ವರದಿ :- ಗಣಪತಿ ವಾಗಳ್ಳಿ
ಯಲ್ಲಾಪುರ:
ದೇಶದ ವಿವಿಧ ಮೂಲೆಗಳ ಕತ್ತಲು ನಿವಾರಿಸಿ ಬೆಳಕು ನೀಡುವ ಕೈಗಾ ಅಣುಸ್ಥಾವರದ ಬುಡದಲ್ಲಿಯೇ ಸುಮಾರು ಮೂರ್ನಾಲ್ಕು ಗ್ರಾಮಗಳು ಇದುವರೆಗೂ ವಿದ್ಯುತ್ ಸಂಪರ್ಕ ಸಿಗದೇ, ಅಲ್ಲಿನ ನಿವಾಸಿಗಳು ಕತ್ತಲೆಯಲ್ಲಿ ದಿನಕಳೆಯುವಂತಾಗಿದೆ.
ತಾಲೂಕಿನ ಗಡಿ ಪ್ರದೇಶವಾದ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಮೆಗುಳೆ, ಲೆಕ್ಕೆಮನೆ, ಕಾರವಾರ ತಾಲೂಕಿನ ಮಲ್ಲಾಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಅತ್ತಿಸವಲು, ಕಬ್ಬಿನಗುಳೆ ಮುಂತಾದ ಗ್ರಾಮಗಳ ನಿವಾಸಿಗಳು ಸ್ವಾತಂತ್ರ್ಯ ಲಭಿಸಿ ಇಷ್ಟು ವರ್ಷಗಳು ಕಳೆದರೂ ಮೂಲಭೂತ ಸೌಕರ್ಯವಾದ ವಿದ್ಯುತ್ ಸಂಪರ್ಕ ವಿಲ್ಲದೇ ಪರದಾಡುವಂತಾಗಿದೆ. ಕಾಟಾಚಾರಕ್ಕೆ ಕಂಬ, ತಂತಿ, ಟ್ರಾನ್ಸ್ಫಾರ್ಮಗಳನ್ನು ಜೋಡಿಸಿ ಸುಮಾರು ನಾಲ್ಕು ವರ್ಷಗಳು ಕಳೆದರೂ ಈ ಗ್ರಾಮಕ್ಕೆ ಸಂಪರ್ಕ ನೀಡಲು ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಈ ಕಡೆ ಮುಖ ಮಾಡದೇ ಇರುವುದು ಅವರಿಗೆ ಜನರ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತದೆ. ಅಂಕೋಲಾ ತಾಲೂಕು ವ್ಯಾಪ್ತಿಯ 18 ಹಾಗೂ ಕಾರವಾರ ತಾಲೂಕಿನ 14 ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಈ ಕುರಿತು ಅಧಿಕಾರಿಗಳು ಗಮನಹರಿಸಿ ಆದಷ್ಟು ಶೀಘ್ರದಲ್ಲಿ ಸಂಪರ್ಕ ನೀಡಬೇಕು ಎಂದು ಈ ಭಾಗದ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.
ಮೀಟರ್ ಅಳವಡಿಕೆ, ಆದರೆ ವಿದ್ಯುತ್ ಇಲ್ಲ………….
ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಈ ಭಾಗಕ್ಕೆ ಕಂಬ, ಟ್ರಾನ್ಸಫಾರ್ಮರ್ ಹಾಗೂ ಮನೆಗಳಿಗೆ ಮೀಟರ್ ಅಳವಡಿಕೆ ಮಾಡಿದ್ದಾರೆ. ಕಾಟಾಚಾರಕ್ಕೆ ಕಂಬಗಳನ್ನು ಅಳವಡಿಸಿದ್ದಾರೆ. ದೇಶಕ್ಕೆ ಬೆಳಕು ನೀಡಲು ಈ ಭಾಗದ ಹಲವಾರು ಸಾರ್ವಜನಿಕರು ತಮ್ಮ ಭೂಮಿಗಳನ್ನು ತ್ಯಾಗ ಮಾಡಿದ್ದಾರೆ. ಆದರೆ “ದೀಪದ ಬುಡದಲ್ಲಿ ಕತ್ತಲು” ಎಂಬಂತಾಗಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿ, ವಿದ್ಯುತ್ ಸಂಪರ್ಕ ನೀಡಲು ವಿನಂತಿಸಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಈ ಭಾಗದ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಚಿಮಣಿಯಲ್ಲಿ ಓದು…….
ತಾಲೂಕು ಕೇಂದ್ರದಿಂದ ಸುಮಾರು 45 ರಿಂದ 50 ಕಿ.ಮೀ ದೂರದಲ್ಲಿರುವ ಈ ಗ್ರಾಮಗಳು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ತಾಲೂಕು ಕೇಂದ್ರಗಳು ದೂರವಾಘಿರುವುದರಿಂದ ಸರಿಯಾದ ರಸ್ತೆಗಳು ಇಲ್ಲದಿರುವ ಕಾರಣ ವಿದ್ಯಾರ್ಥಿಗಳು ನಡೆದುಕೊಂಡು ಶಾಲೆಗೆ ತೆರಳಬೇಕಾಗಿದೆ. ಶಾಲಾ ಅವಧಿ ಮುಗಿದ ತಕ್ಷಣ ಮನೆಗೆ ವಾಪಸ್ಸಾಗುವುದು ಸಂಜೆಯಾಗುತ್ತದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳ ಕಷ್ಟ ಹೇಳತೀರದು. ಶಾಲೆ-ಕಾಲೇಜುಗಳಿಂದ ಬಂದ ತಕ್ಷಣ ಅಭ್ಯಾಸಗಳನ್ನು ಮುಗಿಸಿಕೊಳ್ಳಬೇಕು. ಇಲ್ಲದಿದ್ದರೇ ರಾತ್ರಿ ವೇಳೆ ಚಿಮಣಿ ದೀಪದಲ್ಲಿ ಓದುವ ಪರಿಸ್ಥಿತಿಯಿದ್ದು, ಪರೀಕ್ಷೆ ಸಮಯದಲ್ಲಿ ಮತ್ತಷ್ಟು ತೊಂದರೆಯಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಹೊರ ಪ್ರಪಂಚದಲ್ಲಿ ನಡೆಯುತ್ತಿರುವ ಆಗು-ಹೋಗುಗಳನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ.
ಆದಷ್ಟು ಶೀಘ್ರದಲ್ಲಿ ಈ ಭಾಗದ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡದೇ ಇದ್ದರೆ, ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿದಷ್ಕರಿಸಿ, ಚುನಾವಣಾ ಸಮಯದಲ್ಲಿ ಮತ ಕೇಳಲು ಆಗಮಿಸುವ ಎಲ್ಲ ಪಕ್ಷದ ನಾಯಕರಿಗೆ ಗೇರಾವ್ ಹಾಕಲು ನಿರ್ಧರಿಸುತ್ತೇವೆ. ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ 63 ರನ್ನು ಒಂದು ದಿನ ಸಂಪೂರ್ಣ ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತೇವೆ ಎಂದು ಈ ಭಾಗದ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Leave a Comment