ಹಳಿಯಾಳ:- 2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ ಹಳಿಯಾಳ ಕಬ್ಬು ಬೆಳೆಗಾರರು ಕಳೆದ 28 ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ಕಾರ್ಖಾನೆಯಾಗಲಿ ಅಥವಾ ಜಿಲ್ಲಾಡಳಿತವಾಗಲಿ ಸ್ಪಂದಿಸದೆ ಇರುವುದರಿಂದ ಸಪ್ಟೆಂಬರ್ ದಿ.5 ಬುಧವಾರದಂದು ಹಳಿಯಾಳ ಬಂದ್ ನಡೆಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ಹಳಿಯಾಳ ತಾಲೂಕಾಧ್ಯಕ್ಷ ಶಂಕರ ಕಾಜಗಾರ ಹೇಳಿದರು.
ಪಟ್ಟಣದ ಹೊರವಲಯದ ಹುಲ್ಲಟ್ಟಿ ಪ್ರದೇಶದಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಎದುರು ಆಗಸ್ಟ ದಿ.6ರಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹದ ವೇದಿಕೆಯಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಾ, ಹಳಿಯಾಳ ಬಂದ್ ಕರೆ ನೀಡಿರುವ ವಿಷಯ ತಿಳಿಸಿದರು.
ರೈತರ ತಾಳ್ಮೆಯ ಕಟ್ಟೆ ಒಡೆದಿದೆ. ದೇಶದ ಬೆನ್ನೆಲುಬಾಗಿರುವ ರೈತರ ಬಗ್ಗೆ ಕಾರ್ಖಾನೆ, ಜನಪ್ರತಿನಿಧಿಗಳು, ಸಚಿವ ಆರ್.ವಿ.ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ತಾಲೂಕಾಡಳಿತ ಹಾಗೂ ಜಿಲ್ಲಾಡಳಿತಕ್ಕೆ ಕನಿಕರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಇನ್ನೂ ಮುಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಕಚೇರಿ ಎದುರು ಕೂಡ ಹೋರಾಟ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದರು.
ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಳಿಯಾಳ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವ್ಯಾಪ್ತಿಯ ಹಳಿಯಾಳ, ಕಲಘಟಗಿ, ಅಳ್ನಾವರ, ಧಾರವಾಡ, ಮುಂಡಗೋಡ, ಹುಬ್ಬಳ್ಳಿ, ಖಾನಾಪೂರ ಇತರ ಭಾಗದ ರೈತರು ಪ್ರತಿದಿನ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಕ್ಕರೆ ಸಚಿವ ಕೆಜೆ ಜಾರ್ಜ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದರು ಈವರೆಗೆ ಯಾವುದೇ ಪ್ರತಿಕ್ರಿಯೇ ಬಾರದೆ ಇರುವುದರಿಂದ ಅನಿವಾರ್ಯವಾಗಿ ಹಳಿಯಾಳ ಬಂದ್ ಕರೆ ನೀಡಲಾಗುತ್ತಿದೆ ಎಂದು ಕಾಜಗಾರ ಹೇಳಿದರು.
ಕಳೆದ 28 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಪ್ರತಿದಿನ 2 ಹಳ್ಳಿಗಳ ರೈತರು ಭಾಗವಹಿಸುತ್ತಿದ್ದಾರೆ. ಸ್ಥಳದಲ್ಲಿಯೇ ಅಡುಗೆ ಮಾಡಲಾಗುತ್ತಿದೆ ಹಾಗೂ ಭಜನೆಯ ಮೂಲಕ ಹೋರಾಟದ, ಜಾನಪದ ಹಾಡುಗಳನ್ನು ಹಾಡುತ್ತಾ ಕಾರ್ಖಾನೆ ಹಾಗೂ ಜನಪ್ರತಿನಿಧಿಗಳನ್ನು ಅಣಕಿಸಲಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಸುದ್ದಿಗೊಷ್ಠಿಯಲ್ಲಿ ಕಬ್ಬು ಬೆಳೆಗಾರ ಸಂಘದ ರಾಜ್ಯ ಉಪಾಧ್ಯಕ್ಷ ಎಮ್ವಿ ಘಾಡಿ, ಮುಖಂಡರಾದ ಕುಮಾರ ಬೋಬಾಟಿ, ಅಶೋಕ ಮೇಟಿ, ಯು.ಕೆ ಬೋಬಾಟಿ, ಎಸ್ಕೆ ಗೌಡಾ, ಬನವಣ್ಣವರ ಇತರರು ಇದ್ದರು.
Leave a Comment