ಹಳಿಯಾಳ :- ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ ನೀಡಿದ 16% ಮೀಸಲಾತಿಯಂತೆ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಮೀಸಲಾತಿ ಘೋಷಣೆ ಮಾಡಿ ಮರಾಠಾ ಸಮುದಾಯದ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಉಕ ಜಿಲ್ಲಾಧ್ಯಕ್ಷ ನಾಗೇಂದ್ರ ಎಸ್ ಜಿವೋಜಿ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಕಲ ಮರಾಠಾ ಸಮಾಜದಿಂದ ಪಕ್ಷಾತೀತವಾಗಿ ಆಯೋಜಿಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಮರಾಠರಿಗೆ ಮೀಸಲಾತಿಗಾಗಿ ಕ್ರಾಂತಿ ಮೊರ್ಚಾ ಆಂದೋಲನ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು ಈಗ ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯಕ್ಕೆ 16% ಮೀಸಲಾತಿ ನೀಡಿರುವುದು ಸ್ವಾಗತಾರ್ಹವಾಗಿದೆ ಎಂದ ಜಿವೋಜಿ ಕರ್ನಾಟಕದಲ್ಲಿ ಮರಾಠರನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರಿಸುವ ಬೇಡಿಕೆಯನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.
ಸಕಲ ಮರಾಠಾ ಸಮುದಾಯದವರು ಪಕ್ಷಾತೀತವಾಗಿ ಆರ್ಥಿಕ, ಶೈಕ್ಷಣ ಕ, ರಾಜಕೀಯವಾಗಿ ಹಿಂದೂಳಿದಿರುವ ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ಕಳೆದ 3 ವರ್ಷಗಳಿಂದ ರಾಜ್ಯಾದ್ಯಂತ ಲಕ್ಷಾಂತರ ಜನರೊಂದಿಗೆ ಮೌನಕ್ರಾಂತಿ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದ್ದರು ಕೂಡ ಯಾವುದೇ ಪ್ರಯೋಜನಗಳು ಕಂಡು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿವೋಜಿ ಹಿಂದಿನ ಕಾಂಗ್ರೇಸ್ ಸರ್ಕಾರ ಹಾಗೂ ಇಂದಿನ ಸಮ್ಮಿಶ್ರ ಸರ್ಕಾರ ಕೂಡ ಈ ಬಗ್ಗೆ ಚಕಾರವೆತ್ತದೆ ಮರಾಠಾ ಸಮುದಾಯಕ್ಕೆ ದ್ರೋಹ ಎಸಗುತ್ತಿದೆ ಎಂದು ಕಿಡಿ ಕಾರಿದರು.
ಚುನಾವಣೆ ಸಮಯದಲ್ಲಿ ಪ್ರತಿಬಾರಿ ಮರಾಠರಿಗೆ ಮೀಸಲಾತಿ ನೀಡುತ್ತೆವೆ ಎಂದು ಆಶ್ವಾಸನೆ ನೀಡುವ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಆರ್.ವಿ.ದೇಶಪಾಂಡೆಯವರು ಒಮ್ಮೆಯು ವಿಧಾನಸಭೆಯಲ್ಲಿ ಮರಾಠಾರ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಆರೋಪಿಸಿದ ಅವರು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತ್ರ ವಿಧಾನ ಪರಿಷತ್ನಲ್ಲಿ ಮರಾಠಾ ಸಮುದಾಯದ ಪರ ಪ್ರತಿಬಾರಿ ಧ್ವನಿ ಎತ್ತುತ್ತಿದ್ದು ಸರ್ಕಾರ ಕೂಡಲೇ ಮರಾಠರ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕೆಂದರು.
ಇತ್ತೀಚೆಗೆ ಪಕ್ಷಾತೀತವಾಗಿ ಮರಾಠಾ ಸಮಾಜದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಮುಖಂಡರೊಂದಿಗೆ ಚರ್ಚೆಯಾಗಿದ್ದು ಮುಂದಿನ ಕೆಲವೆ ದಿನಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಮರಾಠಾ ಕ್ರಾಂತಿಮೋರ್ಚಾದ ನೇತೃತ್ವದಲ್ಲಿ ನಿಯೋಗವೊಂದು ಭೇಟಿಯಾಗಿ ಮರಾಠಾ ಸಮುದಾಯದ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಲಾಗುವುದು ಎಂದರು.
ಮುಖ್ಯಮಂತ್ರಿಗಳಿಂದಲೂ ಸರಿಯಾಗಿ ಸ್ಪಂದನೆ ದೊರೆಯದೆ ಇದ್ದಲ್ಲಿ ಮತ್ತೇ ಬೃಹತ್ ಹೋರಾಟದ ಹಾದಿ ತುಳಿಯಲಾಗುವುದು ಎಂದು ಜಿವೋಜಿ ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ಮುಖಂಡರಾದ ಬಿಡಿ ಚೌಗಲೆ, ಪ್ರಕಾಶ ಗಿರಿ, ದೇಮಣ್ಣಾ ಗೌಡಾ, ಶಿವಾಜಿ ನರಸಾನಿ, ಪ್ರಕಾಶ ಫಾಕ್ರಿ, ಪ್ರಕಾಶ ಕಮ್ಮಾರ, ತಾನಾಜಿ ಪಟ್ಟೇಕರ, ರಾಜು ಹಳ್ಳುಕರ, ಪಾಂಡುರಂಗ ಸುತಾರ ಇದ್ದರು.
Leave a Comment