ಹಳಿಯಾಳ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮೀತಿ(ಎಪಿಎಂಸಿ)ಯಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದಂತೆ 2018-19ನೇ ಸಾಲಿನ ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಹಳಿಯಾಳ ಬಿಜೆಪಿ ಘಟಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಆಗ್ರಹಿಸಿದೆ.
ಬಿಜೆಪಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದಲ್ಲಿ ಮಿನಿ ವಿಧಾನಸೌಧಕ್ಕೆ ಆಗಮಿಸಿದ ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಮನವಿಯಲ್ಲಿ ಸ್ಥಳೀಯ ಎಪಿಎಂಸಿ ಮಾರುಕಟ್ಟೆಯಲ್ಲಿ ತಾಲೂಕಿನ ರೈತರಿಗೆ ಆಗುತ್ತಿರುವ ಶೋಷಣೆಯನ್ನು ತಡೆಗಟ್ಟುವ ಮೂಲಕ ರೈತರಿಗೆ ಶಿಘ್ರವಾಗಿ ಕೇಂದ್ರ ಸರ್ಕಾರದ ಆದೇಶದಂತೆ ಮೆಕ್ಕೆಜೋಳದ ಖರೀದಿ ಕೇಂದ್ರ ಪ್ರಾರಂಭಿಸಬೇಕು. ಈ ವರ್ಷ ಸ್ಥಳೀಯ ದಲ್ಲಾಳಿಗಳಿಂದ ರೈತರಿಗೆ ಸೂಕ್ತವಾದ ಬೆಲೆ ಸಿಗುವುದು ಕಷ್ಟಕರವಾಗಿದ್ದು ಕೇವಲ ಪ್ರತಿ ಕ್ವಿಂಟಲ್ಗೆ 1200ರಿಂದ 1300ರವರೆಗೆ ಖರೀದಿ ಮಾಡುತ್ತಿದ್ದರಿಂದ ತಾಲೂಕಿನಲ್ಲಿ ರೈತರು ಬೆಳೆದ ಬೆಳೆಗಳಿಗೆ ಯೋಗ್ಯವಾದ ಬೆಲೆ ಸಿಗುವಂತೆ ಮಾಡಲು ಕೂಡಲೇ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿದ್ದಾರೆ.
ಇನ್ನೂ ಮುಂದಿನ ಕೆಲವು ದಿನಗಳಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭವಾಗಲಿದ್ದು, ರೈತರಿಗೆ ಸಿಗಬೇಕಿದ್ದ, ಬಾಕಿ ಮೊತ್ತ ರೈತರ ಖಾತೆಗೆ ಜಮಾ ಮಾಡುವಂತೆಯೂ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಪುರಸಭೆ ನೂತನ ಸದಸ್ಯರಾದ ಸಂತೋಷ ಘಟಕಾಂಭ್ಳೆ, ಉದಯ ಹೂಲಿ, ಚಂದ್ರಕಾಂತ ಕಮ್ಮಾರ, ಮುಖಂಡರಾದ ನಾರಾಯಣ ಬೆಳಗಾಂವಕರ, ಗಣಪತಿ ಕರಂಜೆಕರ, ಸಂತಾನ ಸಾವಂತ, ಶಂಕರ ಗಳಗಿ, ರೈತ ಮೊರ್ಚಾ ಅಧ್ಯಕ್ಷ ಸಾತುರಿ ಗೊಡಿಮನಿ, ವಾಸುದೇವ ಪೂಜಾರಿ ಯಲ್ಲಪ್ಪಾ ಹೊನ್ನಜೀ ಇದ್ದರು.
Leave a Comment