ಹೊನ್ನಾವರ : ಉತ್ತರಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ ಮತ್ತು ಮಾಜಿ ಶಾಸಕ ಸತೀಶ ಸೈಲ್ ಮೇಲೆ ಅಕ್ರಮ ಹಣ ಸಾಗಾಟಕ್ಕೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆಯ ದೂರಿನ ಮೇಲೆ ಪ್ರಕರಣ ದಾಖಲಿಸಿರುವುದು ರಾಜಕೀಯ ಪ್ರೇರಿತ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಆಪಾದಿಸಿದ್ದಾರೆ.
ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಕಳೆದ ಮೇ ತಿಂಗಳಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆಗೆ ಹಾಜರು ಪಡಿಸಿದ್ದರೂ, 10 ತಿಂಗಳ ನಂತರ ಲೋಕಸಭಾ ಚುನಾವಣೆಯ ಸನಿಹದಲ್ಲಿ ಉಪವಿಭಾಗಾಧಿಕಾರಿಗಳ ಮೂಲಕ ಆದಾಯ ತೆರಿಗೆ ಇಲಾಖೆ ಪ್ರಕರಣ ದಾಖಲಿಸುತ್ತಿರುವುದನ್ನು ಅವರು ಖಂಡಿಸಿದ್ದಾರೆ.
ಕೇಂದ್ರದ ಬಿ.ಜೆ.ಪಿ. ಸರಕಾರ ಆದಾಯ ತೆರಿಗೆ ಇಲಾಖೆಯನ್ನು ತನ್ನ ತಾಳಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದು ಕಾಂಗ್ರೇಸ್ ನಾಯಕರ ಮೇಲೆ ಆದಾಯ ತೆರಿಗೆ ಇಲಾಖೆಯನ್ನು ಛೂ ಬಿಟ್ಟು ತನ್ನ ಕಾರ್ಯಸಾಧನೆ ಮಾಡುತ್ತಿದೆ ಎಂದು ಆಪಾದಿಸಿದರು.
122 ಕೋಟಿ, 70 ಲಕ್ಷ ರೂಪಾಯಿ ವೆಚ್ಚದ ಶರಾವತಿ ಕುಡಿಯುವ ನೀರು ಯೋಜನೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು ಜಗ್ಗಜಾಹೀರವಾಗಿದೆ. ಆದರೂ ಕೂಡ ಇಂದಿನ ಶಾಸಕ ದಿನಕರ ಶೆಟ್ಟಿ ಅದನ್ನು ತಮ್ಮ ಸಾಧನೆಯಂತೆ ಪದೇ ಪದೇ ಪತ್ರಿಕಾ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಈಗಾಗಲೇ ಶರಾವತಿ ಕುಡಿಯುವ ನೀರು ಬಹುಗ್ರಾಮ ಯೋಜನೆಯಡಿ ಕೆಲಸ ಆರಂಭವಾಗಿದ್ದು ಅಂದಿನ ಶಾಸಕಿ ಶಾರಾದಾ ಶೆಟ್ಟಿ, ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಯವರ ಸರ್ವಪ್ರಯತ್ನವೇ ಇದಕ್ಕೆ ಮೂಲಕಾರಣವಾಗಿದೆ. ಈ ಯೋಜನೆಯಿಂದ ಹೊಸಕುಳಿ, ಮುಗ್ವಾ, ಹೊನ್ನಾವರ ಪಟ್ಟಣಕ್ಕೆ ಮುಂದಿನ ದಿನಗಳಲ್ಲಿ ಸಾಕಷ್ಟು ಕುಡಿಯುವ ನೀರು ಹರಿಯುವುದರಲ್ಲಿ ಸಂದೇಹವೇ ಇಲ್ಲಾ. ಆದರೆ ಉಳಿದ ಕರ್ಕಿ, ಹಳದೀಪುರ, ನವಿಲಗೋಣ, ಕಡತೋಕಾ, ಚಂದಾವರ, ಕಡ್ಲೆ, ಸಾಲಕೋಡ ಗ್ರಾಮಗಳಲ್ಲೂ ಸಾಕಷ್ಟು ಕುಡಿಯುವ ನೀರಿನ ಹಾಹಾಕಾರ ಇದ್ದು ಈ ಬಗ್ಗೆ ಶಾಸಕ ದಿನಕರ ಶೆಟ್ಟಿ ಗಮನಹರಿಸುವುದು ಒಳ್ಳೆಯದು ಎಂದು ತೆಂಗೇರಿ ಸಲಹೆ ನೀಡಿದರು.
ಮಂಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ ರಾಜಕೀಯ ದುರುದ್ದೇಶದಿಂದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎನ್. ಸುಬ್ರಹ್ಮಣ್ಯ ಮಾತನಾಡಿ ಭೀಮಣ್ಣ ನಾಯ್ಕ ಪ್ರಕರಣಕ್ಕೆ ಸಂಬಂಧಸಿದ ಎಲ್ಲಾ ದಾಖಲೆಗಳನ್ನು ಕಳೆದ ಮೇ ತಿಂಗಳಲ್ಲಿಯೇ ಆದಾಯ ತೆರಿಗೆ ಇಲಾಖೆಗೆ ಹಾರು ಪಡಿಸಿದ್ದರು. ಭೀಮಣ್ಣ ನಾಯ್ಕರನ್ನು ರಾಜಕೀಯವಾಗಿ ಮುಗಿಸಲು ಬಿ.ಜೆ.ಪಿ. ನಾಯಕರು ಕುತಂತ್ರ ನಡೆಸಿದ್ದಾರೆ ಎಂದರು. ಕೇಂದ್ರದ ಬಿ.ಜೆ.ಪಿ. ನೇತೃತ್ವದ ಮೋದಿ ಸರಕಾರ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ತನ್ನ ರಾಜಕೀಯ ತೆವಲಿಗೆ ಬಳಸಿಕೊಳ್ಳುತ್ತಿರುವುದು ನಾಚಿಗೆಗೆಡಿತನ ಪರಮಾವಧಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಸುನೀತಾ ಹುರಿಕಡ್ಲಿ, ಇಂಟೆಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ನಗರ ಘಟಕದ ಅಧ್ಯಕ್ಷ ಕೇಶವ ಮೇಸ್ತ, ಪಟ್ಟಣ ಪಂಚಾಯತ ಅಧ್ಯಕ್ಷ ರಾಜಶ್ರೀ ನಾಯ್ಕ, ಸದಸ್ಯರಾದ ಜೋಸ್ಪಿನ್ ಡಯಾಸ್, ಜೈನಾಬಿ ಶೇಖ, ಸುರೇಶ ಮೇಸ್ತ, ಬ್ಲಾಕ್ ಕಾಂಗ್ರೇಸ್ನ ವಿನಾಯಕ ಶೇಟ್, ದಾಮೋದರ ನಾಯ್ಕ, ಲಂಭೋದರ ನಾಯ್ಕ, ಮಾದೇವ ನಾಯ್ಕ, ನೆಲ್ಸನ್ ರೊಡ್ರಿಗಿಸ್, ಲೀನಾ ಫರ್ನಾಂಡೀಸ್, ಹರೀಶ ನಾಯ್ಕ, ಬಾಲಚಂದ್ರ ನಾಯ್ಕ, ತುಳಸಿ ಗೌಡ, ಉಮಾ ಮೇಸ್ತ, ಮುಸಾ ಅಣ್ಣಿಗೇರಿ, ಇಸ್ಮಾಯಲ್ ಕವಲಕ್ಕಿ, ಇನ್ನೂ ಮಂತಾದವರು ಉಪಸ್ಥಿತರಿದ್ದರು.
Leave a Comment