ಹೊನ್ನಾವರ : ಸಾಗರದಲ್ಲಿ ಮಂಗನ ಕಾಯಿಲೆಗೆ ವ್ಯಕ್ತಿಯೊಬ್ಬ ಬಲಿಯಾದ ಬೆನ್ನಲ್ಲಿಯೇ ಇನ್ನಿತರ ಪ್ರದೇಶಗಳಲ್ಲಿ ಈ ಕಾಯಿಲೆ ಹರಡುವುದನ್ನು ತಡೆಯಲು ಆರೋಗ್ಯ ಇಲಾಖೆ ಮುಂದಾಗಿದ್ದು ಮಂಗನ ಕಾಯಿಲೆ ತಡೆಯುವ ಕುರಿತು ಸಂಭವನೀಯ ಪ್ರದೇಶದಲ್ಲಿ ಲಸಿಕೆ ನೀಡಲಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೆಫ್ಡಿ ಪ್ರಭಾರ ವೈದ್ಯಾಧಿಕಾರಿ ಡಾ. ಸತೀಶ ಶೇಟ್ ಹೇಳಿದ್ದಾರೆ.
ಈ ವರ್ಷ ಸಾಗರ ತಾಲೂಕಿನಲ್ಲಿ ಕಾಯಿಲೆ ಗಂಭೀರವಾಗಿದ್ದು ಸಾವು ಸಂಭವಿಸಿದ ಕಾರಣ ಇಲ್ಲಿ ಇಲಾಖೆಯ ಜೊತೆ ಅರಣ್ಯ ಪ್ರದೇಶದಲ್ಲಿರುವ ಜನ ಸಹಕರಿಸಿ ಈ ರೋಗ ತಡೆಯಬೇಕು ಎಂದು ಹೇಳಿದ್ದಾರೆ. ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಈ ಪ್ರದೇಶದ 19 ಜನ ಜ್ವರ ಪೀಡಿತರಾಗಿದ್ದರು. ಅವರ ರಕ್ತ ಪರೀಕ್ಷಿಸಿದಾಗ ಪೊಸಿಟಿವ್ ಬಂದಿತ್ತು. 2 ತಿಂಗಳಲ್ಲಿ 23 ಮಂಗಗಳು ಸತ್ತಿದ್ದವು. ಅವುಗಳಲ್ಲಿ 2 ಮಂಗಗಳ ಶವ ಪರೀಕ್ಷೆ ಮಾಡಲಾಗಿತ್ತು. 13 ಉಣ್ಣೆಗಳನ್ನು ಸಂಗ್ರಹಿಸಲಾಗಿತ್ತು. ಯಾವುದೇ ಸಾವು ಸಂಭವಿಸಿರಲಿಲ್ಲ.
ಕೆಲವು ವರ್ಷ ವೈರಾಣುಗಳು ಅಪಾಯಕಾರಿ ಆಗಿರುವುದು ಕಂಡುಬಂದಿದ್ದು, ಆದ್ದರಿಂದ ಈ ವರ್ಷ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಹೊನ್ನಾವರ ತಾಲೂಕಿನ ಗೇರಸೊಪ್ಪಾ, ಖರ್ವಾ, ಕಡತೋಕಾ, ಸಂಶಿ, ಬಳಕೂರ, ಮಂಕಿ, ಹೊಸಾಡ, ಭಟ್ಕಳ ತಾಲೂಕಿನ ಮುರ್ಡೇಶ್ವರ, ಸಿದ್ಧಾಪುರ ತಾಲೂಕಿನ ಕಾನಸೂರು, ಜೋಯಿಡಾ ತಾಲೂಕಿನ ಕ್ಯಸಲ್ರಾಕ್ಗಳಲ್ಲಿ ವಿವಿಧ ಹಂತಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 12245 ಡೋಸ್ ಲಸಿಕೆ ನೀಡಲಾಗಿದೆ. ಸ್ಥಳೀಯ ಆರೋಗ್ಯ ಕೇಂದ್ರಗಳ ನೆರವಿನಿಂದ ಈ ಅಭಿಯಾನ ನಡೆದಿದೆ.
ಕಾಡಿಗೆ ಹೋಗುವವರಿಗೆ ಎಎಂಪಿ ತೈಲವನ್ನು ಕಾಲಿಗೆ ಹಚ್ಚಿಕೊಂಡು ಹೋಗಲು ಉಚಿತವಾಗಿ ನೀಡಲಾಗುತ್ತಿದೆ. ಸಂಶಯಾಸ್ಪದ ಜ್ವರ ಬಂದರೆ ತಕ್ಷಣ ಆಸ್ಪತ್ರೆ ಸೇರಿಸಬೇಕು ಮತ್ತು ಕೇಂದ್ರಕ್ಕೆ ತಿಳಿಸಬೇಕು ಎಂದು ಸೂಚಿಸಲಾಗಿದ್ದು, ಖಾಸಗಿ ಆಸ್ಪತ್ರೆಗಳಿಗೂ ಪತ್ರ ಬರೆಯಲಾಗಿದೆ ಎಂದು ಡಾ.ಶೇಟ್ ಹೇಳಿದ್ದಾರೆ.
Leave a Comment