ಹೊನ್ನಾವರ
ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆಯ ಆಶ್ರಯದಲ್ಲಿ 10 ನೇ ವರ್ಷದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಫೆಬ್ರವರಿ 2 ರಿಂದ 5 ರ ತನಕ ನಡೆಯಲಿದೆ ಎಂದು ಶ್ರೀಮಯ ಕಲಾಕೇಂದ್ರದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.
ಪಟ್ಟಣದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ವಿವಿಧ ಭಾಗಗಳಿಂದ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ರಾಜಸ್ಥಾನ, ಓಡಿಸ್ಸಾ ಮುಂತಾದ ರಾಜ್ಯಗಳಿಂದ ಹಾಗೂ ಕರ್ನಾಕಟದ ಕಲಾತಂಡಗಳಿಂದ ಕಲಾಪ್ರದರ್ಶನ ನಡೆಯಲಿದೆ. ಪ್ರದರ್ಶನಗೊಳ್ಳುವ ಪ್ರಲ್ಹಾದ ಎಂಬ ನಾಟಕ ಯಕ್ಷಗಾನಕ್ಕೆ ಹತ್ತಿರವಾಗಿದೆ. ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ, ಕೆರಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರಧಾನ, ಶಾಲಾ ಮಕ್ಕಳಿಗಾಗಿ ಸಾಂಸ್ಕøತಿಕ ಕಾರ್ಯಕ್ರಮ, ಅಪೂರ್ವ ಪೂರ್ವ ಸ್ಮರಣೆ, ತಾಳಮದ್ದಲೆ ವಿವಿಧ ಕ್ಷೇತ್ರಗಳ 12 ಸಾಧಕರಿಗೆ ಸನ್ಮಾನ, ನಾಲ್ವರಿಗೆ ಕಲಾಪೋಷಕ ಪ್ರಶಸ್ತಿ ಪ್ರಧಾನ ಮುಂತಾದ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
10 ನೇ ವರ್ಷದ ನಾಟ್ಯೋತ್ಸವವನ್ನು 10 ದಿನಗಳ ಕಾಲ ವೈಭವದಿಂದ ಮಾಡಬೇಕು ಎಂಬ ಆಕಾಂಕ್ಷೆ ಇತ್ತು. ಇದಕ್ಕೆ ಬೇಕಾದ ಸಹಾಯದ ಕುರಿತು ಸರಕಾರದಿಂದ ನಿಶ್ಚಿತ ಉತ್ತರ ಬರಲಿಲ್ಲ. ಆದ್ದರಿಂದ ಅನಿವಾರ್ಯವಾಗಿ ನಾಲ್ಕು ದಿನಗಳಿಗೆ ರಾಷ್ಟ್ರೀಯ ನಾಟ್ಯೋತ್ಸವವನ್ನು ಸೀಮಿತಗೊಳಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಮಾತನಾಡಿ ಕೆರೆಮನೆ ಶಂಭು ಹೆಗಡೆಯವರ ಆಶಯದಂತೆ ನಾಟ್ಯೋತ್ಸವವನ್ನು ನಡೆಸಿಕೊಂಡು ಬರಲಾಗಿದೆ. ಯಕ್ಷಗಾನ ಮಾತ್ರವಲ್ಲದೇ ಎಲ್ಲರೀತಿಯ ಕಲೆಗಳ ಪ್ರದರ್ಶನ ನಡೆಯುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆರೆಮನೆ ಶ್ರೀಧರ ಹೆಗಡೆ ಉಪಸ್ಥಿತರಿದ್ದರು.
Leave a Comment