ಹಳಿಯಾಳ : ರೈತರ ಅತಿಕ್ರಮಣ ಭೂಮಿ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶ ರೈತ ಸಮುದಾಯಕ್ಕೆ ಆಘಾತವನ್ನುಂಟುಮಾಡಿದ್ದು ಕೂಡಲೇ ಆದೇಶವನ್ನು ಪುನರ್ ಪರಿಶೀಲಿಸಬೇಕು ಹಾಗೂ ಸಂಸತನಲ್ಲಿ ವಿಧೇಯಕವನ್ನು ಮಂಡನೆ ಮಾಡಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಲಕ್ಷಾಂತರ ಜನ ರೈತರ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆ ಆಗ್ರಹಿಸಿದೆ.
ಬುಧವಾರ ಕೆಂಪು ಸೇನೆ ನೇತೃತ್ವದಲ್ಲಿ ಅತಿಕ್ರಮಣದಾರ ನೂರಾರು ರೈತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ಮೇರವಣ ಗೆ ನಡೆಸಿ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ ಜಿಲ್ಲೆಯ ಹಳಿಯಾಳ ತಾಲೂಕಿನ ರೈತರು 1958 ನೇ ಸಾಲಿನ ಪೂರ್ವದಿಂದಲೂ ಅರಣ್ಯ ಜಮೀನುಗಳನ್ನು ಅತಿಕ್ರಮಿಸಿ ಸಾಗುವಳಿ ಮಾಡುತ್ತಾ ಉಪಜೀವನ ನಡೆಸಿಕೊಂಡು ಬಂದಿದ್ದು ಈ ಜಮೀನುಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಹೀಗಿರುವಾಗ ಅರಣ್ಯ ಪ್ರದೇಶದಲ್ಲಿರುವ ಜಮೀನುಗಳನ್ನು ಕರ್ನಾಟಕ ಸರ್ಕಾರ ಕಳೆದ ಮೂರು ವರ್ಷಗಳ ಹಿಂದೆ ಅರಣ್ಯ ಹಕ್ಕು ಮಾನ್ಯ ಮಾಡುವ ಸಲುವಾಗಿ ಪ್ರತಿ ಪಂಚಾಯತಿಗೊಂದು ಅರಣ್ಯ ಹಕ್ಕು ಸಮಿತಿ ಮಾಡಿ ಸಮಿತಿ ಮತ್ತು ಅರಣ್ಯ ಇಲಾಖೆಯಿಂದ ಜಂಟಿಯಾಗಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯ ಅತಿಕ್ರಮಣ ಮಾಡಿದ ಜಮೀನುಗಳನ್ನು ಜಿ.ಪಿ.ಎಸ್ ಮಾಡಿರುತ್ತಾರೆ. ನಂತರದಲ್ಲಿ ಕೇಳಿದ ದಾಖಲೆಗಳನ್ನು ನಮ್ಮ (ರೈತರ) ಬಳಿ ಇದ್ದ ಎಲ್ಲಾ ದಾಖಲಾತಿಗಳನ್ನು ಉಪವಿಭಾಗಾಧಿಕಾರಿ ಕಾರವಾರ ಜಿಲ್ಲಾ ರವರಿಗೆ ಸಲ್ಲಿಸಲಾಗಿದೆ. ಆದರೆ 2006ರ ಸುಪ್ರೀಂ ಕೋರ್ಟ ಆದೇಶದ ಪ್ರಕಾರ ಸದರ ಜಮೀನುಗಳನ್ನು ನಮಗೆ ಮಂಜೂರು ಮಾಡಲು ಅವಕಾಶ ಇರುವದಿಲ್ಲ ಅಂತಾ ಅರಣ್ಯ ಹಕ್ಕು ಸಮಿತಿ ಉಪವಿಭಾಗಾಧಿಕಾರಿ ಕಾರವಾರ ಇವರಿಂದ ರೈತರಿಗೆ ನೋಟಿಸಗಳನ್ನು ನೀಡಿದ್ದು ನೋಟಿಸ್ನಲ್ಲಿ ನಮಗೆ 75 ವರ್ಷಗಳ ಹಿಂದಿನ ದಾಖಲಾತಿಗಳನ್ನು ಕೇಳುತ್ತಿದ್ದಾರೆ.
ಆದರೇ ಸ್ವಾತಂತ್ರಪೂರ್ವದ 75 ವರ್ಷಗಳ ಹಿಂದಿನ ದಾಖಲೆಗಳನ್ನು ಕೇಳುತ್ತಿರುವದು ಎಷ್ಟು ಸರಿ ಎಂದು ಬೇಸರ ವ್ಯಕ್ತಪಡಿಸಿರುವ ಹೋರಾಟಗಾರರು ಆಗಿನ ಸಮಯದಲ್ಲಿ ಶಿಕ್ಷಣವಂತರಲ್ಲದ ಹಿರಿಯರು ಯಾವುದೇ ದಾಖಲೆಗಳನ್ನು ಇಟ್ಟುಕೊಂಡಿಲ್ಲ ಎಂದಿದ್ದಾರೆ.
ಸತತವಾಗಿ 50 ವರ್ಷಗಳ ಕಾಲದಿಂದ ನಮ್ಮ ಹಿರಿಯರು ದಿನನಿತ್ಯ ಹೋರಾಟಗಳನ್ನು ಹಮ್ಮಿಕೊಂಡಿದ್ದರೂ ಯಾವುದೇ ಸರಕಾರ ಸ್ಪಂದಿಸದ ಕಾರಣ ನಮಗೆ ಇಂದು ಸರ್ವೋಚ್ಚನ್ಯಾಯಾಲಯ ಮಾಡಿದ ಆದೇಶದಿಂದ ಆಘಾತವಾಗಿದ್ದು ನಾವು ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಸರ್ಕಾರದ ವತಿಯಿಂದ ಸದರ ಆದೇಶವನ್ನು ಪುನರ್ ಪರೀಶಿಲನೆ ಮಾಡುವಂತೆ ಹಾಗೂ ವಿಧಾನಸಭೆ/ಸಂಸತ್ನಲ್ಲಿ ವಿಧೇಯಕವನ್ನು ಮಂಡನೆ ಮಾಡಿ ನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸಿ ಕಾನೂನಿನಲ್ಲಿ ಸಡಲಿಕೆ ಮಾಡಿ ಲಕ್ಷಾಂತರ ಬಡ ರೈತರ ಜಮೀನುಗಳು ರೈತರಿಗೆ ಖಾಯಂ ತರೀಖ್ ಮಂಜೂರು ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮಾಡುವಂತೆ ಆಗ್ರಹಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ದಸಂಸಮೀತಿ ಕೆಂಪು ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷ ವ್ಹಿಬಿ ರಾಮಚಂದ್ರ, ರಾಜ್ಯ ಉಪಾಧ್ಯಕ್ಷ ಸಿ.ಕೆ ರವೀಂದ್ರನಾಥ, ಡಾ.ಬಿ.ಶ್ರೀನಿವಾಸ, ಡಿವಿ ವೀರಭದ್ರೆಗೌಡ, ಯಲ್ಲಪ್ಪಾ ಮಾಲವನಕರ, ಶಿವಾಜಿ ಮಂಗೇಶ್ಕರ, ರಾಜು ಕುರುಬರ ವಹಿಸಿದ್ದರು. ಪರಶುರಾಮ, ಮಂಜುಳಾ ವಡ್ಡರ, ಪ್ರಕಾಶ, ಆನಂದ ಮೊದಲಾದವರು ಇದ್ದರು.
Leave a Comment