ಹಳಿಯಾಳ: ಅನೇಕ ಹೋರಾಟಗಳ ಬಳಿಕ ಪಟ್ಟಣದ ನ್ಯಾಯಾಲಯದ ಎದುರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಅಡಿಪಾಯ ಮಟ್ಟದಲ್ಲೇ ಕಳಪೆಯಾಗಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆಹಿಡಿದ ವಿಶಿಷ್ಠ ವಿದ್ಯಮಾನ ಮಂಗಳವಾರ ನಡೆದಿದೆ.
ಪಟ್ಟಣದ ಮರಡಿಗುಡ್ಡ ಬಳಿಯ ನ್ಯಾಯಾಲಯದ ಎದುರು ನಿರ್ಮಿಸಲಾಗುತ್ತಿರುವ ಅಂಬೇಡ್ಕರ ಭವನ ಕಾಮಗಾರಿಯು ಅಡಿಪಾಯವಿಲ್ಲದೆಯೇ ಕೆವಲ ಕಾಲಂಗಳ ಮೇಲೆ ನಿರ್ಮಿಸಲು ಹೊರಟಿರುವುದು ಹಾಗೂ ಅಡಿಪಾಯದಲ್ಲಿಯೇ ಕಳಪೆ ಮಟ್ಟದ ಕಾಮಗಾರಿ ನಡೆಸಿರುವುದು ದೌರ್ಭಾಗ್ಯದ ಸಂಗತಿ ಎಂದು ಕಿಡಿ ಕಾರಿರುವ ಪಟ್ಟಣದ ಹಲವಾರು ದಲಿತ ಸಂಘಟನೆಯ ಮುಖಂಡರು ಕಾಮಗಾರಿಯನ್ನು ನಿಲ್ಲಿಸಿ ಗುತ್ತಿಗೆದಾರನ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೇದಾರ ಕಾರವಾರದ ರೋನಾಲ್ಡ್ ಫರ್ನಾಂಡಿಸ್ ಎನ್ನುವವರು ದೊಡ್ಡ ಮೊತ್ತದ ಗುತ್ತಿಗೆ ಪಡೆದು ಕಳಪೆ ಕಾಮಗಾರಿ ನಡೆಸುತ್ತಿರುವುದು ಅವರನ್ನು ಕಪ್ಪು ಪಟ್ಟಿ(ಬ್ಲಾಕ್ ಲಿಸ್ಟ್)ಗೆ ಸೇರಿಸಬೇಕು. ಈ ಬಗ್ಗೆ ಸಂಪೂರ್ಣ ತನಿಖೆಯಾಗಿ ಉತ್ತಮ ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರಿಗೆ ಈ ಕಾಮಗಾರಿಯನ್ನು ನೀಡಬೇಕು ಇಲ್ಲದಿದ್ದರೇ ಅನಿವಾರ್ಯವಾಗಿ ಹೋರಾಟ ನಡೆಸಬೇಕಾದಿತು ಎಂದು ಎಚ್ಚರಿಕೆಯನ್ನು ನೀಡಿದ ದಲಿತ ಸಂಘಟನಾಕಾರರು ಸ್ಥಳಕ್ಕೆ ತಹಶೀಲ್ದಾರ್ ಅವರು ಭೇಟಿ ನೀಡುವಂತೆ ಪಟ್ಟು ಹಿಡಿದರು.
ಘಟನೆ ತಿಳಿದು ಸ್ಥಳಕ್ಕೆ ತಹಶೀಲ್ಧಾರ್ ವಿದ್ಯಾಧರ ಗುಳಗುಳಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಅವರು ಆಗಮಿಸಿ ಪರಿಶೀಲನೆ ನಡೆಸಿದರು ಹಾಗೂ ಬುಧವಾರ ಗುತ್ತಿಗೆದಾರರನ್ನು ಕರೆದು ಸಭೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಮುಖಂಡರು ತೆರಳಿದರು.
ದಲಿತ ಸಂಘರ್ಷ ಸಮೀತಿ(ಚಂದ್ರಕಾಂತ ಕಾದ್ರೋಳ್ಳಿ ಬಣ)ಯ ರಾಜ್ಯಾಧ್ಯಕ್ಷ ಚಂದ್ರಕಾಂತ ಕಾದ್ರೋಳ್ಳಿ, ಮುಖಂಡರಾದ ಯಲ್ಲಪ್ಪಾ ಹೊನ್ನೊಜಿ, ಈರಣ್ಣಾ ವಡ್ಡರ, ಮಾರುತಿ ಕಲಬಾವಿ, ಬಡೇಸಾಬ ಕಕ್ಕೇರಿ, ರಾಜೇಶ ಮಾದರ ಇತರರು ಇದ್ದರು.
Leave a Comment