ಹಳಿಯಾಳ : ಮಕ್ಕಳ ಸವೋತೋಮುಖ ಅಭಿವೃದ್ದಿಗೆ ಪಾಲಕರು ಶ್ರಮಿಸುವುದು ಪ್ರತಿಯೊಬ್ಬ ಪಾಲಕರ ಆಧ್ಯ ಕರ್ತವ್ಯವಾಗಿದೆ. ಇದರ ಜೊತೆಗೆ ಅವರ ಶಿಕ್ಷಣ ಮತ್ತು ಆರೋಗ್ಯದ ಕುರಿತು ಹೆಚ್ಚಿನ ಮುತವರ್ಜಿ ವಹಿಸುವುದು ಅವಶ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಯೋಜನಾಧಿಕಾರಿ ಅಂಬಿಕಾ ಕಟಕೆ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸೊಸೈಟಿ ಕಾರವಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಾರ್ಯಾಲಯ ಹಾಗೂ ಶ್ರೀ ದುರ್ಗಾಯವ ಸಂಘ ಹಳಿಯಾಳ ಇವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ಮಕ್ಕಳ ವಾರಾಂತ್ಯ ಚಟುವಟಿಕೆಗಳ ಕಲಿಕಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಮಕ್ಕಳು ಶಾಲಾ ರಜಾ ದಿನಗಳಲ್ಲಿ ಟಿ.ವಿ. ನೋಡುವದು ಮತ್ತು ಬಿಸಿಲಿನಲ್ಲಿ ಆಟವಾಡುವದು ಇದರಲ್ಲಿಯೇ ಕಾಲಹರಣ ಮಾಡುತ್ತಾರೆ.ಇದೀಗ ಮೊಬೈಲ್ ಗೀಳು ಹೆಚ್ಚಾಗುತ್ತಿದ್ದು ಇದನ್ನು ತಪ್ಪಿಸಲು ಮತ್ತು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಹಾಯಕಾರಿಯಾಗುತ್ತವೆ. ಶಿಬಿರಗಳಿಂದ ವ್ಯಕ್ತಿತ್ವ ಬೆಳವಣಿಗೆಯಾಗಲು ಸಹಾಯಕಾರಿಯಾಗುತ್ತದೆ ಎಂದರು.
ಶಿಬಿರದಲ್ಲಿ ನೃತ್ಯ, ಸಂಗೀತ, ಯೋಗ, ಕರಾಟೆ, ಚಿತ್ರಕಲೆ, ಕ್ರಾಫ್ಟ, ಭಾಷಣ ಕಲೆ ಅಲ್ಲದೆ ಮಕ್ಕಳ ಮನೋವಿಕಾಸಕ್ಕೆ ಸಂಬಂಧಿಸಿದ ಇನ್ನೀತರ ಚಟುವಟಿಕೆಗಳನ್ನು ಕಲಿಸಲಾಯಿತು. ಶಿಬಿರದಲ್ಲಿ ಕಲಿತ ನೃತ್ಯ, ಸಂಗೀತ, ಯೋಗ, ಕರಾಟೆ, ಚಿತ್ರಕಲೆಗಳನ್ನು ಪ್ರಸ್ತುತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಯುವ ಸಂಘದ ಅಧ್ಯಕ್ಷೆ ಪಲ್ಲವಿ ಯರಗಟ್ಟಿ, ಸುನೀಲ ಯರಗಟ್ಟಿ, ಶಿಕ್ಷಕರಾದ ತೇಜಸ್ವಿನಿ ಮಠಪತಿ, ಮುಕ್ತಾಬಾಯಿ ಯರಗಟ್ಟಿ, ದೀಪಾ ಕುಂಬಾರ ಇದ್ದರು.
Leave a Comment