ಹಳಿಯಾಳ : ಶೈಕ್ಷಣಿಕ ಅಭಿವೃದ್ದಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರ ಬಿಟ್ಟು ಇನ್ನಿತರ ಕೆಲಸಗಳಿಗೆ ನಿಯೋಜನೆ ಮಾಡದಂತೆ ಸರ್ಕಾರವು ಸುತ್ತೊಲೆ ಹೊರಡಿಸಬೇಕಿದೆ. ಅಂದಾಗ ಮಾತ್ರ ಶಿಕ್ಷಕರು ಒತ್ತಡದ ಕೆಲಸಗಳಿಂದ ಬಿಡುಗಡೆಯಾಗಿ ಉತ್ತಮ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಹೇಳಿದರು.
ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನೋತ್ಸವ ಆಚರಣಾ ಸಮಿತಿ, ತಾಲೂಕಾ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಸಮಾಜದ ಅಭಿವೃದ್ದಿಯಲ್ಲಿ ತಮ್ಮದೇ ಕೂಡುಗೆಯನ್ನು ನೀಡುತ್ತಿದ್ದಾರೆ. ಸರ್ಕಾರ ಹೆಚ್ಚಿನ ಸೌಲಭ್ಯಗಳನ್ನು ಶಿಕ್ಷಕರಿಗೆ ನೀಡಲು ಮುಂದಾಗಬೇಕಾಗಿದೆ ಎಂದರು. ಪಟ್ಟಣದಲ್ಲಿ ನಿರ್ಮಿಸುತ್ತಿರುವ ಗುರುಭವನದ ನಿರ್ಮಾಣಕ್ಕಾಗಿ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಒಟ್ಟೂ 7 ಲಕ್ಷರೂಗಳನ್ನು ಮಂಜೂರು ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಸೂಕ್ತ ದಾಖಲೆಗಳನ್ನು ನೀಡಿ ಅನುದಾನವನ್ನು ಖಾತೆಗೆ ಜಮೆ ಮಾಡಿಕೊಳ್ಳುವಂತೆ ಶಿಕ್ಷಕರಿಗೆ ಘೋಟ್ನೇಕರ ತಿಳಿಸಿದರು.
ಶಿಕ್ಷಕರ ವರ್ಗಾವಣೆ, ನೂತನ ಎನ್.ಪಿ.ಎಸ್ ಯೋಜನೆಯ ಪರಿಷ್ಕರಣೆ, ಬಡ್ತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ವಿಧಾನ ಪರಿಷತ್ನಲ್ಲಿ ಚರ್ಚೆಗೆ ಬರುವಂತೆ ಮಾಡಿ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ಉತ್ತಮ ಶಿಕ್ಷಕರಾದ ಸಿದ್ದಪ್ಪಾ ಬೀರಾದಾರ ಮತ್ತು ಶಾಲೆಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಸಂಘದಿಂದ ಕೊಡಗು ಪರಿಹಾರ ನಿಧಿಗೆ 8 ಸಾವಿರ ರೂ ಮೌಲ್ಯದ ಚೆಕ್ನ್ನು ತಹಶೀಲದಾರ ಅವರಿಗೆ ಹಸ್ತಾಂತರಿಸಲಾಯಿತು. ಶಿಕ್ಷಕರ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ವಿಪ ಸದಸ್ಯ ಘೋಟ್ನೆಕರ ಅವರಿಗೆ ಸಲ್ಲಿಸಿದರು. ನಿವೃತ್ತ ಪ್ರಾಶುಂಪಾಲ ಬೀರಣ್ಣ ನಾಯ್ಕ ಮೊಗಟಾ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾರಂಭದಲ್ಲಿ ತಾಪಂ ಅಧ್ಯಕ್ಷೆ ರೀಟಾ ಸಿದ್ದಿ, ಜಿಪಂ ಸದಸ್ಯ ಕೃಷ್ಣಾ ಪಾಟೀಲ್, ತಹಶೀಲದಾರ ವಿಧ್ಯಾದರ ಗುಳಗುಳಿ, ತಾಪಂ ಅಧಿಕಾರ ಡಾ. ಮಹೇಶ ಕುರಿಯವರ, ಬಿಇಒ ಸಮೀರಅಹ್ಮದ ಮುಲ್ಲಾ, ಪುರಸಭಾ ಸದಸ್ಯ ಅನೀಲ ಚವ್ಹಾಣ, ಬಿಆರ್ಸಿ ಪ್ರಸನ್ನ ಗಾಂವಕರ, ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷ ಸತೀಶ ನಾಯ್ಕ ಭಾವಿಕೇರಿ, ಪ್ರೌಢಾ ಶಾಲಾ ಸಂಘದ ವಿಠ್ಠಲ್ ಬಿ. ಇದ್ದರು.
ಪೋಟೋ : 6 ಎಚ್.ಎಲ್.ವೈ 1 ಹಳಿಯಾಳ:- ವಿಶೇಷ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದ ಶಿಕ್ಷಕರಿಗೆ ಗುರುಶ್ರೀ ಪ್ರಶಸ್ತಿಗಳನ್ನು ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ವಿತರಿಸಿದರು.
Leave a Comment