ಹಳಿಯಾಳ : ಮುಂದಿನ ದಿನಗಳಲ್ಲಿ ಶುದ್ದ ನೀರಿಗಾಗಿ ಯುದ್ದಗಳು ನಡೆದರೇ ಅದನ್ನು ನೋಡುವಂತಹ ಅನಿವಾರ್ಯತೆ ಉಂಟಾಗಬಹುದಾಗಿದೆ. ನೀರಿನ ಮೂಲಗಳನ್ನು ರಕ್ಷಿಸುವುದರ ಮೂಲಕ ನೀರನ್ನು ಉಳಿತಾಯ ಮಾಡಿದರೇ ಮಾತ್ರ ಮುಂದಿನ ಜನಾಂಗ ಸುಖವಾಗಿ ಇರಲು ಸಾಧ್ಯವಾಗುತ್ತದೆ ಎಂದು ತಹಶೀಲದಾರ ಕೆ.ಜಿ.ರತ್ನಾಕರ ಹೇಳಿದರು.
ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಜಿಪಂ ಮತ್ತು ತಾಲೂಕಾ ಪಂಚಾಯತರವರ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಿದ್ದ ವಿಶ್ವ ನೀರು ದಿನಾಚರಣೆಯನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನೀರು ಅಮೃತಕ್ಕೆ ಸಮಾನವಾಗಿದೆ. ಅದನ್ನು ಹಿತ ಮಿತವಾಗಿ ಬಳಸುವುದರ ಜೊತೆಗೆ ಮುಂದಿನ ಜನಾಂಗಕ್ಕೆ ಸುರಕ್ಷತವಾಗಿ ಹಸ್ತಾಂತರಿಸಬೇಕಾಗಿದೆ. ನೀರು ಜೀವವನ್ನು ಕಾಪಾಡುವ ಜೀವಜಲವಾಗಿದೆ. ಅದರ ರಕ್ಷಣೆ ಮತ್ತು ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಬಿಇಒ ಸಮೀರಅಹ್ಮದ ಮುಲ್ಲಾ ಮಾತನಾಡಿ, ನೀರಿನ ಮಹತ್ವವನ್ನು ಸಾರಲು ಜಲ ಸಾಕ್ಷರತೆ ಎಂಬ ಆಂದೋಲನವನ್ನು ಮಾಡಬೇಕಾಗಿದೆ. ನೀರಿನ ಕುರಿತು ಎಲ್ಲಾ ವಿಷಯಗಳು ಇದರಲ್ಲಿ ಅಡಗಿದ್ದು, ನೀರು ಕಲುಷಿತವಾಗದಂತೆ ನೋಡಿಕೊಳ್ಳುವುದು ಸಹ ನೀರಿನ ರಕ್ಷಣೆಯಾಗಿದೆ. ಮಳೆಗಾಲದಲ್ಲಿ ಮಳೆಯ ನೀರನ್ನು ಮರುಪೂರಣ ಮಾಡುವುದರಿಂದ ಅಂತರಜಲಮಟ್ಟದಲ್ಲಿ ಹೆಚ್ಚಳ ಉಂಟಾಗಿ ನೀರಿನ ಸಮಸ್ಯೆ ಎದುರಾದಾಗ ಅದರಿಂದ ಪ್ರಯೋಜನವಾಗುತ್ತದೆ ಎಂದರು.
ತಾಲೂಕಾ ವೈದ್ಯಾಧಿಕಾರಿ ಡಾ. ರಮೇಶ್ ಕದಂ, ನೀರು ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಅಗತ್ಯವಾಗಿದೆ. ನೀರು ಇಲ್ಲದೇ ಆರೋಗ್ಯದ ಪರಿಕಲ್ಪನೆ ಅಸಾಧ್ಯವಾಗಿದೆ. ಪ್ರತಿಯೊಬ್ಬರಿಗೂ ಶುದ್ದವಾದ ನೀರು ಬೇಕೆ ಬೇಕು. ಅದು ಎಲ್ಲಾ ರೋಗಗಳನ್ನು ವಾಸಿ ಮಾಡುವ ಶಕ್ತಿಯನ್ನು ಹೊಂದಿದ್ದು, ನೀರಿನ ಕುರಿತು ಮುನ್ನಚ್ಚರಿಕೆವಹಿಸಬೇಕಾಗಿದೆ ಎಂದರು.
ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಎ.ಸಿ.ಹಳೇಮನಿ, ದಿನಗಳು ಕಳೆದಂತೆ ನೀರು ಕಡಿಮೇಯಾಗುತ್ತಿದೆ. ಭೂಮಂಡಳದಲ್ಲಿ ಶೇ 70ಕ್ಕಿಂತಲೂ ಅಧಿಕ ಭಾಗ ನೀರು ಇದ್ದರೂ ಸಹ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಂಡುಬರದೇ ಮಾನವನಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸುತ್ತಿದ್ದು ನೀರಿನ ವಿಷಯದಲ್ಲಿ ಇಗಲೇ ಎಚ್ಚರಿಕೆವಹಿಸದಿದ್ದರೇ ಮುಂದಿನ ದಿನಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಪಂ ಇಒ ಡಾ.ಮಹೇಶ್ ಕುರಿಯವರ ಮಾತನಾಡಿ, ಜಲಾಮೃತ ಎಂಬ ಯೋಜನೆಯ ಮೂಲಕ ಪ್ರತಿ ಗ್ರಾಮಗಳಿಗೆ ತೆರಳಿ ನೀರಿನ ಮಹತ್ವ ಹಾಗೂ ಅದರ ಉಪಯೋಗದ ಕುರಿತು ಜಾಗೃತಿ ಮೂಡಿಸಲಾಗಿದೆ. ಒಂದು ಹನಿ ನೀರು ಮನುಷ್ಯನ ಜೀವ ಉಳಿಸುತ್ತದೆ. ಪ್ರತಿಯೊಬ್ಬರು ಮನೆಗಳನ್ನು ನಿರ್ಮಿಸುವಾಗ ಹಾಗೂ ಗದ್ದೆಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲು ಪ್ರೋತ್ಸಾಹ ನೀಡಲಾಗುತ್ತಿದ್ದು. ಇದರ ಪ್ರಯೋಜನ ಜನರು ಪಡೆಯಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ನೀರನ್ನು ಹಿತಮಿತವಾಗಿ ಬಳಸುವ ಪ್ರತಿಜ್ಞೆ ಬೋಧಿಸಲಾಯಿತು. ಸಮಾರಂಭದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಮತ್ತೀತರರು ಭಾಗವಹಿಸಿದ್ದರು.
Leave a Comment