ಹಳಿಯಾಳ :- ಸಮಾಜ ಸೇವೆಗೆ, ಸಂಘಟನೆಯ ಬಲವರ್ದನೆಗಾಗಿ ಉತ್ತರ ಕನ್ನಡ ಜಿಲ್ಲೆಯ 6 ತಾಲೂಕುಗಳನ್ನೊಳಗೊಂಡು ಘಟ್ಟದ ಮೇಲಿನ ಜಿಲ್ಲಾಧ್ಯಕ್ಷರನ್ನಾಗಿ ಹಳಿಯಾಳ ಜಯ ಕರ್ನಾಟಕ ಸಂಘಟನೆಯ ಹಾಲಿ ತಾಲೂಕಾಧ್ಯಕ್ಷ ವಿಲಾಸ ಕಣಗಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯಾಧ್ಯಕ್ಷ ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಾಕಾರಣ ಸಭೆಯಲ್ಲಿ ಘಟ್ಟದ ಮೇಲಿನ ನೂತನ ಜಿಲ್ಲಾಧ್ಯಕ್ಷರನ್ನು ಘೋಷಣೆ ಮಾಡಿದ ಅವರು 6 ತಾಲೂಕುಗಳ ಅಧ್ಯಕ್ಷರು ಹಾಗೂ ಪ್ರಮುಖರ ಆಶಯದಂತೆ ವಿಲಾಸ ಕಣಗಲಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಯ ಕರ್ನಾಟಕ ಸಂಘಟನೆ ಹಳಿಯಾಳ ಭಾಗದಲ್ಲಿ ಕಳೆದ 7 ವರ್ಷಗಳಿಂದ ನಾಡು, ನುಡಿಗಾಗಿ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ತಾಲೂಕಾಡಳಿತದಿಂದಲೂ ಪ್ರಶಂಸನೆಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ ಎಂದ ಅವರು ಸಮಾಜ ಸೇವೆಯೇ ಸಂಘಟನೆಯ ಪ್ರಮುಖ ಧ್ಯೇಯವಾಗಿದೆ ಎಂದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಮುಂದಿನ ದಿನಗಳಲ್ಲಿ ಮಹತ್ವದ ಉದ್ದೇಶದಿಂದ ಉತ್ತರ ಕರ್ನಾಟಕ ಭಾಗಕ್ಕೆ ಭೆಟಿ ನೀಡಲಿದ್ದಾರೆ. ಗ್ರಾಮೀಣ ಕ್ರೀಡಾಪಟುಗಳಿಗೆ ಉತ್ತೇಜನ, ಪ್ರೋತ್ಸಾಹ ನೀಡುವ ಕಾರ್ಯಕ್ರಮ ಜಯ ಕರ್ನಾಟಕ ಸಂಘಟನೆಯಿಂದ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಚಂದ್ರಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಆನಂದ ರೆಡ್ಡಿ, ಜಗದೀಶ, ಯಲ್ಲಾಪುರದ ವಿಲ್ಸನ್ ಫರ್ನಾಂಡಿಸ್, ಶಿರಸಿಯ ನಾಗರಾಜ ನಾಯ್ಕ, ದಾಂಡೇಲಿಯ ಸುದರ್ಶನ ಆರ್ಸಿ, ಪದಾಧಿಕಾರಿಗಳಾದ ಶಿರಾಜ ಮುನವಳ್ಳಿ, ವಿಕ್ರಾಂತ ಶೆಟ್ಟಿ, ಗಣೇಶ ಗೊಸಪ್ಪನವರ, ಗೋಪಿ ಗರಗ, ಅನಿಸ ಪಿರವಾಲೆ, ದುರ್ಗಪ್ಪಾ ಚಲವಾದಿ, ದತ್ತಾ ಬಾಂದೇಕರ, ಕಿರಣ ಕಮ್ಮಾರ, ವಿನೋದ, ಮಂಜು ಕಲಕುಂಡಿ, ಬಸವರಾಜ ತಳವಾರ, ಮಹೇಶ ಎಚ್, ಪಿರಾಜಿ ಮಾನೆ ಇತರರು ಇದ್ದರು.
Leave a Comment