ಹೊನ್ನಾವರ:
ಜಿಪಿಎಸ್ ಹೊಂದಿರುವ 909 ಮತ್ತು ಆರು ಚಕ್ರದ ಮಿನಿ ವಾಹನದ ಮಾಲೀಕರಿಗೆ ಮರಳು ಸಾಗಾಣಿಕೆಗೆ ಪರವಾನಿಗೆ ನೀಡುವಂತೆ ಆಗ್ರಹಿಸಿ ವಾಹನ ಚಾಲಕರು ಮತ್ತು ಮಾಲಕರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಪಿಎಸ್ ಅಳವಡಿಕೆಯಾಗಿರುವ ತಾಲೂಕಿನ 909 ಮತ್ತು ಮಿನಿ ವಾಹನ ಮಾಲೀಕರು ಹಾಗೂ ಚಾಲಕರು ಕಳೆದ 4 ವರ್ಷಗಳಿಂದ ಜಿಪಿಎಸ್ ಪಡೆದು ತಾಲೂಕಿನಲ್ಲಿ ಮರಳು ಸಾಗಾಟ ಮಾಡಿ ಜೀವನ ಸಾಗಿಸಲಾಗುತ್ತಿದೆ. ಇದನ್ನೇ ನಂಬಿ ಸಾಲ ಮಾಡಿ ವಾಹನಗಳನ್ನು ಖರೀದಿಸಿದ್ದು, ಮರಳು ಸಾಗಾಣಿಕೆ ಸ್ಥಗಿತವಾಗಿದ್ದರಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ತಾಲೂಕು ವ್ಯಾಪ್ತಿಯ ಕೆಲವು ಸಣ್ಣ-ಪುಟ್ಟ ಓಣಿಗಳಲ್ಲಿ ಹಾಗೂ ರಸ್ತೆಗಳಲ್ಲಿ 909 ಮತ್ತು ಮಿನಿ ವಾಹನದ ಹೊರತಾಗಿ ದೊಡ್ಡ ವಾಹನಗಳು ಓಡಾಡದ ರೀತಿಯಲ್ಲಿ ರಸ್ತೆಗಳಿದ್ದು, 909 ಮತ್ತು ಮಿನಿ ವಾಹನಗಳಿಗೆ ನೀಡಿದ ಜಿಪಿಎಸ್ನ್ನು ಮುಂದುವರೆಸಿ ಮರಳು ಸಾಗಾಣಿಕೆಗೆ ಪರವಾನಿಗೆ ನೀಡಬೇಕು. ಇದು ನ್ಯಾಯದಾನದ ದೃಷ್ಟಿಯಿಂದ ಅತೀ ಅವಶ್ಯಕವಗಿದ್ದು, ಮರಳು ಸಾಗಾಟ ಮಾಡಲು ಸೂಕ್ತ ಕ್ರಮ ಕೈಗೊಂಡು ಪರವಾನಿಗೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ವಾಹನ ಚಾಲಕ ಮತ್ತು ಮಾಲೀಕರಾದ ಗಣೇಶ ಹೆಗಡೆ, ರಾಘವೇಂದ್ರ ದೇವರಾಯ ನಾಯ್ಕ, ಆನಂದ ನಾಯ್ಕ, ಲೋಹಿತ್ ಶೇಖರ್ ನಾಯ್ಕ, ರಾಮಕೃಷ್ಣ ನಾಯ್ಕ, ವಿನೋದ ನಾಯ್ಕ, ಚಂದ್ರಶೇಖರ ಹೆಗಡೆ, ಗಣೇಶ ಹೆಗಡೆ, ಮಾರುತಿ ನಾಯ್ಕ, ವಾಸುದೇವ ಮೇಸ್ತ, ಅನಂತ ನಾಯ್ಕ, ನೀಲಕಂಠ ನಾಯ್ಕ, ಸುಧಾಕರ ನಾಯ್ಕ, ಈಶ್ವರ ನಾಯ್ಕ ಇತರರು ಪಾಲ್ಗೊಂಡಿದ್ದರು. ಮನವಿ ಪ್ರತಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರವಾರ ಹಾಗೂ ಭಟ್ಕಳ ಉಪ ಆಯುಕ್ತರಿಗೆ ಸಲ್ಲಿಸಲಾಯಿತು. ತಹಸೀಲ್ದಾರ್ ವಿ.ಆರ್.ಗೌಡ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
Leave a Comment