ಹೊನ್ನಾವರ : ಪಟ್ಟಣದಲ್ಲಿ ಹಾದು ಹೋಗುವ ಚತುಷ್ಪದ ಹೆದ್ದಾರಿಗೆ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಜಾಗೃತ ಹೊನ್ನಾವರ ಸಂಘಟನೆಯೊಂದಿಗೆ ತಾಲೂಕಿನ ವಿವಿಧ ಸಂಘಟನೆಗಳು ಸರ್ಕಾರಕ್ಕೆ ಮನವಿ ನೀಡಿತು.
ಮನವಿ ಸ್ವೀಕರಿಸಿದ ತಹಶೀಲ್ದಾರ ವಿ.ಆರ್. ಗೌಡ ಸರ್ಕಾರಕ್ಕೆ ಮನವಿ ರವಾನಿಸಿ ಕೆಲವೇ ದಿನದಲ್ಲಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಗುತ್ತಿಗೆ ಕಂಪನಿಯ ಉಪಸ್ಥಿತಿಯಲ್ಲಿ ಸಾರ್ವಜನಿಕ ಸಂಘಟನೆಯ ಪದಾಧಿಕಾರಿಗಳ ಜೊತೆ ಸಭೆ ನಡೆಸುವದಾಗಿ ಭರವಸೆ ನೀಡಿದರು.
ಜಾಗೃತ ಹೊನ್ನಾವರ ಸಂಘಟನೆಯ ಮುಖ್ಯಸ್ಥ ಎಮ್.ಎನ್. ಸುಬ್ರಹ್ಮಣ್ಯ ಮಾತನಾಡಿ ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ಸ್ಪಷ್ಟ ಚಿತ್ರಣವನ್ನು ಗುತ್ತಿಗೆ ಕಂಪನಿ ಜನರಿಗೆ ನೀಡುತ್ತಿಲ್ಲ. ಪಟ್ಟಣದಲ್ಲಿ ರಸ್ತೆ ಅಗಲ ಎಷ್ಟು ಎನ್ನುವುದನ್ನು ಹೇಳುತ್ತಿಲ್ಲ. ಜನ ಮತ್ತು ವಾಹನ ಸಂಚಾರದ ಒತ್ತಡವನ್ನು ಆದರಿಸಿ ಮೇಲ್ಸೇತುವೆ ನಿರ್ಮಿಸಲು ಮಣ ್ಣನ ಪರೀಕ್ಷೆ ಕೂಡ ಈ ಹಿಂದೆ ಮಾಡಿ ಮೇಲ್ಸೇತುವೆ ನಿರ್ಮಿಸಲು ಯೋಗ್ಯ ಎಂದು ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಇತ್ತಿಚಿನ ದಿನದಲ್ಲಿ ಮೇಲ್ಸೇತುವೆಯನ್ನು ಕೈ ಬಿಡಲಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ದುಗುಡಕ್ಕೆ ಕಾರಣವಾಗಿದೆ. ಭವಿಷ್ಯದ ಹೊನ್ನಾವರದ ಅಭಿವೃದ್ಧಿಯನ್ನು ಅನುರಕ್ಷಿಸಿ ಮೇಲ್ಸೇತುವೆ ಅನಿವಾರ್ಯ ಎಂದರು.
ಎನ್.ಇ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದ್ಯಮ ಜೆ.ಟಿ. ಪೈ ಮಾತನಾಡಿ ಅವೈಜ್ಞಾನಿಕವಾಗಿ ಪಟ್ಟಣದಲ್ಲಿ ರಸ್ತೆ ನಿರ್ಮಿಸಿದರೆ ಅದು ಜನರಿಗೆ ಮಾರಕವಾಗುತ್ತದೆ. ತಾಲೂಕಿನ ಅಭಿವೃದ್ಧಿ ಕುಂಠಿತಾಗುತ್ತದೆ. ಮೇಲ್ಸೇತುವೆ ರಚನೆ ಅವಶ್ಯ ಎಂದರು.
ಕನ್ನಡ ಅಭಿಮಾನಿ ಸಂಘಟನೆಗಳ ಮುಖ್ಯಸ್ಥ ಸತ್ಯಾ ಜಾವಗಲ್ ಮಾತನಾಡಿ 15 ದಿವಸಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮೇಲ್ಸೇತುವೆ ಮತ್ತು ಕಾಮಗಾರಿಯ ವಿವರವನ್ನು ನೀಡದೇ ಇದ್ದಲ್ಲಿ. ತಾಲೂಕಿನ ನಾಗರಿಕರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದರು.
ಕರ್ನಾಟಕ ರಕ್ಷಣಾ ವೇದಿಕೆಯ ಉದಯರಾಜ್ ಮೇಸ್ತ, ರೋಟರಿ ಸಂಸ್ಥೆಯ ರಾಜು ಮಳಗಿಮನೆ, ನಸ್ರುಲ್ಲಾ, ಲಯನ್ಸ್ ಸಂಸ್ಥೆಯ ರಾಜೇಸ್ ಸಾಲೇಹಿತ್ತಲ್, ಶೇಖರ ನಾಯ್ಕ, ನಮ್ಮ ಕರ್ನಾಟಕ ರಕ್ಷಣೆಯ ವೇದಿಕೆಯ ಜಿಲ್ಲಾಧ್ಯಕ್ಷ ಉದಯ ಶಿವಾ ನಾಯ್ಕ, ಸುಧಾಕರ ಹೊನ್ನಾವರ, ಶೇಖರ ವಗ್ಗಾರ, ಹೊನ್ನಾವರ ವಕೀಲರ ಸಂಘದ ಅಧ್ಯಕ್ಷ ಕೆ.ವಿ.ನಾಯ್ಕ, ಕಾರ್ಯದರ್ಶಿ ಸೂರಜ ನಾಯ್ಕ, ವಕೀಲರಾದ ಸಂಜು ಕಾಮತ, ನಾಗರಾಜ ಕಾಮತ, ಟೆಂಪೋ ಮಾಲಕ ಚಾಲಕರ ಸಂಘದ ಸಿರಿ ನಾಯ್ಕ ಖರ್ವಾ, ಗಣಪತಿ ನಾಯ್ಕ ಹಡಿನಬಾಳ, ಆಟೋ ಚಾಲಕರ ಸಂಘದ ಜೆ.ಎಸ್. ಡಿಸೋಜಾ, ಕಾರ್ಮಿಕ ಸಂಘಟನೆಯ ಕೇಶವ ತಾಂಡೇಲ್, ಶ್ರೀಕಾಂತ ಮೇಸ್ತ, ಮೀನುಗಾರ ಸಂಘಟನೆಯ ಗಣಪತಿ ತಾಂಡೇಲ್, ಛಾಯಾ ಗ್ರಾಹಕ ಸಂಘಟನೆಯ ಸುರೇಶ ಹೊನ್ನಾವರ, ಯುವ ಬ್ರಿಗೇಡನ ರಾಘು ಮೇಸ್ತ, ಬಿ.ಜೆ.ಪಿ. ಪಕ್ಷದ ವಿಘ್ನೇಶ್ ಚಿಟ್ಟಾಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ, ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಇನ್ನಿತರರು ಉಪಸ್ಥಿತರಿದ್ದರು.
Leave a Comment