ಹೊನ್ನಾವರ .ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹೊನ್ನಾವರ ಘಟಕದ ವಾರ್ಷಿಕ ಸ್ನೇಹ ಸಮ್ಮೇಲನ, ಪ್ರತಿಭಾ ಪುರಸ್ಕಾರ, ಸನ್ಮಾನ, ವಿಚಾರ ಸಂಕಿರಣ ಕಾರ್ಯಕ್ರಮ ‘ಪ್ರತಿಭೋದಯ’ ಹೊನ್ನಾವರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸರ್ಕಾರ ನೌಕರರ ಸಂಘದ ಕೋಶಾಧ್ಯಕ್ಷರಾದ ಎನ್. ಷಡಕ್ಷರಯ್ಯ ಮಾತನಾಡುತ್ತ, ಸರ್ಕಾರಿ ನೌಕರರ ಸಂಘ ಸ್ವಾತಂತ್ರ್ಯ ಪೂರ್ವದಿಂದಲೂ ಅಖಂಡ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸಂಬಂಧಿಸಿದ ಏಕೈಕ ಸಂಘ ಎಂದರೆ ರಾಜ್ಯ ಸರ್ಕಾರಿ ನೌಕರರ ಸಂಘ. ನೌಕರರ ಬೇಕು-ಬೇಡಿಕೆಗಳನ್ನು ಆಯಾಯ ಕಾಲಕ್ಕೆ ಸರ್ಕಾರದ ಜೊತೆ ಚರ್ಚಿಸಿ, ಹೋರಾಟ ಮಾಡಿ ಸಿಗುವಂಥ ಎಲ್ಲ ಸೌಲಭ್ಯಗಳನ್ನು ನೀಡಿದ ಶ್ರೇಯಸ್ಸು ಈ ಸಂಘಕ್ಕಿದೆ. ಈ ಸಂಘದ ನೇತೃತ್ವವನ್ನು ಅನೇಕ ವಿಶೇಷ ಗಣ್ಯರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಲ್ಲಿ ಮಹಿಳಾ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಶ್ರೀಮತಿ ಮೇರಿ ದಿವೇಸಿ ಇವರ ಹೆಸರನ್ನು ನಾವು ನೆನಪು ಮಾಡಿಕೊಳ್ಳದಿದ್ದರೆ ತಪ್ಪಾದೀತು. ಇವತ್ತು ಈ ಸಂಘ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣ ಅವರ ತ್ಯಾಗ ಮತ್ತು ಪರಿಶ್ರಮ ಕಾರಣ. ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆದು ಸೇವೆ ಸಲ್ಲಿಸುವ ನಾವುಗಳು ಸರ್ಕಾರದ ಯೋಜನೆಗಳನ್ನು ಶ್ರೀಸಾಮಾನ್ಯರಿಗೆ ತಲುಪಿಸುವ ಕಾರ್ಯ ನಮ್ಮಿಂದಾಗಬೇಕು. ಕೇವಲ ಲಾಭಕ್ಕಾಗಿ ಕೆಲಸ ಮಾಡದೇ “ಸರ್ಕಾರದ ಕೆಲಸ ದೇವರ ಕೆಲಸ” ಎಂದು ನಿರ್ವಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ ಮಾತನಾಡಿ ಸಂಘ-ಸಂಘಟನೆ ಬಲವಾಗಿದ್ದರೆ, ಯಾವ ಕೆಲಸವನ್ನು, ಬೇಡಿಕೆಗಳನ್ನು ಸುಲಭವಾಗಿ ಪಡೆದು ಕೊಳ್ಳಬಹುದು. ಇವತ್ತು ಸರ್ಕಾರಿ ನೌಕರರು ಬಹಳ ಒತ್ತಡದಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸಂಘ ಸೂಕ್ತ ಗಮನ ಹರಿಸಿ ನೇಮಕಾತಿ ಆಗುವ ಹಾಗೆ ನೋಡಿಕೊಳ್ಳುವುದರೊಂದಿಗೆ ಸರ್ಕಾರಿ ನೌಕರರ ಹಿತಕಾಯುವ ಹಾಗೂ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಆರ್.ಪಿ. ಭಟ್ ಮಾತನಾಡಿ, ನಮ್ಮ ಹೊನ್ನಾವರ ಸಂಘ ಪ್ರತಿವರ್ಷ ಕೂಡ ಇಂತಹ ಕಾರ್ಯಕ್ರಮ ಆಚರಣೆ ಮಾಡುವ ಮೂಲಕ ವಿವಿಧ ಇಲಾಖೆಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸುವ ಕೆಲಸ ಮಾಡುತ್ತದೆ. ಇದು ಸರ್ಕಾರಿ ನೌಕರರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತದೆ. ಇವತ್ತು ಹೊನ್ನಾವರದ ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದ ವಿಜೇತರಾಗಿ ಹೊನ್ನಾವರ ತಾಲೂಕಿಗೆ ಹೆಸರನ್ನು ತಂದಿದ್ದಾರೆ. ಸಂಘ ಯಾವತ್ತೂ ನೌಕರರ ಬೆಂಬಲಕ್ಕಿದೆ. ಯಾವತ್ತೂ ಸಮಸ್ಯೆಗಳಿಗೆ ಸಂಘ ಸದಾ ಬೆಂಗಾವಲಾಗಿ ನಿಲ್ಲುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಾದ ಉಷಾ ಹಾಸ್ಯಗಾರ, ಉಪ-ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಲ್. ನಂದೀಶ, ತಾಲೂಕು ತಹಶೀಲ್ದಾರರಾದ ವಿ.ಆರ್.ಗೌಡ, ಜಿಲ್ಲಾ ಖಜಾನಾಧಿಕಾರಿಗಳಾದ ವಿಶ್ವನಾಥ ಮೂಗಿ, ಜಿಲ್ಲಾ ಸರ್ಕಾರಿ ನೌಕರರ ಅಧ್ಯಕ್ಷರಾದ ಸಂಜೀವ ನಾಯ್ಕ, ಎನ್.ಪಿ.ಎಸ್. ಜಿಲ್ಲಾ ಸಂಚಾಲಕರಾದ ಎಂ.ಎಸ್. ಹೆಗಡೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ನಾಯ್ಕ, ತಾಲೂಕಾ ಎನ್.ಪಿ.ಎಸ್. ಸಂಚಾಲಕರಾದ ವಿ.ಎ. ಪಟಗಾರ, ಜಿಲ್ಲಾ ದೈ.ಶಿ. ಸಂಘದ ಅಧ್ಯಕ್ಷರಾಗಿ ಸಾಧನಾ ಬರ್ಗಿ ಮುಂತಾದವರು ಉಪಸ್ಥಿತರಿದ್ದರು.
2018 ರ ಅವಧಿಯಲ್ಲಿ ನಿವೃತ್ತರಾದ ಎಲ್ಲ ನೌಕರರನ್ನು ಸನ್ಮಾನಿಸಲಾಯಿತು. S.S.ಐ.ಅ ಯಲ್ಲಿ ಶೇಕಡಾ 95ಕ್ಕಿಂತ ಮತ್ತು P.U.ಅ. ಯಲ್ಲಿ ಶೇಕಡಾ 92ಕ್ಕಿಂತ ಹೆಚ್ಚು ಅಂಕಪಡೆದ ಸರ್ಕಾರಿ ನೌಕರರ ಮಕ್ಕಳನ್ನು ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ಮತ್ತು ರಾಜ್ಯ ಮಟ್ಟದಲ್ಲಿ ವಿಜೇತರಾದ ಸರ್ಕಾರಿ ನೌಕರ ಕ್ರೀಡಾ ವಿಜೇತರುಗಳನ್ನು ಸನ್ಮಾನಿಸಲಾಯಿತು. ಹಾಗೂ ತಾಲೂಕಾ ಮಟ್ಟದ ನೌಕರರ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಪ್ರಾರಂಭದಲ್ಲಿ ಎನ್.ಪಿ.ಎಸ್. ಕುಂದುಕೊರತೆಗಳ ಬಗ್ಗೆ ಎಮ್.ಎಸ್. ಹೆಗಡೆ ಇವರಿಂದ ವಿಚಾರಸಂಕಿರಣ ನಡೆಯಿತು. ತಾಲೂಕಾ ಸಂಘದ ಉಪಾಧ್ಯಕ್ಷರಾದ ಎಮ್.ಜಿ. ನಾಯ್ಕ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿಗಳಾದ ಆರ್.ಟಿ.ನಾಯ್ಕ ಸ್ವಾಗತಿಸಿದರು. ಸುನಂದಾ ಭಟ್ಟ, ಲಕ್ಷ್ಮಿ ಎಚ್, ತ್ರಿವೇಣ ಶಾಸ್ತ್ರಿ ಇವರು ನಾಡಗೀತೆ ಪ್ರಸ್ತುತ ಪಡಿಸಿದರು. ಕೊನೆಯಲ್ಲಿ ಉದಯ ನಾಯ್ಕ ಸರ್ವರನ್ನು ವಂದಿಸಿದರು. ಸುದೀಶ ನಾಯ್ಕ ಹಾಗೂ ಉದಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
Leave a Comment