ಹಳಿಯಾಳ : ಧರ್ಮಜಾಗೃತಿ ಮತ್ತು ರಾಷ್ಟ್ರಪ್ರೇಮದ ಜಾಗರಣೆ ಸಲುವಾಗಿ ನವರಾತ್ರಿ ಉತ್ಸವದ 9ದಿನಗಳ ಕಾಲ ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆಯುವ ದುರ್ಗಾದೌಡ –ಧಾರ್ಮಿಕ ನಡಿಗೆ ವಿಶಿಷ್ಠ ಕಾರ್ಯಕ್ರಮಕ್ಕೆ ಬುಧವಾರ ಬೆಳಗಿನ ಜಾವ ಶ್ರೀ ಗಣೇಶ ಮಂದಿರದಲ್ಲಿ ಕೇಸರಿ ಭಗವಾಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಲಾನೆ ನೀಡಲಾಯಿತು.
ಪಕ್ಕದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲೇ ಆಚರಿಸಲ್ಪಡುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಳಿಯಾಳದ ಶಿವ ಪ್ರತಿಷ್ಠಾನ, ದುರ್ಗಾ ದೌಡ ಸಮಿತಿ ಹಾಗೂ ವಿವಿಧ ಹಿಂದೂ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಳಿಯಾಳದಲ್ಲಿಯೂ ನಡೆಯುತ್ತಿದ್ದು 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಕಾರ್ಯಕ್ರಮಕ್ಕೆ ಮಾಜಿ ಶಾಸಕ ಸುನೀಲ್ ಹೆಗಡೆ, ಶಿವ ಪ್ರತಿಷ್ಠಾನದ ಪ್ರಮುಖ ರಾಜು ಧೂಳಿ ಚಾಲನೆ ನೀಡಿದರು.
ಮೊದಲ ದಿನದ ದೌಡನಲ್ಲಿ ಹಿರಿಯರು, ಕಿರಿಯರು, ಮಹಿಳೆಯರು, ಮಕ್ಕಳು ಎನ್ನದೆ ಸುಮಾರು 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿ ಧಾರ್ಮಿಕ ನಡಿಗೆಯಲ್ಲಿನ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು. ಇಂದಿನಿಂದ ಬರುವ ದಿ.18 ರ ವರೆಗೆ ಪ್ರತಿದಿನ ಪಟ್ಟಣದ ಆಯಾ ಪ್ರದೇಶಗಳಲ್ಲಿ ಧಾರ್ಮಿಕ ನಡೆಗೆಯು ನಸುಕಿನ ಜಾವ 5.30 ರಿಂದ 8 ಗಂಟೆಯವರೆಗೆ ನಡೆಯಲಿದೆ. 2ನೇ ದಿನ ದಿ.11 ರಂದು ಪೋಲಿಸ್ ಲೈನ್ನಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ದುರ್ಗಾದೌಡ ಆರಂಭವಾಗಲಿದ್ದು ಸಿದ್ದರಾಮೇಶ್ವರ ದೇವಸ್ಥಾನಕ್ಕೆ ತಲುಪಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘಟಕ ಪ್ರಮುಖರಾದ ಪ್ರಸಾದ ಹುನ್ಸವಾಡಕರ, ಸಂತೋಷ ಘಟಕಾಂಬಳೆ, ಶ್ರೀನಿವಾಸ ದೊಡಮನಿ, ಸತ್ಯಜೀತ ಗಿರಿ, ಮಂಗಲಾ ಕಶೀಲ್ಕರ, ವಿಜಯ ಬೋಬಾಟಿ, ಶಾಂತಾ ಹಿರೇಕರ, ಆನಂದ ಕಂಚನಾಳಕರ, ತುಕಾರಾಮ ಪಟ್ಟೇಕರ, ಅನಿಲ ಮುತ್ನಾಳ, ಪ್ರಕಾಶ ಕೊನಪ್ಪನವರ, ಅಶೋಕ, ಸಂಜಯ ಪಾಟೀಲ, ಸಿದ್ದು, ಮಂಜು, ಪ್ರಶಾಂತ ಮೊದಲಾದವರು ಇದ್ದರು.
Leave a Comment