ಹಳಿಯಾಳ:- ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗವು ಅಕ್ಟೋಬರ್ ದಿ.13 ಮತ್ತು 14ರಂದು ಸತತ 24 ಗಂಟೆಗಳ ಸಮಯ ಮಿತಿಯಲ್ಲಿ ಕಂಪ್ಯೂಟರ್ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ವಿನೂತನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ವಿ.ವಿ ಕಟ್ಟಿ ತಿಳಿಸಿದ್ದಾರೆ.
ವಿಡಿ ಐಡಿಯಾಥೋನ್ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಈ ಸ್ಪರ್ಧೆಯನ್ನು ವಿದ್ಯಾರ್ಥಿಗಳಲ್ಲಡಗಿರುವ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾಗಿದೆ ಎಂದಿರುವ ಅವರು ಸಾಫ್ಟವೇರ್ ಕ್ಷೇತ್ರದ ಪರಿಣಿತರು ಹಾಗೂ ಮಹಾವಿದ್ಯಾಲಯದ ಪ್ರಾಧ್ಯಾಪಕರುಗಳು ಸ್ಥಳದಲ್ಲೇ ನೀಡುವ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂಥಹ ತಂತ್ರಾಂಶಗಳನ್ನು ವಿದ್ಯಾರ್ಥಿಗಳು ಈ ಸಮಯದಲ್ಲಿ ಅಭಿವೃದ್ಧಿಪಡಿಸಬೇಕಿದೆ.
ಹಲವು ಮಹಾವಿದ್ಯಾಲಯಗಳ ಸುಮಾರು 30 ವಿದ್ಯಾರ್ಥಿ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಪ್ರತಿಯೊಂದು ತಂಡವು 2 ರಿಂದ 4 ಸದಸ್ಯರನ್ನು ಒಳಗೊಂಡಿರುತ್ತದೆ. ಸ್ಪರ್ಧಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಮೂಲಭೂತ ಸೌಕರ್ಯಗಳನ್ನು ಮಹಾವಿದ್ಯಾಲಯವು ಒದಗಿಸುತ್ತದೆ. ಉತ್ತಮ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ ಮೊದಲ ಮೂರು ತಂಡಗಳಿಗೆ ನಗದು ಪಾರಿತೋಷಕವನ್ನು ನೀಡಲಾಗುವದು.
ಮುಂಜಾನೆ 10 ಗಂಟೆಗೆ ಆರಂಭವಾಗುವ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ಸ್ಯಾಂಡ್ ಬಾಕ್ಸ್ ಸ್ಟಾರ್ಟ ಅಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಮ್ ಪಾಟೀಲ್, ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್ಮನ್ನ ಪಿ.ಎಸ್ ಸಾವಕಾರ್ ಆಗಮಿಸಲಿದ್ದಾರೆಂದು ತಿಳಿಸಲಾಗಿದೆ.
ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾದ ಪ್ರೊ. ಪೂರ್ಣಿಮಾ ರಾಯ್ಕರ್, ಪ್ರೊ. ರವೀಂದ್ರ ಪಿ, ಪ್ರೊ. ಶಿವಚುಲೇಶ ಜಿ, ಎಲ್ಲ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದ ನಿರ್ವಹಣಾ ಉಸ್ತುವಾರಿಯನ್ನು ವಹಿಸಲಿದ್ದಾರೆ ಎಂದು ಡಾ|| ಕಟ್ಟಿಯವರು ವಿವರಿಸಿದ್ದಾರೆ.
Leave a Comment