ಹೊನ್ನಾವರ ಅರಣ್ಯ ವಿಭಾಗದಲ್ಲಿ ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಅಮೂಲ್ಯವಾದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕೆಚ್ಚೆದೆಯಿಂದ ಹೋರಾಡಿ ನೈಸರ್ಗಿಕ ಸಂಪತ್ತನ್ನು ಉಳಿಸಲು ಪ್ರಾಣ ತ್ಯಾಗÀ ಮಾಡಿದಂತಹ ಹುತಾತ್ಮರನ್ನು ಸ್ಮರಿಸುವ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
1730 ರ ಸಪ್ಟಂಬರ್ 11 ರಂದು ಜೋಧಪುರದ ಮಹಾರಾಜ ಅಭಯ ಸಿಂಗ್ ಇವನ ಸೈನಿಕರು ರಾಜನ ಹೊಸ ಅರಮನೆಗೆ ಅವಶ್ಯವಿದ್ದ ಕೇಜರ್ಲಿ ಮರಗಳನ್ನು ಕಡಿಯಲು ಪ್ರಾರಂಭಿಸಿದಾಗ ಇದನ್ನು ವಿರೋಧಿಸಿ ಬಿಷ್ಣೋಯಿ ಸಮುದಾಯದ 363 ಪುರುಷರು ಮಹಿಳೆಯರು ಮತ್ತು ಮಕ್ಕಳನ್ನು ಸೈನಿಕರು ಕೊಂದು ಹಾಕಿದ್ದರು. ಮರಗಳ ಸಂರಕ್ಷಣೆಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಬಿಷ್ಣೋಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ನಿರ್ದೇಶನದ ಮೇರೆಗೆ ಸಪ್ಟಂಬರ 11 ರಂದು ರಾಷ್ಟೀಯ ಅರಣ್ಯ ಹುತಾತ್ಮರ ದಿನಾಚರಣೆಯೆಂದು ಘೋಷಿಸಿ ಆಚರಿಸಲಾಗುತ್ತಿದೆ.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದಂತ ಎಂ. ವಿ. ಚನ್ನಕೇಶವ ರೆಡ್ಡಿ ಇವರು ಮಾತನಾಡಿ, ಗಡಿಯಲ್ಲಿ ಹೇಗೆ ಸೈನಿಕರು ರಾಷ್ಟ್ರ ರಕ್ಷಣೆಯನ್ನು ಮಾಡುತ್ತಿದ್ದಾರೋ ಅದೇ ರೀತಿ ಅರಣ್ಯ ಪಡೆಯ ನೌಕರರು ದೇಶದ ಅಮೂಲ್ಯ ಸಂಪತ್ತನ್ನು ರಕ್ಷಣೆ ಮಾಡುತ್ತಿದ್ದು ಅವರ ಸೇವೆ ಮತ್ತು ಬಲಿದಾನ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ವಸಂತರೆಡ್ಡಿ ಕೆ.ವಿ., ಭಾಅಸೇ, ರವರು ತಮ್ಮ ಮುಂಚೂಣಿ ಸಿಬ್ಬಂದಿಗಳ ನಿಸ್ವಾರ್ಥ ಹಾಗೂ ದೈರ್ಯಶೀಲ ಕಾರ್ಯಗಳು ಅಪಾಯಕ್ಕೆ ಒಳಗಾದ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಿ ಕಾಪಾಡಲು ನಮಗೆಲ್ಲ ಸ್ಫೂರ್ತಿದಾಯಕವಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ವೀರಪ್ಪನ್ನಿಂದ ಮೃತರಾದ ಪಿ. ಶ್ರೀನಿವಾಸ, ಭಾಅಸೇ, ಅರವಿಂದ ಹೆಗ್ಡೆ, ಶಿರಸಿ, ಎಂ.ಎಚ್ ನಾಯ್ಕ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ದಾಂಡೇಲಿ, ಎಸ್. ಮಣಿಕಂದನ್, ಭಾಅಸೇ, ನಾಗರಹೊಳೆ, ರವರನ್ನು ಸೇರಿದಂತೆ 1966 ರಿಂದ ಈವರೆಗೆ ಅರಣ್ಯ ಇಲಾಖೆಯಲ್ಲಿ ಹುತಾತ್ಮರಾದ ಸಿಬ್ಬಂದಿಗಳಿಗೆ ಹುತಾತ್ಮರ ಸ್ಮಾರಕದ ಬಳಿ ವಿವಿಧ ವೃಂದದ ನೌಕರರ ಪ್ರತಿನಿಧಿಗಳಿಂದ ಗೌರವಾರ್ಪಣೆ ನಡೆಯಿತು.
ಹೊನ್ನಾವರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರವೀಣ ಬಸ್ರೂರು ರವರು ಪ್ರಾಸ್ಥಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ವಲಯ ಅರಣ್ಯಾಧಿಕಾರಿಗಳಾದ ಪಿ.ಸಿ. ರವೀಂದ್ರ ರವರು ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
Leave a Comment