋಟ್ನೇಕರ, ಗಣಪತಿ ಕರಂಜೆಕರ, ಪ್ರಕಾಶ ಫಾಕ್ರಿ ಇತರರು ಇದ್ದರು.
Leave a Comment