ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ವಸತಿ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಲಾ ಮಕ್ಕಳು ಪ್ರಾರ್ಥನಾ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಶಾಲೆಯ ಆಡಳಿತ ನಿರ್ದೇಶಕರಾದ ಜಿ.ಟಿ.ಹೆಗಡೆ ಸರ್ ರವರು ಶಾಲೆಯ ಪ್ರಾಂಶುಪಾಲರಾದ ಶ್ರೀನಿವಾಸ ಬಿ. ಕೆ. ರವರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಕನ್ನಡಾಂಬೆಗೆ ಪುಷ್ಪ ಸಮರ್ಪಣೆ ಮಾಡಿದರು. ವಿದ್ಯಾರ್ಥಿನಿ ಅವನಿ ಭಟ್ ವೇದಿಕೆಯ ಮೇಲೆ ಉಪಸ್ಥಿತರಿರುವ ಗಣ್ಯರನ್ನು ಸ್ವಾಗತಿಸಿದಳು. ವಿದ್ಯಾರ್ಥಿ ಸಂಜೀವ ನಾಯ್ಕ ಮತ್ತು ತೇಜಸ್ ಹೆಗಡೆ ಕನ್ನಡ ರಾಜ್ಯೋತ್ಸವದ ಕುರಿತು ಭಾಷಣವನ್ನು ಮಾಡಿದರು. ಕನ್ನಡ ಭಾಷಾ ಶಿಕ್ಷಕರಾದ ಆದರ್ಶ ರೇವಣಕರರವರು ತಮ್ಮ ಭಾಷಣಗಳ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಬಗ್ಗೆ ಎಲ್ಲರಲ್ಲಿ ಜಾಗೃತಿ ಮೂಡಿಸಿದರು. ಶಾಲಾ ಮಕ್ಕಳಿಗೆ ಕನ್ನಡ ಭಾವಗೀತೆ ಸ್ಪರ್ಧೆಯನ್ನು ಎರ್ಪಡಿಸಲಾಗಿತ್ತು.
ಪ್ರಾಂಶುಪಾಲರಾದ ಶ್ರೀನಿವಾಸ ಬಿ. ಕೆ. ಮಾತನಾಡಿ ಮಾತೃಭಾಷೆಗಿಂತ ಮಿಗಿಲಾದದ್ದು ಯಾವುದು ಇಲ್ಲ. ನಮ್ಮ ಭಾವನೆಗಳನ್ನು ಇತರರಿಗೆ ಮನ ಮುಟ್ಟುವಂತೆ ಮಾಡುವ ಸರಳ ಭಾಷೆ – ಕನ್ನಡ. ಭಾಷೆ, ದೇಶಾಭಿಮಾನಗಳ ಜೊತೆಗೆ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ತಿಳಿ ಹೇಳಿದರು.
ಆಡಳಿತ ನಿರ್ದೇಶಕರಾದ ಜಿ.ಟಿ.ಹೆಗಡೆ ಮಾತನಾಡಿ ಕೊನೆಯ ಉಸಿರಿರುವವರೆಗೂ ಕನ್ನಡ ಭಾಷೆಬೇಕು. ಕನ್ನಡದ ದೀಪ ಯಾವಾಗಲೂ ಪ್ರಜ್ವಲಿತವಾಗಿರುವಂತೆ ಮಾಡುವುದು ಕನ್ನಡಿಗರ ಕರ್ತವ್ಯ. ಕತೆ, ಕಾದಂಬರಿ, ಮಾಸಪತ್ರಿಕೆ, ದಿನಪತ್ರಿಕೆ ಓದಿ ಭಾಷಾ ಜ್ಞಾನ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಹಿತವಚನ ನುಡಿದರು.
ನಂತರ ಶಿಕ್ಷಕಿಯರಾದ ಶಕುಂತಲಾ ನಾಯ್ಕ, ಶ್ವೇತಾ ಹೆಗಡೆ, ಮತ್ತು ಅಮೃತಾ ರಾಯ್ಕರ ರವರು ಕನ್ನಡ ನಾಡು-ನುಡಿಯ ಕುರಿತಾದ ಹಾಡನ್ನು ಸುಶ್ರಾವ್ಯವಾಗಿ, ಮಧುರವಾಗಿ ಹಾಡಿದರು.
ಈ ಎಲ್ಲಾ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನೀಯರಾದ ಅನನ್ಯ ಶೇಟ್ ಮತ್ತು ನಂದಿತಾ ನಾಯ್ಕ ಅಚ್ಚುಕಟ್ಟಾಗಿ ನಿರ್ವಹಿಸಿದರು. ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿನಿ ಅನಘಾ ಭಟ್ ಸರ್ವರನ್ನೂ ವಂದಿಸಿದಳು.
Leave a Comment