ಹಳಿಯಾಳ:- ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ಅಕ್ಕಿ ಮೂಟೆಗಳನ್ನು ಸೋಮವಾರ ಬೆಳಗಿನ ಜಾವ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ.
ಪಟ್ಟಣದ ಖಾಜಿಗಲ್ಲಿ ನಿವಾಸಿ ಯಾಸೀನಅಬ್ದುಲ್ ಶುಕುರ ದಲಾಲ ಎಂಬಾತ ಟಾಟಾ ಗೂಡ್ಸ್ (ಕೆಎ 29-7885) ನಂಬರಿನ ವಾಹನದಲ್ಲಿ 48 ಮೂಟೆಗಳಲ್ಲಿ ಸುಮಾರು 2834 ಕೆಜಿ ದಾಖಲೆ ಇಲ್ಲದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ದಾಂಡೇಲಿ ಹಳಿಯಾಳ ಮಾರ್ಗದ ಪಟ್ಟಣದ ಕಿಲ್ಲಾ ಪ್ರದೇಶದ ಬಳಿಯಿಂದ ಸಾಗಾಟ ಮಾಡುತ್ತಿದ್ದಾಗ ಹಳಿಯಾಳ ಪಿಎಸ್ಐ ಆನಂದಮೂರ್ತಿ ಅವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮಾಲು ಸಮೇತ ವಾಹನವನ್ನು ವಶಪಡಿಸಿಕೊಂಡಿದ್ದರು.
ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಸೋಮವಾರ ಹಳಿಯಾಳ ತಹಶೀಲ್ದಾರ್ ಶಿವಾನಂದ ಉಳ್ಳೆಗಡ್ಡಿ, ಆಹಾರ ಶಿರಸ್ತೆದಾರ್ ಶೋಭಾ ಹುಲ್ಲೆನ್ನವರ ವಶಪಡಿಸಿಕೊಂಡ ಅಕ್ಕಿ ಮೂಟೆಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸಾವಿರಾರು ಕೆಜಿ ಅಕ್ಕಿ ಪಡಿತರ ಅಕ್ಕಿ ಎಂದು ಸಂಶಯ ವ್ಯಕ್ತಪಡಿಸಲಾಗಿದ್ದು ಇದರ ಹಿಂದೆ ದೊಡ್ಡ ಜಾಲ ಇರಬಹುದೆಂದು ಶಂಕಿಸಲಾಗಿದೆ. ಪಡಿತರ ಅಂಗಡಿಯಿಂದ ಅಕ್ಕಿ ಪಡೆಯುವ ಫಲಾನುಭವಿಗಳು ಹೆಚ್ಚಿನ ಬೆಲೆಗೆ ಈ ಅಕ್ಕಿಯನ್ನು ಮಾರಾಟ ಮಾಡುತ್ತಾರೆ ಹಾಗೂ ಪಡಿತರ ಫಲಾನುಭವಿಗಳು ಮಸೂರಿ ಅಕ್ಕಿಯನ್ನು ಖರಿದಿಸಿ ಬಳಸುತ್ತಾರೆ ಎಂಬುದು ಬೆಳಕಿಗೆ ಬಂದಿರುವ ಅಂಶವಾಗಿದೆ.
ವಶಪಡಿಸಿಕೊಂಡ ಆರೋಪಿ ಜನರಿಂದ ಈ ಅಕ್ಕಿಯನ್ನು ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದನೆಂದು ಹೇಳಲಾಗುತ್ತಿದೆ. ಆದರೇ ಇಲಾಖೆಯವರು ಮಾತ್ರ ಅಕ್ಕಿಯು ಆಹಾರ ಇಲಾಖೆಯ ಚಿಹ್ನೆ, ಮುದ್ರೆ, ಮಾಹಿತಿಯುಳ್ಳ ಚಿಲಗಳಲ್ಲಿ ಇಲ್ಲವಾದ್ದರಿಂದ ನಿಖರವಾಗಿ ಪಡಿತರ ಅಕ್ಕಿ ಎಂದು ಹೇಳಲಾಗದು ತನಿಖೆಯ ಬಳಿಕವಷ್ಠೇ ಮಾಹಿತಿ ಬಹಿರಂಗಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Leave a Comment