ಹಳಿಯಾಳ:- ಮುಖ್ಯಮಂತ್ರಿಯವರನ್ನು ಹೊಂದಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಪಕ್ಷವು ಹಳಿಯಾಳ ಭಾಗದಲ್ಲಿ ಹೀನಾಯ ಸ್ಥಿತಿಗೆ ಬಂದು ತಲುಪಿದೆ ಎನ್ನುವುದು ಪುರಸಭೆ ಚುನಾವಣೆಯಲ್ಲಿ ಮತ್ತೋಮ್ಮೆ ಸಾಬೀತಾಗಿದೆ.
ಈ ಬಾರಿಯ ಪುರಸಭೆ ಚುನಾವಣೆಯಲ್ಲಿ 14,166 ಜನ ಮತದಾನ ಮಾಡಿದ್ದರು.ದಿ.3ರ ಫಲಿತಾಂಶದ ಬಳಿಕ ಯಾವ ಪಕ್ಷ ಎಷ್ಟು ಮತ ಪಡೆದಿದೆ ಎಂಬ ಲೆಕ್ಕಾಚಾರ ಹಾಕಿದರೇ ಕಾಂಗ್ರೇಸ್ ಪಕ್ಷ 7074, ಬಿಜೆಪಿ-5505, ಜೆಡಿಎಸ್-826, ಪಕ್ಷೇತರರು-632 ಹಾಗೂ 129ಮತ ನೋಟಾಕ್ಕೆ ಚಲಾವಣೆಯಾಗಿವೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಹಳಿಯಾಳ ಪಟ್ಟಣದಲ್ಲಿ 7601 ಮತಗಳನ್ನು ಪಡೆದಿದ್ದ ಕಾಂಗ್ರೇಸ್ ಪಕ್ಷ ಪುರಸಭೆಯಲ್ಲಿ 7074 ಅಂದರೇ 527 ಕಡಿಮೆ ಮತ ಹಾಗೂ 5301 ಮತಗಳಿಸಿದ್ದ ಬಿಜೆಪಿ ಪಕ್ಷ ಪುರ ಚುನಾವಣೆಯಲ್ಲಿ 5505 ಪಡೆದು 204 ಹೆಚ್ಚು ಮತಗಳಿಸಿ ತನ್ನ ಮತಬ್ಯಾಂಕನಲ್ಲಿ ಕೊಂಚ ಹೆಚ್ಚಳವನ್ನು ಕಂಡಿದೆ.ಸ
ಆದರೇ ಜೆಡಿಎಸ್ ಪಕ್ಷ ಪಟ್ಟಣದಲ್ಲಿ ಕೇವಲ 826 ಮತಗಳನ್ನು ಮಾತ್ರ ಪಡೆದಿದೆ. ಸಾವಿರದ ಸನಿಹಕ್ಕೂ ಹೋಗದ ಜೆಡಿಎಸ್ ಪಕ್ಷವನ್ನು ಹಳಿಯಾಳ ಭಾಗದಲ್ಲಿ ಮತದಾರರು ಸಂಪೂರ್ಣವಾಗಿ ತೀರಸ್ಕರಿಸಿದ್ದಾರೆಯೇ ಎಂಬ ಬಗ್ಗೆ ತೀವೃ ಚರ್ಚೆಗಳು ನಡೆಯುತ್ತಿವೆ.
ಬೆಂಗಳೂರಿನ ಉದ್ಯಮಿ ಕೆ.ಆರ್.ರಮೇಶ ಸಾರಥ್ಯದಲ್ಲಿ ಅವರೇ ಅಭ್ಯರ್ಥಿಯಾಗಿ ಹಳಿಯಾಳ-ಜೋಯಿಡಾ ಕ್ಷೇತ್ರದ 2018ರ ವಿಧಾನಸಭಾ ಚುನಾವಣೆ ಎದುರಿಸಿದ್ದ ಠೇವಣಿ ಕಳೆದುಕೊಂಡಿದ್ದ ಜೆಡಿಎಸ್ ಪಕ್ಷ ಆ ಸಂದರ್ಭದಲ್ಲೂ ಪಟ್ಟಣದಲ್ಲಿ 1ಸಾವಿರ ಆಸುಪಾಸಿನಲ್ಲಿ ಮತ ಗಳಿಸಿತ್ತು.
ಜೆಡಿಎಸ್ ಪಕ್ಷದ ಹಳಿಯಾಳ ಭಾಗದ ಮುಖಂಡರಾದ ಕೈತಾನ ಬಾರಬೋಜಾ, ದಾಂಡೇಲಿಯ ಟಿ.ಆರ್.ಚಂದ್ರಶೇಖರ, ಯು.ಕೆ.ಬೋಬಾಟಿ, ಕುಮಾರ ಬೋಬಾಟಿ ಇತರ ಪ್ರಮುಖ ಮುಖಂಡರನ್ನು ಕಡೆಗಣಿಸಿ ತನ್ನದೇ ಕಾರ್ಯಭಾರ ಮಾಡುತ್ತಾ, ತನ್ನ ಹಿಡಿತದಲ್ಲೇ ಪಕ್ಷ ಇರಬೇಕೆಂದು ಪ್ರಾಬಲ್ಯ ಸಾದಿಸುತ್ತಾ ಸಾಗಿದ್ದ ಕೆ.ಆರ್.ರಮೇಶಗೆ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಮುಖಭಂಗವೇನೋ ಆಯಿತು. ಆದರೇ ನಾನು ಚುನಾವಣೆ ಸ್ಪರ್ದಿಸಲು ಹಳಿಯಾಳಕ್ಕೆ ಬಂದಿಲ್ಲ ಈ ಭಾಗದ ಜನತೆಯ ಉದ್ದಾರಕ್ಕೆ ಬಂದಿದ್ದೇನೆ ಇಲ್ಲೇ ಇದ್ದು ನಿಮ್ಮ ಸೇವೆ ಮಾಡುತ್ತೇನೆ ಎಂದು ಬೊಬ್ಬೆ ಇಡುತ್ತಿದ್ದ ರಮೇಶ, ಚುನಾವಣೆಯ ಬಳಿಕ ಈವರೆಗೆ ಹಳಿಯಾಳ ಭಾಗದಲ್ಲಿ ಕಾಣಿಸದೆ ಇರುವುದು ಜೆಡಿಎಸ್ ಕಾರ್ಯಕರ್ತರು ಹಾಗೂ ಮತದಾರರಿಗೂ ಅವರ ನಿಲುವು ಇಷ್ಟವಾಗದೇ ಜೆಡಿಎಸ್ ಪಕ್ಷವನ್ನೇ ತೀರಸ್ಕರಿದ್ದಾರೆ ಎನ್ನುವ ಬಗ್ಗೆ ಹಳಿಯಾಳ ಭಾಗದಲ್ಲಿ ತೀವೃ ಚರ್ಚೆಯಾಗುತ್ತಿದೆ.
ಈ ಹಿಂದಿನ ಕಳೆದ 2 ಚುನಾವಣೆಗಳಲ್ಲೂ ಹೀಗೆಯೇ ಹಲವರು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಣಿಸಿಕೊಂಡು. ಸೋಲುಂಡ ಬಳಿಕ ನಾಪತ್ತೆಯಾಗುವುದನ್ನು ಮನಗೊಂಡಿರುವ ಹಳಿಯಾಳ ಕ್ಷೇತ್ರದ ಜನತೆ ಸ್ವಕ್ಷೇತ್ರದವರನ್ನು ಮಾತ್ರ ನೆಚ್ಚಿಕೊಂಡಿದ್ದಾರೆಂಬುದು ಈ ಚುನಾವಣೆಯಲ್ಲಿ ಮತ್ತೋಮ್ಮೆ ಸಾಬೀತಾಗಿದೆ.
Leave a Comment