ಹಳಿಯಾಳ :- ಇಂದಿನ ಆಧುನಿಕ ಯುಗದಲ್ಲಿ ಪಕ್ಷಿಗಳ ಅಳಿವು ಮತ್ತು ಉಳಿವು ಮಾನವನ ಹವ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಮಾನವನು ಪಕ್ಷಿಗಳ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕರೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ, ದಿ.ಅರ್ಬನ್ ಯುಥ್ ಕ್ಲಬ್, ಅರಣ್ಯ ಇಲಾಖೆ ಮತ್ತು ಕೈಗಾ ಬರ್ಡರ್ಸ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪಟ್ಟಣದಲ್ಲಿ ನಡೆದ “ನಮ್ಮ ಊರು ನಮ್ಮ ಖಗಸಂಕುಲ” ಪಕ್ಷೀ ವಿಕ್ಷಣೆ ಮತ್ತು ಗಣತಿ ಕಾರ್ಯಾಗಾರದ ಸಭಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಪಕ್ಷಿ ವೀಕ್ಷಣೆಯ ಹವ್ಯಾಸವು ಅತ್ಯಂತ ಉತ್ತಮ ಹವ್ಯಾಸವಾಗಿದ್ದು ಮುಂದಿನ ಯುವ ಜನಾಂಗದಲ್ಲಿ ಇದನ್ನು ಉಳಿಸಿಕೊಂಡು ಹೊಗಬೇಕಾಗಿದೆ ಎಂದರು.
ಹಳಿಯಾಳ ಅರಣ್ಯ ಇಲಾಖೆಯ ಡಿಎಫ್ಒ ಡಿ.ಯತೀಶಕುಮಾರ ಮಾತನಾಡಿ, ಪಕ್ಷಿಗಳ ಗಣತಿ ಪ್ರತಿವರ್ಷ ಮಾಡಬೇಕಾಗಿದೆ. ಅದಕ್ಕೆ ಪಕ್ಷಿ ತಜ್ಞರ ಅವಶ್ಯಕತೆಯಿದ್ದು ಕೆಲವು ಪಕ್ಷಿಗಳು ವಿನಾಶದ ಅಂಚಿಗೆ ತಲುಪಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಇಂತಹ ಕಾರ್ಯಾಗಾರ ಮತ್ತು ಗಣತಿ ಕಾರ್ಯಗಳ ಮೂಲಕ ಗುರುತಿಸಿ ರಕ್ಷಣೆ ನೀಡಬೇಕಾಗಿದ್ದು ಅರಣ್ಯ ಇಲಾಖೆಯೊಂದಿಗೆ ಕರವೇ ಯಂತಹ ಸಂಘಟನೆಗಳು ಕೈ ಜೋಡಿಸಬೇಕಾಗಿದೆ ಎಂದರು.
ಪಕ್ಷಿ ವೀಕ್ಷಣೆ :- ಪಕ್ಷಿ ವೀಕ್ಷಣೆಗಾಗಿ 4 ತಂಡಗಳನ್ನು ರಚಿಸಿ ಅಳ್ನಾವರ ರಸ್ತೆಯ ಹೊರಗಿನಗುತ್ತಿಗೇರಿ ಕೇರೆ, ಸಕ್ಕರೆ ಕಾರ್ಖಾನೆ ಬಳಿಯ ಹುಲ್ಲಟ್ಟಿ ಕೆರೆ ಪ್ರದೇಶ, ಗುಡ್ನಾಪೂರ ಕೆರೆಯ ಅಲ್ಲೋಳ್ಳಿ ಪ್ರದೇಶ ಮತ್ತು ತುಳಜಾಭವಾನಿ ದೇವಸ್ಥಾನದ ದೇವಿಕೇರೆ ಹಾಗೂ ಐತಿಹಾಸಿಕ ಕೋಟೆ ಕೆರೆ, ಶಿವಾಜಿ ಕ್ರೀಡಾಂಗಣ, ಮರಡಿಗುಡ್ಡ ಉದ್ಯಾನವನ, ಕಿಲ್ಲಾ ಗಾರ್ಡನ್ ಪ್ರದೇಶಗಳು ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಪಕ್ಷಿಗಳ ವೀಕ್ಷಣೆ ಮತ್ತು ಗಣತಿ ಕಾರ್ಯ ನಡೆಯಿತು.
127 ಪ್ರಭೇಧಗಳ ವೀಕ್ಷಣೆ :– ಸುಮಾರು 55ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಕಾರ್ಯಾಗಾರದಲ್ಲಿ ಕೈಗಾದಿಂದ ಆಗಮಿಸಿದ್ದ ಪಕ್ಷಿ ತಜ್ಞರಾದ ಮಹಾಂತೇಶ ಓಶೀಮಠ, ಜಿ.ಮೋಹನದಾಸ್ ನೇತೃತ್ವದ ತಂಡವು ವಿದ್ಯಾರ್ಥಿಗಳಿಗೆ ಪಕ್ಷಿಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಪಕ್ಷಿ ಸಂಕುಲಗಳ ಜೀವನ, ಆಹಾರ ಪದ್ದತಿ ವಿವರಣೆ ನೀಡಿ ಪಕ್ಷಿ ವೀಕ್ಷಣೆಯ ವಿಧಾನ ಮತ್ತು ತಂತ್ರಗಳನ್ನು ವಿವರಿಸಿದರು. ಎಲೋ ಬಿಲ್ಡ್ ಬ್ಯಾಬಲರ್, ಎಲೋ ಕ್ರೌನ್ಡ್ ವುಡ್ ಪ್ಯಾಕರ್, ಹಾರ್ನಬಿಲ್. ಓರಿಯಂಟಾಲ್ ಟರಟಲ್ ಡೌವ್, ಚಿಕ್ಕ ಸಿಪಾಯಿ ಕೊಕ್ಕರೆ, ಬಿಳಿ ಸಿಫೀಲೆ ಸೇರಿದಂತೆ 127ಕ್ಕೂ ಅಧಿಕ ಪಕ್ಷಿ ಪ್ರಬೇಧಗಳ ವೀಕ್ಷಣೆ ನಡೆಯಿತು.
ಪ್ರತಿಜ್ಞೆ :- ಇದೇ ಸಂದರ್ಭದಲ್ಲಿ ಪಕ್ಷಿ ವೀಕ್ಷಣೆ ಮಾಡಿ ಗಣತಿ ಮಾಡಿದ ವಿದ್ಯಾರ್ಥಿಗಳಿಗೆ ಕರವೇಯಿಂದ ಪ್ರಮಾಣ ಪತ್ರಗಳನ್ನು ವಿತರಿಸುವುದರ ಜೊತೆಗೆ ಪರಿಸರಕ್ಕೆ ಸಂಬಂಧಿಸಿದಂತೆ ಪರಿಸರದ ಶುಚಿತ್ವವನ್ನು ಕಾಪಾಡುತ್ತೇವೆ.ಪಶು ಪಕ್ಷಿಗಳಿಂದ ಸಹನಶೀಲತೆಯಿಂದ ವ್ಯವಹರಿಸುತ್ತೇವೆ, ಜೀವ ಸಂಕುಲಗಳ ಜೀವಿಸುವ ಹಕ್ಕನ್ನು ಸಮರ್ಥಿಸುತ್ತೇವೆ ಎಂದು ಪ್ರತಿಜ್ಞೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿಧ್ಯಾಧರ ಗುಳಗುಳಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಬಸವರಾಜ ಬೆಂಡೀಗೇರಿಮಠ, ಮಹೇಶ ಆನೇಗುಂದಿ, ಸುಧಾಕರ ಕುಂಬಾರ, ಶ್ರೀಶೈಲ್ ಮಠದೇವರು, ವಿನೋದ ದೊಡ್ಡಮನಿ, ಚಂದ್ರಕಾಂತ ದುರ್ವೆ, ಸುರೇಂದ್ರ ಬಿರ್ಜೆ, ಕಿರಣ, ಚಂದ್ರಕಾಂತ ಅರಶಿಣಗೇರಿ, ಶರತಕುಮಾರ ಆನೇಗುಂದಿ ಇದ್ದರು.
Leave a Comment