ಹಳಿಯಾಳ: ನುಡಿಗಳನ್ನು ನಡೆಯಲ್ಲಿ ಇಟ್ಟುಕೊಂಡಾಗ ಮಾತ್ರ ಜೀವನ ಪಾವನವಾಗುತ್ತದೆ ಹಾಗೂ ಮನುಷ್ಯನ ಕೊನೆಯಲ್ಲಿ ಧರ್ಮ ಮತ್ತು ಸೇವೆ ಎರಡೆ ಬರುವುದು ಎಂದು ಅಂಬಿಕಾನಗರದ ಶ್ರೀ 108 ಷ.ಬ್ರ.ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಫೆ.19 ರಿಂದ ಒಂದು ತಿಂಗಳ ಕಾಲ ವಿಜಯಪುರ ಜ್ಞಾನ ಯೋಗಾಶ್ರಮದ ತಪಸ್ವಿ ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಉಧ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿದಿನ ಬೆಳಿಗ್ಗೆ 6.30ರಿಂದ 7.30ರ ವರೆಗೆ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಮನುಷ್ಯ ಏನು ಗಳಿಸಬೇಕೊ ಅದನ್ನು ಬಿಟ್ಟು ಬೇರೆಯೇ ಗಳಿಸುವಲ್ಲಿ ಮಗ್ನನಾಗಿದ್ದಾನೆ. ಲೌಖಿಕತೆಯೆಡೆಗೆ ವಾಲಿದ್ದಾನೆ ಎಂದ ಶ್ರೀಗಳು ಪ್ರತಿಯೊಬ್ಬರು ಗುಣದಿಂದ ಬಾಳಬೇಕು ಹಾಗೂ ಮನಸ್ಸು ಶುದ್ದಿ ಮುಖ್ಯವಾಗಿದೆ ಎಂದರು.
ಉಪ್ಪಿನ ಭೇಟಗೆರಿಯ ಮನಿಪ್ರ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ ಜ್ಞಾನ, ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆಗೆ ಹೆಸರಾದ ಹಾಗೂ ಋ(ರು)ಷಿ ಮುನಿಗಳು-ಸಾಧು ಸಂತರು ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳುವ ಮಹಾನ್ ಪವಿತ್ರ ಭಾರತ ದೇಶವಾಗಿದೆ. ಉಳವಿಯ ಕ್ಷೇತ್ರ ಹಳಿಯಾಳ ಧರ್ಮ ಕಾರ್ಯಗಳಿಗೆ ಹೆಸರಾಗಿರುವುದು ಸಂತಸದ ಸಂಗತಿಯಾಗಿದೆ ಎಂದ ಅವರು ನಡೆ ನುಡಿ ಎರಡನ್ನು ಪರಿಪೂರ್ಣವಾಗಿ ಅಳವಡಿಸಿಕೊಂಡಿರುವ ಸಿದ್ದೇಶ್ವರ ಸ್ವಾಮಿಜಿಗಳು ಒಂದು ತಿಂಗಳ ಕಾಲ ಪ್ರವಚನ ನೀಡಲಿದ್ದಾರೆಂದರೇ ಇದು ಈ ಭಾಗದವರ ಸೌಭಾಗ್ಯವೆಂದು ನುಡಿದು ಶುಭ ಕೊರಿದರು.
ಮನಗುಂಡಿ ಮಹಾಮನೆಯ ಬಸವಾನಂದ ಮಹಾಸ್ವಾಮಿಗಳು ಮಾತನಾಡಿ ದೇಶ ಶ್ರೀಮಂತಿಕೆಯೆಡೆಗೆ ವಾಲುತ್ತಿದೆ. ಮನುಷ್ಯನ ದುರಾಸೆಗಳು ಹೆಚ್ಚಾಗಿವೆ. ಕಾಡು ನಾಶವಾಗುತ್ತಿದೆ ಈ ಮೂಲಕ ಮಾನವನಿಂದ ವಿನಾಶಕಾರಿ ವಾತಾವರಣ ಸೃಷ್ಠಿಯಾಗಿದೆ. ಮನುಷ್ಯ 400 ವರ್ಷ ಕೂಡ ಸುಸ್ಥಿರವಾಗಿ ಬದುಕಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕೆಕೆ ಹಳ್ಳಿ ನಿತ್ಯಾನಂದ ಆಶ್ರಮದ ಸುಬ್ರಹ್ಮಣ್ಯ ಸ್ವಾಮಿ, ಧಾರವಾಡ ರಾಮಕೃಷ್ಣ ಆಶ್ರಮದ ವಿಜಯಾನಂದ ಸ್ವಾಮಿಜಿ, ಆನಂದಾಶ್ರಮದ ರುದ್ರಾಕ್ಷಿಬಾಬಾ ಮಾತನಾಡಿ ಸಿದ್ದೇಶ್ವರ ಸ್ವಾಮಿಗಳ ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿ ಅವರ ಪ್ರವಚನ ಕೇಳಲು ಹಳಿಯಾಳಿಗರು ಪುಣ್ಯ ಮಾಡಿದ್ದಿರೆಂದರು.
ಸಿದ್ದಾರೂಢ ಮಠ ಯಡೋಗಾದ ನಿರ್ಮಲಾನಂದ ಮಾತಾಜಿ, ಮನಗುಂಡಿಯ ಸುಗುಣಾ ತಾಯಿ, ಗದಗನ ಗಂಗಮ್ಮಾ ತಾಯಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಮಾಜಿ ಶಾಸಕ ಸುನೀಲ್ ಹೆಗಡೆ, ಮುಖಂಡ ಮಂಗೇಶ ದೇಶಪಾಂಡೆ, ಮುಸ್ಲಿಂ ಧರ್ಮಗುರು ಮುಫ್ತಿ ಫಯಾಜ ಅಮ್ಮದ ಖಾಸ್ಮಿ(ಇಟ್ಟಂಗಿವಾಲೆ), ಹಿರಿಯ ಆಧ್ಯಾತ್ಮಿಕ ಚಿಂತಕ ಎಮ್.ಎನ್.ತಳವಾರ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ ವೇದಿಕೆಯ ಮೇಲಿದ್ದರು.
ಸಿದ್ದೇಶ್ವರ ಸ್ವಾಮಿಗಳ ಆಧ್ಯಾತ್ಮಿಕ ಪ್ರವಚನ ಸೇವಾ ಸಮೀತಿಯ ಶ್ರೀಕಾಂತ ಹೂಲಿ ಸ್ವಾಗತ ಭಾಷಣ, ಟಿಸಿ ಮಲ್ಲಾಪುರಮಠ ಶ್ರೀಗಳ ಪರಿಚಯ, ಸ್ವಾಗತ ಮಾಡಿದರು ಹಾಗೂ ಶೀವದೇವ ದೇಸಾಯಿಸ್ವಾಮಿ ನಿರೂಪಿಸಿ-ವಂದಿಸಿದರು.
Leave a Comment