ಬೀಸುವ ದೋಣ್ಣಿಯಿಂದ ತಪ್ಪಿಸಿಕೊಂಡು ನ್ಯಾಯಲಯದ ಮೆಟ್ಟಿಲು ಏರಿ 2 ತಿಂಗಳ ಅರ್ಧಯಕ್ಷಗಾಡಿಯಲ್ಲಿ ಮುಂದುವರೆದು ಕೊನೆಗೂ ಅವಿಶ್ವಾಸದ ಸುಳಿಗೆ ಸಿಕ್ಕಿ ಅಧ್ಯಕ್ಷ ಗಾದಿಯಿಂದ ಗ್ರಾಮ ಪಂಚಾಯತ ಅಧ್ಯಕ್ಷರು ಅಧಿಕಾರ ಕಳೆದುಕೊಂಡ ಘಟನೆ ಸಾಲ್ಕೋಡ ಗ್ರಾಮ ಪಂಚಾಯತನಲ್ಲಿ ನಡೆದಿದೆ.
ಕಳೆದ ಮೂರು ತಿಂಗಳಿನಿಂದ ನ್ಯಾಯಲಯದ ತುಗುಯ್ಯಾಲೆಯಲ್ಲಿದ್ದ ಸಾಲ್ಕೋಡ ಪಂಚಾಯತ ರಾಜಕೀಯ ಹೈಡ್ರಾಮಾಕ್ಕೆ ಕೊನೆಗೂ ತೆರೆಬಿದ್ದಿದೆ. ಅಧ್ಯಕ್ಷರು ಚಾಪೆ ಕೆಳಗೆ ಹೊದರೆ ಸದಸ್ಯರು ರಂಗೋಲಿ ಕೆಳಗೆ ನುಸುಳಿ ಸದಸ್ಯರು ಒಗ್ಗೂಡಿ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದು ಇಂದು ಸಹಾಯಕ ಕಮೀಷನರ್ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ 8 – 1 ರಿಂದ ಅಂಗೀಕಾರವಾಗಿದೆ.
ಸಾಮಾನ್ಯ ಸಭೆ ಕರೆದಿಲ್ಲ, ಸ್ಥಾಯಿ ಸಮಿತಿ ಸಭೆ ಕರೆದಿಲ್ಲ, ಕೆಲಸ ಮಾಡದೆ ಎಂ.ಬಿ.ಬುಕ್ ಬರೆಸಿದ್ದಾರೆ, ಸದಸ್ಯರನ್ನು ಯಾವುದಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಕಾರಣವನ್ನಿಟ್ಟುಕೊಂಡು ಸಾಲ್ಕೋಡ್ ಗ್ರಾಮಪಂಚಾಯತನ 8 ಮಂದಿ ಚುನಾಯಿತ ಸದಸ್ಯರು ಹಾಲಿ ಅಧ್ಯಕ್ಷರಾಗಿದ್ದ ಶ್ರೀಮತಿ ಶಾಂತಿ ನಾಯ್ಕ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಲು ಮುಂದಾಗಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ ಭಟ್ಕಳ ಸಹಾಯಕ ಆಯುಕ್ತರು ಅಗಷ್ಟ್ 24 ಕ್ಕೆ ಅವಿಶ್ವಾಸಕ್ಕೆ ದಿನಾಂಕ ನಿಗಧಿ ಮಾಡಿದ್ದರು ಆದರೆ ಅಧ್ಯಕ್ಷೆ ಶಾಂತಿ ನಾಯ್ಕ ಅವರು ಸದಸ್ಯರ ಆರೋಪ ನಿರಾಧಾರ ಮತ್ತು ರಾಜಕೀಯ ಪ್ರೇರಿತವಾಗಿದ್ದು ಅವಿಶ್ವಾಸಕ್ಕೆ ತಡೆ ನೀಡುವಂತೆ ಉಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಾಗ ಅಗಷ್ಟ್ 23 ರಂದು ನ್ಯಾಯಾಲಯ ಮೂರುವಾರಗಳ ತಡೆಯಾಜ್ಞೆ ಸಿಕ್ಕಿತ್ತು. ಸಪ್ಟೆಂಬರ್ 16- ಕ್ಕೆ ತಡೆಯಾಜ್ಞೆಯ ಅವಧಿ ಮುಕ್ತಾಯವಾಗುವ ವರೆಗೆ ಕಾದು ಕುಳಿತ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ಸದಸ್ಯರು ಅವಧಿ ಮುಕ್ತಾಯವಾದ ನಂತರ ಅಧ್ಯಕ್ಷರು ತಡೆಯಾಜ್ಞೆ ಮುಂದುವರಿಸುವಂತೆ ಯಾವುದೇ ಅರ್ಜಿ ಸಲ್ಲಿಸದಿರುವುದನ್ನು ಬಳಸಿಕೊಂಡು ಮತ್ತೆ ಸಹಾಯಕ ಆಯುಕ್ತರಲ್ಲಿ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕೇಳಿದಾಗ ಚುನಾಯಿತ ಸದಸ್ಯರ ಸಾಂವಿಧಾನಿಕ ಹಕ್ಕನ್ನು ಪರಿಗಣಿಸಿ ಅಕ್ಟೋಬರ್ 15 ರ ಪೂರ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರಿಗೂ ಅಕ್ಟೋಬರ್ 30 ಕ್ಕೆ ಅವಿಶ್ವಾಸ ನಿರ್ಣಯ ಸಭೆ ಕರೆದಬಗ್ಗೆ ನೋಟೀಸ್ ಜಾರಿಮಾಡಿದ್ದರು.
ಇಂದು ನಡೆದ ಅವಿಶ್ವಾಸ ನಿರ್ಣಯ ಸಭೆಗೆ ತಡೆಯಾಜ್ಞೆ ತರುವುದಕ್ಕೆ ಅಧ್ಯಕ್ಷರು ಸಾಕಷ್ಟು ಪ್ರಯತ್ನಿಸಿದ್ದರಾದರೂ ಬಹುಮತ ಸದಸ್ಯರ ವಿಶ್ವಾಸ ಕಳೆದುಕೊಂಡು ಕೋರ್ಟ ಮೂಲಕ ಆಡಳಿತ ನಡೆಸುವುದಕ್ಕೆ ಮುಂದಾಗುವುದು ಸಮಂಜಸವಲ್ಲ ಹಾಗೂ ಈ ಹಿಂದೆ ತಡೆಯಾಜ್ಞೆ ತಂದ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರದಿರುವುದನ್ನು ಪರಿಗಣಿಸಿ ವಿಚಾರಣೆಯನ್ನು ಮುಂದೂಡಿದೆ ಇದರಿಂದ ಇಂದಿನ ಅವಿಶ್ವಾಸ ನಿರ್ಣಯ ಸಭೆಗೆ ತಡೆಯಾಜ್ಞೆ ಪಡೆಯಲುಸಾಧ್ಯವಾಗದೆ ಭಟ್ಕಳ ಸಹಾಯಕ ಆಯುಕ್ತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷೆ ಶಾಂತಿ ನಾಯ್ಕ ಮತ್ತು ಸದಸ್ಯ ಮಿನಿನ್ ಗೊನ್ಸಾಲ್ವೀಸ್ ಗೈರಾಗಿದ್ದರಿಂದ ಹಾಜರಿದ್ದ 9 ಸದಸ್ಯರಲ್ಲಿ 8 ಸದಸ್ಯರು ಅವಿಶ್ವಾಸದ ಪರವಾಗಿ ಕೈ ಎತ್ತಿದರೆ ಶ್ರೀಧರ ಗಣಪತಿ ಹೆಗಡೆ ಒಬ್ಬರು ಮಾತ್ರ ಅವಿಶ್ವಾಸ ನಿರ್ಣಯದ ಪರವಾಗಿದ್ದರಿಂದ 8 -1 ರಿಂದ ಅವಿಶ್ವಾಸನಿರ್ಣಯ ಅಂಗೀಕಾರವಾಗಿದೆ ಎಂದು ಠರಾವು ಮಾಡಲಾಗಿದೆ.
11 ಸದಸ್ಯಬಲದ ಸಾಲ್ಕೋಡ ಗ್ರಾಮಪಂಚಾಯತದಲ್ಲಿ ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು ಜೆಡಿಎಸ್ ಬೆಂಬಲಿತ ಇಬ್ಬರು ಮತ್ತು ಬಿಜೆಪಿ ಬೆಂಬಲಿತ ಒಬ್ಬರು ಚುನಾಯಿತರಾಗಿದ್ದರು ಸ್ಪಷ್ಟ ಬಹುಮತ ಪಡೆದಿದ್ದರು ಹಲವಾರು ರಾಜಕೀಯ ಹಗ್ಗಜಗ್ಗಾಟದ ಪರಿಣಾಮ ಕಾಂಗ್ರೆಸ್ ಬೆಂಬಲಿತರ ಗುಂಪಿನಿಂದ ಶಾಂತಿ ಗಣಪತಿ ನಾಯ್ಕ ಅವರು ಅಧ್ಯಕ್ಷರಾಗಿಯೂ ಮಾದೇವಿ ಮಾದೇವ ಮುಕ್ರಿ ಅವರು ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಬದಲಾದ ಕಾಲಘಟ್ಟದಲ್ಲಿ ಹಾಲಿ ಶಾಸಕರಾದ ದಿನಕರ ಶೆಟ್ಟಿ ಶೆಟ್ಟಿ ಜೊತೆ 2 ಸದಸ್ಯರು ಬಿಜೆಪಿಯತ್ತ ಮುಖ ಮಾಡಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕುಮಟಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತು ಬಿಜೆಪಿ ಅಭ್ಯರ್ಥಿ ಪ್ರಚಂಡ ಗೆಲುವನ್ನು ದಾಖಲಿಸಿದ ನಂತರ ಕಾಂಗ್ರಸ್ ಬೆಂಬಲಿತ ಸದಸ್ಯರಲ್ಲಿ ಹಲವರು ಪರೊಕ್ಷವಾಗಿ ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎನ್ನುವ ವಿಚಾರಗಳು ಸುಳಿದಾಡುತ್ತಿದ್ದರೂ ಸದಸ್ಯರು ಅಲ್ಲಗೆಳೆಯುತ್ತಾ ನಾವು ಪಕ್ಷಾತೀತರು ಎನ್ನುವ ಬುದ್ಧಿವಂತಿಕೆಯ ಉತ್ತರ ನೀಡುತ್ತಿರುದಕ್ಕೆ ಕಾಂಗ್ರೇಸ್ ಬೆಂಬಲಿತರ ವಿರುದ್ದವೇ ಅವಿಶ್ವಾಸ ಗೊತ್ತುವಳಿಯೇ ಸಾಕ್ಷಿ.
ಮುಂದೆ ಕುಮಟಾ ಶಾಸಕರಾದ ದಿನಕರ ಶೆಟ್ಟಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಈ ಹಿಂದೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅನುಭವವುಳ್ಳ ಬಾಲಚಂದ್ರ ನಾಯ್ಕ ಮುಂದಿನ ಅವಧಿಗೆ ಅಧ್ಯಕ್ಷರಾಗುವ ತಯಾರಿ ನಡೆಸಿದ್ದಾರೆ ಎನ್ನುವ ಸುಳಿವನ್ನು ಸದಸ್ಯರು ಬಿಟ್ಟುಕೊಟ್ಟಿದ್ದು ಮುಂದೆ ಅವರು ಅಧ್ಯಕ್ಷ ಗಾಧಿಯತ್ತ ಕಣ್ಣಿಟ್ಟಿದ್ದಾರೆ ಎನ್ನುವ ಮಾತು ಗ್ರಾಮದಲ್ಲಿ ಚರ್ಚೆಯಾಗುತ್ತಿದೆ.
Leave a Comment