ಹಳಿಯಾಳ:- ಹಳಿಯಾಳದಲ್ಲಿ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು 5 ತಿಂಗಳ ಕಾಲ ನಡೆಯುವ ಈ ಪ್ರಕ್ರಿಯೆ ಸಂದರ್ಭದಲ್ಲಿ ಕಬ್ಬು ಸಾಗಿಸುವ ವಾಹನಗಳಿಂದ ಕಾನೂನು ಉಲ್ಲಂಘನೆಯಾಗುತ್ತಿದ್ದು ತಾಲೂಕಾಡಳಿತ ಈ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪಟ್ಟಣದ ಹಲವಾರು ಸಂಘಟನೆಯವರು ಜಂಟಿಯಾಗಿ ಸಾರ್ವಜನೀಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಅವರಿಗೆ ಸಲ್ಲಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ, ಜೀಜಾಮಾತಾ ಕ್ಷತ್ರೀಯ ಮರಾಠಾ ಮಹಿಳಾ ಮಂಡಳ, ಹಿರಿಯ ನಾಗರೀಕರ ವೇದಿಕೆ, ಜಯ ಕರ್ನಾಟಕ ಸಂಘಟನೆ, ಹಿರಿಯ ನಾಗರೀಕರ ವೇದಿಕೆ, ಸಿಂಹಕೂಟ ಹಳಿಯಾಳ, ಮಂಜು ಡ್ಯಾನ್ಸ್ ಮತ್ತು ಕರಾಟೆ ಸ್ಕೂಲ್ ರವರು ಜಂಟಿಯಾಗಿ ತಹಶೀಲ್ದಾರ್, ಹಳಿಯಾಳ ಪೋಲಿಸ್ ಇಲಾಖೆ, ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಹಳಿಯಾಳದ ಹುಲ್ಲಟ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇ.ಐ.ಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು ಪ್ರತಿನಿತ್ಯ ಕಬ್ಬು ಸಾಗಿಸುವ ನೂರಾರು ವಾಹನಗಳು ಪಟ್ಟಣದ ಮೂಲಕ ಸಾಗುತ್ತವೆ ಈ ಸಂದರ್ಭದಲ್ಲಿ ನಡೆಯುವ ಅಪಘಾತಗಳಿಂದ ಸಾರ್ವಜನೀಕರು, ಶಾಲಾ ಮಕ್ಕಳು, ರಸ್ತೆ ಪಕ್ಕದ ಮನೆಗಳ ಜನರು ತಮ್ಮ ಜೀವವನ್ನು ದೇವರ ಮೇಲೆ ಬಾರ ಹಾಕಿ ಇರುವ ಪರಿಸ್ಥಿತಿಯು ನಿರ್ಮಾಣವಾಗಿರುವುದು ಈವರೆಗೆ ನಡೆದಿರುವ ಹಲವು ದುರ್ಘಟನೆಗಳೇ ಇದಕ್ಕೆ ಸಾಕ್ಷಿಯಾಗಿದ್ದು ಇವುಗಳನ್ನು ತಡೆಯುವುದು ಅತ್ಯಾವಶ್ಯಕವಾಗಿದೆ ಎಂದಿದ್ದಾರೆ.
ಅದಕ್ಕಾಗಿ ಎಲ್ಲಾ ಸಂಘಟನೆಗಳು ಒಟ್ಟೂಗೂಡಿ ಈ ಸಮಸ್ಯೆಗಳನ್ನು ಬಗೆಹರಿಸಲು ನಾವುಗಳು ಕೆಲವು ಬೇಡಿಕೆಗಳನ್ನು ಇಡುತ್ತಿದ್ದು ಕೂಡಲೇ ಸಂಬಂಧಪಟ್ಟವರು ಈ ಬೇಡಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿದಿಗಿಳಿದು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಬೇಡಿಕೆಗಳು:- ಟ್ರಾಕ್ಟರ್/ಟ್ರಕ್ಕ ಮೇಲೆ ಒವರ ಲೋಡ್ ಹಾಕದಂತೆ ನಿರ್ಭಂದ ವಿಧಿಸುವುದು, ಆರ್.ಟಿ.ಓ ಪರ್ಮಿಟ್ ಮತ್ತು ನಿಯಮಗಳಂತೆ ವಾಹನಗಳನ್ನು ವ್ಯವಸ್ಥಿತವಾಗಿ ಇಡುವುದು. ಊರ ಒಳಗಡೆ ಎಲ್ಲೆಂದರಲ್ಲಿ ಮುಖ್ಯವಾಗಿ ಪುಟ್ಪಾತಗಳಲ್ಲಿ ವಾಹನಗಳನ್ನು ನಿಲ್ಲಿಸಲು ನಿರ್ಭಂದಿಸುವುದು. ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮುಖ್ಯ ರಸ್ತೆಯಿಂದ ಅವರ ಕಾರ್ಖಾನೆಗಳಿಗೆ ಹೋಗುವ ದಾರಿಯನ್ನು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳುವುದು. ಟ್ರಾಕ್ಟರ ಹಾಗೂ ಟ್ರಕ್ಕಗಳನ್ನು ರಸ್ತೆಬದಿ ರಾತ್ರಿ ವೇಳೆಯಲ್ಲಿ ಅವಘಡವಾಗದಂತೆ ನಿಲ್ಲಿಸಲು ಸೂಚಿಸುವುದು. ಟ್ರಾಕ್ಟರ ಟೇಲರ ಹಾಗೂ ಟ್ರಕ್ಕಗಳಿಗೆ ಕಡ್ಡಾಯವಾಗಿ ರೆಡಿಯಮ್ ಪಟ್ಟಿ ಅಳವಡಿಸುವುದು.
ಟ್ರಾಕ್ಟರಗಳು ಹಳಿಯಾಳ ನಗರದಲ್ಲಿ ಸಂಚರಿಸುವಾಗ ಧ್ವನಿ ಮುದ್ರಕ (ಟೇಪ ರಿಕಾರ್ಡ) ಬಳಸದಂತೆ ನಿರ್ಭಂದಿಸುವುದು. ಕಾರ್ಖಾನೆಯಿಂದ ಹೊರಗೆ ಹಾಕುತ್ತಿರುವ ಹಾರುಬೂದಿ (ಡಸ್ಟ) ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರವಾಗಿದೆ ಈ ಸಮಸ್ಯೆಯನ್ನು ನಿವಾರಿಸಲು ಕಾರ್ಖಾನೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಖಾನೆಗೆ ಸಾಗುವ ಹಾದಿಯಲ್ಲಿ ಶಾಲಾ-ಕಾಲೇಜುಗಳು ಇರುವುದರಿಂದ ಶಾಲಾ ಆರಂಭ ಹಾಗೂ ಬಿಡುವ ವೇಳೆಯಲ್ಲಿ ಕಬ್ಬು ಸಾಗಿಸುವ ವಾಹನಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕೆಂದು ಆಗ್ರಹಿಸಲಾಗಿದೆ.
ಕರವೇ ಅಧ್ಯಕ್ಷ ಬಸವರಾಜ ಬೇಂಡಿಗೇರಿಮಠ, ಜೀಜಾಮಾತಾ ಸಂಘ ಅಧ್ಯಕ್ಷೆ ಮಂಗಲಾ ಕಶೀಲಕರ, ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ, ಪ್ರಮುಖರಾದ ಚಂದ್ರಕಾಂತ ದುರ್ವೆ, ಜಿಎಸ್ ಗಂಗಾಧರ, ಭಾರತಿ ಬಿರ್ಜೆ, ಮಹೇಶ ಆನೆಗುಂದಿ, ವಿನೋದ ದೊಡ್ಮನಿ ಮೊದಲಾವರು ಇದ್ದರು.
Leave a Comment