ಹಳಿಯಾಳ:- 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ ಹಳಿಯಾಳ ಕಬ್ಬು ಬೆಳೆಗಾರರು ಅಗಸ್ಟ ದಿ.6 ರಿಂದ ಆರಂಭಿಸಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ 23 ದಿನ ಪೂರೈಸಿದ್ದು ದಿ.29 ಬುಧವಾರದಂದು 24ನೇ ದಿನಕ್ಕೆ ಕಾಲಿಡಲಿದೆ.
ಚಳಿ, ಮಳೆ, ಗಾಳಿ ಲೆಕ್ಕಿಸದೆ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಳಿಯಾಳ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಹಳಿಯಾಳ, ಕಲಘಟಗಿ, ಅಳ್ನಾವರ, ಧಾರವಾಡ, ಮುಂಡಗೋಡ ಇತರ ಭಾಗದ ಕಬ್ಬು ಬೆಳೆಗಾರ ರೈತರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಹಶೀಲ್ದಾರ್ ಭೇಟಿ :- ಧರಣಿ ಸತ್ಯಾಗ್ರಹವು 23ನೇ ದಿನಕ್ಕೆ ಕಾಲಿಟ್ಟ ಮಂಗಳವಾರದಂದು ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಪ್ರತಿಭಟನಾ ನೀರತ ರೈತರನ್ನು ಭೇಟಿಯಾಗಿ ಧರಣಿ ಸತ್ಯಾಗ್ರಹ ಅಂತ್ಯಗೊಳಿಸುವಂತೆ ಮನವಿ ಮಾಡಿದರು. ಎಫ್ಆರ್ಪಿ ಪ್ರಕಾರ ರೈತರಿಗೆ ಹಣ ನೀಡಲಾಗಿದೆ ಎಂದು ಹೇಳಿದ ತಹಶೀಲ್ದಾರ್ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾವು ರೈತರನ್ನು ಭೇಟಿಯಾಗುತ್ತಿರುವುದಾಗಿ ತಿಳಿಸಿದ ಅವರು ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಕಬ್ಬಿನ ಬಾಕಿ ಬಿಲ್ 305ರೂ. ನೀಡುತ್ತೇವೆಂದು ಕರಪತ್ರಗಳನ್ನು ಹಂಚಿದ ಕಾರ್ಖಾನೆಯವರು ಈ ಸಾಲಿಗೆ ನುರಿಸಲು ರೈತರಿಂದ ಕಬ್ಬು ಪಡೆದು ಈಗ ಬಾಕಿ ಹಣ ನೀಡುವುದಿಲ್ಲ ಎಂದು ಹೇಳುವ ಮೂಲಕ ರೈತರಿಗೆ ಬಹಿರಂಗ ಮೋಸ ಮಾಡಿದ್ದಾರೆ. ಈ ಬಗ್ಗೆ ಕಂಪೆನಿಯು ರೈತರಿಗೆ ಮೋಸ ಮಾಡಿರುವ ಕುರಿತು ಕ್ರಿಮಿನಲ್ ಮೊಕದ್ದಮೇ ಹೂಡುವುದಾಗಿ ಹೇಳಿದರು. ಅಲ್ಲದೇ ಎಫ್ಆರ್ಪಿ ಪ್ರಕಾರ ರೈತರಿಗೆ ಬಿಲ್ ಸಂದಾಯವಾಗಿಲ್ಲ ಎಂದು ಆರೋಪಿಸಿದರು.
ಕಬ್ಬು ಬೆಳೆಗಾರ ಸಂಘದ ರಾಜ್ಯ ಉಪಾಧ್ಯಕ್ಷ ಎಮ್ವಿ ಘಾಡಿ ಮಾತನಾಡಿ ಈಗಾಗಲೇ 2016-17ನೇ ಸಾಲಿನ 305ರೂ. ಬಾಕಿ ನೀಡದೆ ರೈತರಿಗೆ ಕಾರ್ಖಾನೆ ಮಾಡಿದ ಮೊಸದ ಬಗ್ಗೆ ಸಕ್ಕರೆ ಸಚಿವ ಕೆಜೆ ಜಾರ್ಜ ಹಾಗೂ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದೆ. ಅಲ್ಲದೇ ಅವರು ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಿದ್ದಾರೆ ಆದರೇ ಈವರೆಗೆ ಯಾವುದೇ ಫಲಶ್ರುತಿ ಕಂಡು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು ರೈತರ ಬೇಡಿಕೆ ಈಡೇರದೆ ಇದ್ದರೇ ಬೆಂಗಳೂರಿನ ಸಿಎಂ ಕಚೇರಿ ಹಾಗೂ ಹಳಿಯಾಳದಲ್ಲಿ 2 ಕಡೆಗಳಲ್ಲಿ ಸಾವಿರಾರು ರೈತರಿಂದ ಏಕಕಾಲದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ ಬೋಬಾಟಿ, ಅಶೋಕ ಮೇಟಿ, ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಇದ್ದರು.
Leave a Comment