ಹಳಿಯಾಳ:- ಜಾತಿ-ಮತ-ಪಂಥ ಎನ್ನದೇ ಎಲ್ಲಾ ಸಮುದಾಯದ ಜನರನ್ನು ಒಟ್ಟೂಗೂಡಿಸಿಕೊಂಡು ಬಲಾಢ್ಯ ಸೈನ್ಯವನ್ನು ಕಟ್ಟುವುದರ ಮೂಲಕ ಇಡೀ ವಿಶ್ವಕ್ಕೆ ಮಾದರಿ ನಾಯಕನಾಗಿದ್ದ, ಛತ್ರಪತಿ ಶಿವಾಜಿ ಮಹಾರಾಜರು ಇನ್ನೂ 10 ವರ್ಷಗಳ ಕಾಲ ಬದುಕಿದ್ದರೇ ಬ್ರಿಟಿಷರು ಭಾರತ ದೇಶಕ್ಕೆ ಕಾಲಿಡುವ ದುಸ್ಸಾಹಸವನ್ನೇ ಮಾಡುತ್ತಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಅಭಿಪ್ರಾಯಪಟ್ಟರು.
ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್, ಪುರಸಭೆ ಮತ್ತು ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಪಟ್ಟಣದ ಮಿನಿವಿಧಾನಸೌಧದ ಸಭಾಂಗಣದಲ್ಲಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಘೊಟ್ನೇಕರ ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಒಂದು ಧರ್ಮ-ಜಾತಿಗೆ ಸೀಮಿತರಲ್ಲ ಅವರು ವಿಶ್ವಮಾನವರು ಎಂದರು. ಅಲ್ಲದೇ ಜಗತ್ತಿನಲ್ಲೇ ಅತೀ ಹೆಚ್ಚು ಶಿವಾಜಿ ಪುತ್ಥಳಿಗಳನ್ನು ಕಾಣಬಹುದಾಗಿದ್ದು ಅವರ ಶೂರತನ ಹಾಗೂ ಆದರ್ಶ ನಾಯಕತ್ವಕ್ಕೆ ಸಾಕ್ಷಿ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಮಾಯಪ್ಪಾ ಪಾಟೀಲ್ ಮಾತನಾಡಿ ನೈತಿಕತೆಗೆ ಹೆಸರೇ ಶೀವಾಜಿ ಮಹಾರಾಜರು, ಜಗತ್ತಿಗೆ ಆದರ್ಶ ಪುರುಷರಾಗಿದ್ದು ಮಾನವತಾ ಧರ್ಮದ ಪ್ರತೀಕ ಶಿವಾಜಿ ಎಂದು ಅವರ ಜೀವನ ಚರಿತ್ರೆಯ ರೋಚಕ ಕ್ಷಣಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಶಿಕ್ಷಕ ನಿಂಗಪ್ಪಾ ದೊಡ್ಡಮನಿ, ಐಟಿ ಉದ್ಯಮಿ ನಾರಾಯಣ ಟೋಸೂರು, ಮಿಸ್ ಕರ್ನಾಟಕ ಪ್ರೀತಿ ಚೋರ್ಲೆಕರ, ಜಾನಪದ ಕಲಾವಿದೆ ಶಕುಂತಲಾ ಜಾಧವ, ರಂಗಭೂಮಿ ಕಲಾವಿದ ಅರುಣ ಗೊಂಧಳಿ ಮತ್ತು ಕೃಷಿಕ ನೀಲಕಂಠ ಬಿರ್ಜೆ, ಶಾಂತಾರಾಮ ಸಾಂಬ್ರೇಕರ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ತಹಶೀಲದಾರ ವಿದ್ಯಾಧರ ಗುಳಗುಳಿ, ತಾಪಂ ಅಧಿಕಾರಿ ಡಾ. ಮಹೇಶ್ ಕುರಿಯವರ, ಜಿಪಂ ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಮಿಶ್ಯಾಳಿ, ಲಕ್ಷ್ಮೀ ಕೋರ್ವೆಕರ,ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ ಮತ್ತು ಸಿಪಿಐ ಬಿ.ಎಸ್.ಲೋಕಾಪೂರ, ಸುರೇಂದ್ರ ಬಿರ್ಜೆ ಇದ್ದರು.
Leave a Comment