ಹಳಿಯಾಳ:- ಬಾಬಾ ಅಮ್ಟೆಯವರು ತಮ್ಮ ಜೀವನದುದ್ದಕ್ಕೂ ಸಾರಿದ ಮಾನವತೆಯ ಧರ್ಮವನ್ನು ಸಾರುವುದು ನನ್ನ ಜೀವನದ ಗುರಿ ಹಾಗೂ ಉದ್ದೇಶವಾಗಿದ್ದು ಕಳೆದ 45 ವರ್ಷಗಳಿಂದ ಸಮಾಜ ಸೇವೆಯನ್ನು ಮಾಡುತ್ತಿದ್ದೆನೆ. ಸಮಾಜಕ್ಕಾಗಿ ಜೀವನ ಮುಡುಪಾಗಿಟ್ಟಿದ್ದಾಗಿ ಖ್ಯಾತ ಸಾಮಾಜಿಕ ಸೇವಾ ಕಾರ್ಯಕರ್ತ ಡಾ.ಪ್ರಕಾಶ ಬಾಬಾ ಅಮ್ಟೆ ಹೇಳಿದರು.
ಹಳಿಯಾಳದ ರುಡಸೆಟ್ಗೆ ಭೇಟಿ ನೀಡಿದ ಅವರು ತಮ್ಮ ವಿಚಾರಗಳನ್ನು ತೆರೆದಿಟ್ಟರು. ಬಾಬಾ ಅಮ್ಟೆಯವರ ಬಳಿ ಎಲ್ಲ ಧರ್ಮದ ಹಾಗೂ ಎಲ್ಲ ಪಕ್ಷಗಳ ಜನ ಭೇಟಿ ನೀಡುತ್ತಿದ್ದರು. ಆದರೆ ಬಾಬಾರವರು ಯಾವುದೇ ಪಕ್ಷದ, ರಾಜಕಾರಣದ ಲೇಬಲ್ ಹಚ್ಚಿಕೊಳ್ಳದೇ ಸಮಾಜಸೇವೆಯನ್ನು ಮುಂದುವರೆಸಿದರು. ಹೀಗಾಗಿ ಸಮಾಜಸೇವೆಗೆ ಯಾವುದೇ ಲೇಬಲ್ ಅವಶ್ಯಕತೆ ಇಲ್ಲ ಎಂಬುದನ್ನು ಅವರು ಸಾಬಿತು ಪಡಿಸಿದ್ದು. ತಂದೆ ಬಾಬಾ ಅವರು ಹಾಕಿ ಕೊಟ್ಟ ಸಂಸ್ಕಾರದಲ್ಲಿ ತಾವು ಬೆಳೆದಿದ್ದು ಸಮಾಜ ಸೇವೆಯೇ ತಮ್ಮ ಗುರಿ ಎಂದರು.
ನಾನು ಬದಲಾಗಬಹುದೇ ಎಂಬುದನ್ನು ನಾವು ಮೊದಲು ಅರಿಯಬೇಕು, ನಾವು ಬದಲಾಗಲು ಸಾಧ್ಯವಾಗುವದಾದರೇ ದೇಶದ ಬದಲಾವಣೆ ಸಾಧ್ಯ ಎಂದರು. ದೇಶದಲ್ಲಿ ಈಗ ಶಾಂತಿಯ ಅವಶ್ಯಕತೆಯಿದ್ದು, ಸದ್ಯದ ಸ್ಥಿತಿಯಲ್ಲಿ ಧರ್ಮದ ಹೆಸರಿನಲ್ಲಿ ವಿಂಗಡನೆ ನಡೆದಿರುವುದು ಖೇದಕರ ಎಂದರು.
ರಾಷ್ಟ್ರ ಹಾಗೂ ಸಮಾಜವನ್ನು ಬದಲಾಯಿಸಲು ಬಯಸುವರು ಮೊದಲು ತಾವು ಬದಲಾಗಬೇಕು ಆಗ ಮಾತ್ರ ನಮ್ಮ ದೇಶ ಹಾಗೂ ಸಮಾಜದ ಬದಲಾವಣೆ ಸಾಧ್ಯ ಎಂದು ಅಮ್ಟೆ ಅಭಿಪ್ರಾಯಪಟ್ಟರು.
ಪಟ್ಟಣದ ಉದ್ಯೋಗ ವಿದ್ಯಾನಗರದಲ್ಲಿರುವ ವಿ.ಆರ್.ಡಿ ಟ್ರಸ್ಟ್ಗೆ ಬೇಟಿ ನೀಡಿದ ಡಾ.ಪ್ರಕಾಶ ಅಮ್ಟೆ ಹಾಗೂ ಡಾ.ಮಂದಾಕಿನಿ ಪ್ರಕಾಶ ಅಮ್ಟೆ ದಂಪತಿಗಳು ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯಮ-ಕೌಶಲ ತರಬೇತಿಗಳನ್ನು ವೀಕ್ಷಿಸಿದರು.
ದೇಶಪಾಂಡೆ ಐ.ಟಿ.ಐ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಹಾಗೂ ವಿ.ವಿ.ಡಿ ಸ್ಕೂಲ್ ಆಪ್ ಎಕ್ಸಲೆನ್ಸ್ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಆವರಣದಲ್ಲಿ ಅಮ್ಟೆ ದಂಪತಿಗಳು ತಮ್ಮ ಭೇಟಿಯ ಸ್ಮರಣಾರ್ಥಕವಾಗಿ ಸಸಿಯನ್ನು ನೆಟ್ಟರು.
ವಿ.ಆರ್.ಡಿ.ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ರುಡ್ಸೆಟಿ ನಿರ್ದೇಶಕ ನಿತ್ಯಾನಂದ ವೈದ್ಯ, ಡಿ.ಐ.ವಿ.ಟಿ ಪ್ರಾಚಾರ್ಯ ದಿನೇಶ ನಾಯ್ಕ, ದೇಶಪಾಂಡೆ ಭವನದ ಎಸ್.ಜಿ.ಮಾನಗೆ, ದಾಂಡೇಲಿಯ ಡಾ.ಮೋಹನ ಪಾಟೀಲ ಇದ್ದರು.
Leave a Comment