ಹಳಿಯಾಳ: ರೈತ ಬಾಂಧವರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಮಾಡಿ ತಮ್ಮ ಆರ್ಥಿಕಮಟ್ಟವನ್ನು ಸುಧಾರಿಸಿಕೊಂಡು ಹೋಗಬಹುದು. ಸಣ್ಣ ರೈತರು ಕೃಷಿ ಚಟುವಟಿಕೆಗಳಿಗೆ ಹೆಚ್ಚು ಯಂತ್ರೋಪಕರಣಗಳನ್ನು ಬಳಸದೇ ಜಾನುವಾರುಗಳನ್ನು ಬಳಸಿ ಕೃಷಿ ಮಾಡಿದ್ದಲ್ಲಿ ಹೆಚ್ಚು ಅನುಕೂಲಕರವಾಗಲಿದೆ ಎಂದು ಕಾವಲವಾಡ ಜಿಲ್ಲಾ ಪಂಚಾಯತ ಸದಸ್ಯೆ ಲಕ್ಷ್ಮೀ ಸುಭಾಷ ಕೊರ್ವೇಕರ ಹೇಳಿದರು.
ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ತಾಲೂಕ ಪಂಚಾಯತ ಹಳಿಯಾಳ, ತಾಲೂಕಾ ಪಶು ವೈದ್ಯಕೀಯ ಮತ್ತು ಸಂಗೋಪನೆ ಇಲಾಖೆ ಹಳಿಯಾಳ ಮತ್ತು ಶ್ರೀ ತುಳಜಾಭವಾನಿ ಧಾರ್ಮಿಕ, ಶೈಕ್ಷಣ ಕ ಮತ್ತು ಧರ್ಮಾರ್ಥ ಟ್ರಸ್ಟ್ ಹಳಿಯಾಳ ಸಹಯೋಗದಲ್ಲಿ ಹಳಿಯಾಳ ತಾಲೂಕಿನ ದೊಡ್ಡಕೊಪ್ಪ ಗ್ರಾಮದಲ್ಲಿ ನಡೆದ ಜಾನುವಾರು ಪ್ರದರ್ಶನ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕೆನರಾಬ್ಯಾಂಕ ದೇಶಪಾಂಡೆ ಆರ್ಸೆಟಿ ನಿರ್ದೇಶಕ ನಿತ್ಯಾನಂದ ಆರ್ ವೈದ್ಯ ಮಾತನಾಡಿ ದೊಡ್ಡಕೊಪ್ಪ ಗ್ರಾಮವನ್ನು ದತ್ತು ಪಡೆದು ಆದರ್ಶ ಗ್ರಾಮವನ್ನಾಗಿ ಮಾಡುವ ಉದ್ದೇಶ ಹೊಂದಿರುವ ಸಂಸ್ಥೆ ಈ ನಿಟ್ಟಿನಲ್ಲಿ ಸರಕಾರದ ವಿವಿಧ ಇಲಾಖೆಯೊಂದಿಗೆ ಜನರಲ್ಲಿ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮುದಾಯದ ಸಹಭಾಗಿತ್ವ ಅತಿಅವಶ್ಯ. ಈ ನಿಟ್ಟಿನಲ್ಲಿ ಈ ಶಿಬಿರವು ರೈತಾಪಿ ಸಮುದಾಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು.
ಶಿಬಿರದಲ್ಲಿ ಜನಗಾ ಗ್ರಾ.ಪಂ ಅಧ್ಯಕ್ಷ ಮಹಾದೇವ ಪವಾರ, ಸದಸ್ಯೆ ಶಾರದಾ ಅರ್ಜುನ ಮಂಜನ್ನವರ, ಸದಸ್ಯ ಗೋಕುಲ ಗೌಡಾ, ಎಸ್.ಡಿ.ಎಮ್.ಸಿ ಅಧ್ಯಕ್ಷ ಬ್ರಹ್ಮಾ ಧಾರವಾಡಕರ, ಸಂಸ್ಥೆಯ ವಿನಾಯಕ ಚವ್ಹಾಣ, ಪಿಡಿಓ ಎಮ್.ಎಸ್. ಸವಣೂರ, ಊರಿನ ಹಿರಿಯರಾದ ಗಣಪತಿ ಸುಳಗೇಕರ, ವಿಠಲ ಚೋರಲೇಕರ ಹಾಗೂ ಆದರ್ಶ ಗ್ರಾಮ ಸಮಿತಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. ಈ ಶಿಬಿರದಲ್ಲಿ ಸುಮಾರು 100 ಕ್ಕೂ ಹೆಚ್ಚು ಮಿಶ್ರ ತಳಿ ಆಕಳು, ಎಮ್ಮೆ ಮತ್ತು ಎತ್ತುಗಳು ಪಾಲ್ಗೊಂಡಿದ್ದವು.
ಶಿಬಿರದಲ್ಲಿ ಸಹಾಯಕ ನಿರ್ದೇಶಕ ಡಾ. ಕೆ.ಎಮ್ ನದಾಫ್ ತಾಂತ್ರಿಕ ಮಾಹಿತಿಯನ್ನು ನೀಡಿದರು. ಶಿಬಿರದ ತೀರ್ಪುಗಾರರಾಗಿ ಯಲ್ಲಾಪುರ ಪಶು ವೈದ್ಯಾಧಿಕಾರಿ ಡಾ. ಶ್ರೀನಿವಾಸ ಪಾಟೀಲ, ಹಳಿಯಾಳ ಪಶು ವೈದ್ಯಾಧಿಕಾರಿ ಡಾ. ಶಿವಾನಂದ ಬಿರಾದಾರ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಗೂ ಪೌಷ್ಠಿಕ ಆಹಾರವನ್ನು ವಿತರಿಸಿ ವಿವಿಧ ರೋಗಗಳ ಹಾಗೂ ಸುರಕ್ಷಾ ಪದ್ದತಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಪ್ರದರ್ಶನದಲ್ಲಿ ಭಾಗವಹಿಸಿದ ವಿಜೇತ ಹಾಗೂ ಪ್ರದರ್ಶನಗೊಂಡ ಎಲ್ಲ ಜಾನುವಾರುಗಳ ಮಾಲೀಕರಿಗೆ ಪಶು ಆಹಾರವನ್ನು ವಿತರಿಸಲಾಯಿತು.
Leave a Comment