ಹಳಿಯಾಳ:- ಭಾವಾಂಗ, ಜ್ಞಾನಾಂಗ, ಕ್ರೀಯಾಂಗ ಈ ಮೂರರ ಸುಂದರ ರೂಪವೇ ಮನುಷ್ಯನಾಗಿದ್ದಾನೆ. ಜ್ಞಾನ ಮತ್ತು ಅರಿವಿನ ದೀಪದ ಅಂಶ ಹೊಂದಿರುವ ಮನುಷ್ಯ ತನ್ನ ಸುತ್ತ ಜ್ಞಾನ ಮತ್ತು ಅರಿವಿನ ಬೆಳಕನ್ನು ಹರಡುವ ಮೂಲಕ ಜಗತ್ತಿಗೆ ಧನ್ಯತೆ ಅರ್ಪಿಸಬೇಕಿದೆ ಎಂದು ವಿಜಯಪುರದ ಜ್ಞಾನಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ನುಡಿದರು.
ಪಟ್ಟಣದ ಫೇ.19 ರಿಂದ ಪ್ರಾರಂಭವಾಗಿರುವ ಒಂದು ತಿಂಗಳ ಕಾಲ ನಡೆಯಲಿರುವ ಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ 11ನೇ ದಿನ ಸಾವಿರಾರು ಜನರ ಉಪಸ್ಥಿತಿಯಲ್ಲಿ ಸ್ವಾಮೀಜಿ ಅವರು ಮನುಷ್ಯನ ಜೀವನದ ಸಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ವಿಶ್ವಚೇತನನಾದ ಮನುಷ್ಯ ಜೀವನದ ಬೆಲೆಯನ್ನು ಹಾಗೂ ಅರ್ಥವನ್ನು ತಿಳಿದುಕೊಂಡಾಗ ಸತ್ಯದ ದರ್ಶನವಾಗುತ್ತದೆ. ಜ್ಞಾನ-ಅರಿವಿನ ದೀಪ ಬಹಳ ಅತ್ಯಮೂಲ್ಯವಾಗಿದೆ. ಸಂಪತ್ತಿನಿಂದ ಮನಸ್ಸನ್ನು, ಅರಿವನ್ನು ಹಾಗೂ ಜ್ಞಾನವನ್ನು ತೂಗಲು ಸಾಧ್ಯವಿಲ್ಲ ಎಂದ ಶ್ರೀಗಳು ಬದುಕನ್ನು ಅರಿತು ಪ್ರತಿಕ್ಷಣ ಸುಂದರವಾದ ಬದುಕನ್ನು ಸಾಗಿಸಬೇಕೆಂದರು.
ಮನಗುಂಡಿಯ ಬಸವಾನಂದ ಮಹಾಸ್ವಾಮಿಜಿಗಳು ತಮ್ಮ ಪ್ರವಚನದಲ್ಲಿ ಅನಾದಿಕಾಲದಿಂದಲೂ ಋಷಿ ಮುನಿಗಳು ಆಡುತ್ತಿರುವ ಮಾತುಗಳಲ್ಲಿ ಶಾಶ್ವತವಾದ ಸತ್ಯ ಅಡಗಿದೆ. ನೀರು ಪ್ರಾಣ ಗಳ ಪ್ರಾಣವಾಗಿದೆ. ವಿಶ್ವ ನೀರಿನಲ್ಲೇ ತನ್ಮಯವಾಗಿದೆ. ಅದೇ 2 ಹನಿ ನೀರು ಇಲ್ಲದೆ ಇದ್ದರೇ ಜೀವನ ವೃತ್ತಿಯೇ ಇಲ್ಲವಾಗುತ್ತದೆ ಎಂದು ನೀರಿನ ಮಹತ್ವವನ್ನು ತಿಳಿಸಿದ ಸ್ವಾಮಿಜಿಗಳು ಮರಗಿಡ-ಸಸ್ಯಗಳನ್ನು ಬೆಳೆಸಿ ಪರಿಸರ-ಉಳಿಸಿ ಬೆಳೆಸಿ, ಮಳೆ ನೀರು ಕೊಯ್ಲು ಘಟಕಗಳನ್ನು ಸ್ಥಾಪಿಸಿ, ಮಳೆ ನೀರು ಹಿಡಿದಿಟ್ಟು ಬಳಸಿಕೊಳ್ಳಿ, ನೀರನ್ನು ವ್ಯರ್ಥವಾಗಲು ಬಿಡದಿರಿ, ಅರಣ್ಯ ನಾಶ ಮಾಡಬೇಡಿ ಎಂದರು.
ಗದಗನ ಮಹಾಂತಪ್ಪಾ ಶ್ರೀಗಳು ಮಾತನಾಡಿ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಮನುಷ್ಯನಲ್ಲಿ ಯಳ್ಳಷ್ಟು ಸರಳತೆ ಕಾಣ ಸಿಗುತ್ತಿಲ್ಲ. ಮನುಷ್ಯ ಮೊದಲು ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು. ಶರಣರ ಮಾತಿಗೆ ವಿಶ್ವಮಾನ್ಯತೆ ಇದೆ ಎಂದ ಅವರು ಪ್ರತಿಯೊಬ್ಬರು ಮಾತಿಗೆ ಮೌಲ್ಯ ಬರುವಂತೆ ಮಾತನಾಡಬೇಕು ಎಂದು ಹೇಳಿದರು.
ರಾಜ್ಯದ ವಿವಿಧ ಭಾಗಗಳಿಂದ ನೂರಾರು ಭಕ್ತರು ಸಿದ್ದೇಶ್ವರ ಸ್ವಾಮಿಜಿಗಳ ಪ್ರವಚನ ಕೇಳಲು ಪ್ರತಿನಿತ್ಯ ಆಗಮಿಸುತ್ತಿದ್ದಾರೆ.
Leave a Comment