ಹೊನ್ನಾವರ: ಕಳೆದ ಲೋಕಸಭಾ ಚುನಾವಣೆಯಲ್ಲಿ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸಲಾಗದ ಕೇಂದ್ರದ ಮೋದಿ ನೇತೃತ್ವದ ಬಿ.ಜೆ.ಪಿ ಸರಕಾರ, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೇಸ್ ಪಕ್ಷದ ಮೇಲೆ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದು ಕಾಂಗ್ರೇಸ್ ಕಾರ್ಯಕರ್ತರು ದಿಟ್ಟ ಉತ್ತರ ನೀಡುವಂತೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಕರೆ ನೀಡಿದರು.
ಅವರು ಮುಂಬರುವ ಹೊನ್ನಾವರ ಪಟ್ಟಣ ಪಂಚಾಯತ ಚುನಾವಣಾ ಪ್ರಯುಕ್ತ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ನಗರದ ನ್ಯೂ ಇಂಗ್ಲೀಷ್ ಸ್ಕೂಲ್ ಸಭಾಭವನದಲ್ಲಿ ಏರ್ಪಡಿಸಿದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಮೋದಿ ಸರಕಾರದ ಸುಳ್ಳು ಭರವಸೆಗಳಿಂದ ಜನತೆ ಕಂಗಾಲಾಗಿದ್ದು ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿ.ಜೆ.ಪಿ ಸರಕಾರಕ್ಕೆ ಹೀನಾಯ ಸೋಲಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಕಾಂಗ್ರೇಸ್ ಸರಕಾರ ರಚನೆಯಾಗುವುದು ಖಚಿತ ಎಂದರು. ಸುಳ್ಳು ಹೇಳುವುದೇ ಬಿ.ಜೆ.ಪಿಯ ಕೆಲಸವಾಗಿದ್ದು ಪಟ್ಟಣ ಪಂಚಾಯತ ಚುನಾವಣಾ ಸಂದರ್ಭದಲ್ಲಿ ಇವುಗಳನ್ನೆಲ್ಲಾ ಮತದಾರರ ಗಮನಕ್ಕೆ ತಂದು ಉತ್ತಮ ಆಡಳಿತ ಕಾಂಗ್ರೇಸ್ ಪಕ್ಷದಿಂದ ಸಾಧ್ಯ ಅನ್ನುವುದನ್ನು ಜನತೆಗೆ ಮನವರಿಕೆ ಮಾಡುವಂತೆ ಭೀಮಣ್ಣ ಮನವಿ ಮಾಡಿದರು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಉತ್ತಮವಾಗಿ, ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿ, ಎಲ್ಲರನ್ನೂ ಒಗ್ಗೂಡಿಸಿ ಪಟ್ಟಣ ಪಂಚಾಯತ ಚುನಾವಣೆ ಎದುರಿಸಿದರೆ ಕಾಂಗ್ರೇಸ್ ಪಕ್ಷ ಪಟ್ಟಣ ಪಂಚಾಯತ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ನನ್ನ ಶಾಸಕತ್ವದ ಅವಧಿಯಲ್ಲಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ತಂದು ಅಭಿವೃದ್ಧಿ ನಡೆಸಿದರೂ, ವಿರೋಧ ಪಕ್ಷಗಳ ಕೀಳು ಅಪಪ್ರಚಾರಕ್ಕೆ ಜನ ತಲೆಬಾಗಿದರು ಎಂದು ಬೇಸರ ವ್ಯಕ್ತಪಡಿಸಿದರು. ಮುಂಬರುವ ಪಟ್ಟಣ ಪಂಚಾಯತ ಚುನಾವಣೆಯಲ್ಲಿಯೂ ವಿರೋಧಿಗಳು ಅಪಪ್ರಚಾರದಲ್ಲಿ ತೊಡಗುವುದರಲ್ಲಿ ಯಾವುದೇ ಅನುಮಾನವಿಲ್ಲದ ಕಾರಣ ಕಾರ್ಯಕರ್ತರು ಈ ಕುರಿತಂತೆ ಎಚ್ಚರದಿಂದಿರಲೂ ಶಾರದಾ ಶೆಟ್ಟಿ ಕರೆ ನೀಡಿದರು.
ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಎನ್ ಸುಬ್ರಹ್ಮಣ್ಯ ಮಾತನಾಡಿ ಪಟ್ಟಣದಲ್ಲಿ ಈ ಬಾರಿ ಕಾಂಗ್ರೇಸ್ ಪಕ್ಷಕ್ಕೆ ಉತ್ತಮ ವಾತಾವರಣವಿದೆ ಎಂದರು ಆದರೂ ಕಾರ್ಯಕರ್ತರು, ಪಕ್ಷದ ಮುಖಂಡರು ಚುನಾವಣೆಯನ್ನು ಲಘುವಾಗಿ ಪರಿಗಣ ಸದೆ ಗಂಭೀರವಾಗಿ ಎದುರಿಸಿ ಗೆಲುವಿನ ಗುರಿ ತಲುಪುವಂತೆ ನೆರೆದ ಕಾರ್ಯಕರ್ತರಿಗೆ ಹುರಿದುಂಬಿಸಿದರು. ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್ ತೆಂಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 3 ತಿಂಗಳಿನಿಂದ ಪಟ್ಟಣ ಪಂಚಾಯತ ಚುನಾವಣೆ ಕುರಿತು ನಾವು ಗಂಭೀರವಾಗಿ ಅವಲೋಕಿಸುತ್ತಿದ್ದು ಎಲ್ಲಾ ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ವಾರ್ಡ ಸಮಿತಿಗಳನ್ನು ರಚಿಸಿದ್ದೇವೆ. ಕಾರ್ಯಕರ್ತರು, ಮುಖಂಡರ ನಡುವೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ನಿವಾರಿಸಿದ್ದೇವೆ. ಪಕ್ಷದ ವರಿಷ್ಠ ಮಂಡಳಿಯ ತೀರ್ಮಾನದಂತೆ ಸ್ಥಳೀಯ ವಾರ್ಡ ಮಟ್ಟದಲ್ಲಿ ಸರ್ವಾನುಮತದ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರಯತ್ನಿಸುತ್ತೇವೆ ಎಂದರು.
ಹೊನ್ನಾವರ ಪಟ್ಟಣ ಪಂಚಾಯತ ಚುನಾವಣೆಗೆ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶಂಭು ಶೆಟ್ಟಿ, ಕಾರ್ಯದರ್ಶಿ ನಾಗೇಶ ನಾಯ್ಕ ಮಾತನಾಡಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಚುನಾವಣೆ ಎದುರಿಸುವಂತೆ ಕರೆ ನೀಡಿದರು.
ಪಟ್ಟಣ ಪಂಚಾಯತ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ಬಾಲಚಂದ್ರ ನಾಯ್ಕ, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ ಉಪಸ್ಥಿತರಿದ್ದರು. ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯದರ್ಶಿ ಲಂಬೋಧರ ನಾಯ್ಕ ವಂದಿಸಿದರು.
Leave a Comment