ಹೊನ್ನಾವರ:
ಟಿಪ್ಪುಸುಲ್ತಾನ್ ಕೇವಲ ರಾಜನಷ್ಟೇ ಅಲ್ಲದೆ ಪಂಚ ಭಾಷಾ ಪರಿಣಿತಿಯನ್ನು ಹೊಂದಿದ್ದ ಪರಿಸರ ಪ್ರೇಮಿಯೂ ಆಗಿದ್ದ ಎಂದು ಸೆಂಟ್ ಥಾಮಸ್ ಶಾಲಾ ಶಿಕ್ಷಕರಾದ ಬಿ.ಎಂ.ಭಟ್ ತಾಲೂಕ ಆಡಳಿತ ಏರ್ಪಡಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ತಿಳಿಸಿದರು.
ಹೊನ್ನಾವರದ ಪಟ್ಟಣ ಪಂಚಾಯತ ಸಭಾಭವನದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ, ಪಟ್ಟಣ ಪಂಚಾಯತ ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮೈಸೂರು ಹುಲಿ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಾಜಶ್ರೀ ನಾಯ್ಕ ಉದ್ಘಾಟಿಸಿ ಟಿಪ್ಪುಸುಲ್ತಾನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕರಾದ ಬಿ.ಎಂ.ಭಟ್ ಮಾತನಾಡಿ ಟಿಪ್ಪು ಸುಲ್ತಾನ್ ಕೇವಲ ಅರಸನಾಗಿ ಆಳ್ವಿಕೆ ಮಾಡದೇ ಪರಿಸರ ಪ್ರೇಮಿ ರಾಜ ಎಂಬುದನ್ನು ನಾವು ಗಮನಿಸಬೇಕಿದೆ. ಇವರ ಅವಧಿಯಲ್ಲಿ ತಪ್ಪು ಮಾಡಿದವರಿಗೆ ಗಿಡ ನೆಡುವ ಜೊತೆ ಅದನ್ನು ಪೊಷಣೆ ಮಾಡುವ ಜವಾಬ್ದಾರಿ ವಹಿಸುವ ಶಿಕ್ಷೆ ನೀಡುವುದನ್ನು ಗಮನಿಸಿದರೆ ಇವರ ಪರಿಸರ ಕಾಳಜಿಯನ್ನು ನಾವು ಗಮನಿಸಬಹುದಾಗಿದೆ. ಇವರು ತಮ್ಮ 10ನೇ ವಯಸ್ಸಿನಲ್ಲಿಯೇ ಹುಲಿಯೊಂದಿಗೆ ಹೋರಾಟ ನಡೆಸಿದ ಪರಿಣಾಮ ಮೈಸೂರು ಹುಲಿ ಎಂದು ಪ್ರಸಿದ್ಧಿಯನ್ನು ಪಡೆದಿದ್ದು ತಂದೆ ಹೈದರ್ ಅಲಿ ಅನಕ್ಷರಸ್ಥನಾದರೂ ಮಗನಿಗೆ ಐದು ಭಾಷೆಗಳಲ್ಲಿ ಪ್ರಾವಿಣ್ಯತೆಯನ್ನು ಗಳಿಸಲು ಪ್ರೋತ್ಸಾಹಿಸುವ ಮೂಲಕ ಉತ್ತಮ ಅರಸನಾಗಲು ಮಾರ್ಗದರ್ಶನ ಮಾಡಿದ ಪರಿಣಾಮ ಇಂದಿಗೂ ಜಯಂತಿಯನ್ನು ಆಚರಿಸುವ ಸಾಧನೆ ಸಾಧ್ಯವಾಯಿತು. 13 ನೇ ವಯಸ್ಸಿನಲ್ಲಿಯೇ ಯುದ್ದ ಮಾಡಲು ಸೇನಾಪಡೆಯ ಮುಖಂಡತ್ವವನ್ನು ವಹಿಸಿದ್ದ ಟಿಪ್ಪು ಮುಂದೆ ಬ್ರಿಟೀಷರ ವಿರುದ್ದ ಹೋರಾಡಲು ಪ್ರಾನ್ಸ ಸೇರಿದಂತೆ ವಿವಿಧ ದೇಶದ ಸೇನಾ ಸಂಪರ್ಕವನ್ನು ಪಡೆಯಲು ಪ್ರಯತ್ನಿಸಿದ ಹೆಮ್ಮೆಯ ರಾಜನಾಗಿದ್ದನು ಎಂದು ನೆನಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ದಂಡಾಧಿಕಾರಿ ವಿ.ಆರ್.ಗೌಡ ಮಾತನಾಡಿ ಪರಿಸರ ರಕ್ಷಣೆಯಲ್ಲಿ ಟಿಪ್ಪು ಸುಲ್ತಾನ ಪ್ರಮುಖ ಪಾತ್ರ ವಹಿಸಿದ್ದರು. ಆಡಳಿತ್ಮಕವಾಗಿ ಅನೇಕ ಸುದಾರಣೆ ತರುವ ಮೂಲಕ ಹೊಸ ಯುಗಕ್ಕೆ ನಾಂದಿ ಹಾಡಿದ್ದರು ಇದನ್ನು ಗಮನಿಸಿದೆ ಅವರ ಆಡಳಿತ ವೈಖರಿ ಇಂದಿನವರಿಗೆ ಆದರ್ಶಪ್ರಾಯವಾಗಿದೆ. ಸರ್ಕಾರ ಅವರ ಆಡಳಿತ ವೈಖರಿಯನ್ನು ಗಮನಿಸಿ ಟಿಪ್ಪುಜಯಂತಿಯನ್ನು ಆಚರಿಸುತ್ತಿದೆ ಎಂದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ಜಮೀಲಾಬಿ ಶೇಖ್, ತುಳಸಿದಾಸ್ ಪುಲ್ಕರ್, ವಕೀಲರಾದ ಎಸ್.ಯು ತಲಕಣಿ ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಪೋಲಿಸ್ ವೃತ್ತ ನಿರೀಕ್ಷಕರಾದ ಚೆಲವರಾಜ ಬಿ. ಉಪಸ್ಥಿತರಿದ್ದರು.
Leave a Comment