ಬೆಂಗಳೂರು, ಜನವರಿ 29, 2019- ಕೇಂದ್ರದ ಮಾಜಿ ಸಚಿವ, ಸಮಾಜವಾದಿ ನಾಯಕ ಮತ್ತು ಹೆಸರಾಂತ ಕಾರ್ಮಿಕ ಮುಖಂಡ ಜಾರ್ಜ್ ಫರ್ನಾಂಡಿಸ್ ಅವರ ನಿಧನದಿಂದ ದೇಶದ ಜನ ಸಮುದಾಯಗಳಿಗೆ ಅಪಾರ ನಷ್ಟವಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶೋಕಿಸಿದ್ದಾರೆ.
“ಕರ್ನಾಟಕದ ಮಣ್ಣಿನ ಮಗನಾದ ಫರ್ನಾಂಡಿಸ್ ಅವರು ದೂರದ ಮುಂಬೈ ಮತ್ತು ಬಿಹಾರಗಳಲ್ಲಿ ತಮ್ಮ ರಾಜಕೀಯ ನೆಲೆ ಕಂಡುಕೊಂಡು, ಜನಾನುರಾಗಿಯಾಗಿದ್ದು ಒಂದು ಅಭೂತಪೂರ್ವ ಸಂಗತಿಯಯಾಗಿದೆ. ಅವರು ತಮ್ಮ ಸಚ್ಚಾರಿತ್ರ್ಯ ಮತ್ತು ಅಸಾಧಾರಣವಾದ ಪ್ರಾಮಾಣಿಕತೆಗಳಿಂದ ಶೋಷಿತ ವರ್ಗಗಳ ಕಣ್ಮಣಿಯಾಗಿದ್ದರು,’’ ಎಂದು ಅವರು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
“ಕೇಂದ್ರ ಸರಕಾರದಲ್ಲಿ ಹಲವು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಫರ್ನಾಂಡಿಸ್ ಅವರು, ತಮ್ಮ ಸರಳತೆ ಮತ್ತು ಹೋರಾಟದ ಕೆಚ್ಚಿನಿಂದಲೂ ಅನನ್ಯರಾಗಿದ್ದರು. ಅವರ ಆ ಗುಣಗಳು ಬಹುಕಾಲ ಮಾದರಿಯಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ,’’ ಎಂದು ದೇಶಪಾಂಡೆ ಕಂಬನಿ ಮಿಡಿದಿದ್ದಾರೆ.
ದೇವರು ಫರ್ನಾಂಡಿಸ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.
Leave a Comment