ಹೊನ್ನಾವರ
ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಬರುವ ಶರಾವತಿ ನದಿಯಲ್ಲಿಯ ಮರಳು ಸಂಗ್ರಹಿಸುವ ಪರವಾನಿಗೆಯನ್ನು ಸಿ ಆರ್ ಝಡ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಾಂಪ್ರದಾಯಿಕ ಮರಳು ಕಸುಬುದಾರರಿಗೆ ನೀಡಬೇಕು ಎಂದು ತಾಲೂಕಿನ ಮಾವಿನಕುರ್ವಾ ಗ್ರಾಮದ ಸಿ ಆರ್ ಝಡ್ ವ್ಯಾಪ್ತಿಯ ಸಾಂಪ್ರದಾಯಿಕ ಮರಳು ಕಸುಬುದಾರರ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಎಸ್ಎಸ್ ನಕುಲ್ ಅವರಿಗೆ ಮನವಿ ನೀಡಿ ಆಗ್ರಹಿಸಿದೆ.
ಸಿ ಆರ್ ಝಡ್ ವ್ಯಾಪ್ತಿಯ ಹೊರಗಿನ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನು ಮರಳು ಸಂಗ್ರಹ ಕಾರ್ಯಕ್ಕೆ ನೇಮಿಸಿಕೊಳ್ಳುವುದಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದೆ.
ಸಿಆರ್ಝಡ್ ವ್ಯಾಪ್ತಿಯಲ್ಲಿರುವ ನದಿಗಳಲ್ಲಿ ಮರಳು ಸಂಗ್ರಹಿಸಲು ಕೊಡುವ ಪರವಾನಿಗೆಯನ್ನು ಸ್ಥಳೀಯ ಸಾಂಪ್ರದಾಯಿಕ ಮರಳು ಕಸುಬುದಾರರಿಗೆ ಕೊಡಬೇಕು ಎಂದು ಶರತ್ತಿನಲ್ಲಿ ಉಲ್ಲೇಖವಿದೆ. ಆದರೂ ಶರಾವತಿ ನದಿಯಲ್ಲಿ ಪರವಾನಿಗೆಯನ್ನು ಸಿ ಆರ್ ಝಡ್ ವ್ಯಾಪ್ತಿಯಲ್ಲಿರುವವರಿಗೆ ಕೊಡದೇ ಹೊರಗಿನವರಿಗೆ ಕೊಡಲಾಗುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.
ಈ ಪರವಾನಿಗೆದಾರರು ಸ್ಥಳೀಯ ಕಾರ್ಮಿಕರನ್ನು ಕಡೆಗಣಿಸಿ ಹೊರ ರಾಜ್ಯದ ಹಾಗೂ ಹೊರ ಜಿಲ್ಲೆಯ ಕಾರ್ಮಿಕರನ್ನು ಮರಳು ಸಂಗ್ರಹ ಕೆಲಸಕ್ಕೆ ನೇಮಿಸಿಕೊಂಡು ಸಿಆರ್ಝಡ್ ವ್ಯಾಪ್ತಿಯ ಸಾಂಪ್ರದಾಯಿಕ ಮರಳು ಕಸುಬುದಾರರಿಗೆ ಉದ್ಯೋಗ ವಂಚನೆ ಮಾಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.
ಈ ಬಗ್ಗೆ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಾಗೂ ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಲಾಗಿದ್ದರೂ ಪ್ರಯೋಜನ ಆಗಿಲ್ಲ ಎಂದು ಮನವಿಯಲ್ಲಿ ದೂರಿದ್ದಾರೆ.
ಪ್ರತಿ ವರ್ಷವೂ ಹಳೆಯ ಪರವಾನಿಗೆದಾರರಿಗೇ ಪರವಾನಿಗೆ ನೀಡುತ್ತಿದ್ದು ಸಾಂಪ್ರದಾಯಿಕ ಮರಳು ಕಸುಬುದಾರರು ಸಾಂಪ್ರದಾಯಿಕ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
ನ್ಯಾಯ ದೊರಕಿಸಿಕೊಡದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಸಮಿತಿಯ ಅಧ್ಯಕ್ಷ ಹರಿಶ್ಚಂದ್ರ ಗೋವಿಂದ ನಾಯ್ಕ, ಉಪಾಧ್ಯಕ್ಷ ಗೋಪಾಲಕೃಷ್ಣ ಭಟ್, ಕಾರ್ಯದರ್ಶಿ ಬಾಲಚಂದ್ರ ಶ್ಯಾನಭಾಗ, ಖಜಾಂಚಿ ಮಾದೇವ ಗೌಡ, ಮತ್ತಿತರರು ಮನವಿ ಸಲ್ಲಿಸಿದರು.
Leave a Comment