ದಾಂಡೇಲಿ :- ದಾಂಡೇಲಿಯ ದಾಂಡೇಲಪ್ಪಾ ಸನ್ನಿಧಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ “ದಾಂಡೇಲಿಯಪ್ಪನ ಮೂಲ” ಮುಖ ಚಿತ್ರವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಅನಾವರಣ ಮಾಡಿದರು.
ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೈತಿಕತೆ ಹಾಗೂ ಪ್ರಾಮಾಣಿಕತೆಯ ದ್ಯೋತಕವಾಗಿದ್ದ ಓರ್ವ ದಲಿತ ಮರಣಾ ನಂತರ ಗ್ರಾಮದೇವತೆಯಾಗಿ ರೂಪುಗೊಂಡು ಸರ್ವಜನಾಂಗದಿಂದಲೂ ಪೂಜೆಗೊಳ್ಳುವಂಥ ಶಕ್ತಿಶಾಲಿಯಾಗಿ ದಂಡಕಾರಣ್ಯದಲ್ಲಿ ನೆಲೆನಿಂತಿರುವುದೇ ದಾಂಡೇಲಿಯಪ್ಪನ ಕಥೆಯಾಗಿದೆ. ಅವನ ಹೆಸರಿನಿಂದಲೇ ಜನ್ಮತಾಳಿದ ದಾಂಡೇಲಿಯಲ್ಲಿ ಅದೆಷ್ಟೋ ಕುಟುಂಬಗಳು ಅನ್ನ ಸಂಪಾದನೆ ಮಾಡುವ ಮೂಲಕ ಸಮೃದ್ಧಿ ಜೀವನ ನಡೆಸುತ್ತಿವೆ ಎಂದರು.
ಮುಖ್ಯಅತಿಥಿಯಾಗಿ ಆಗಮಿಸಿದ್ದ ಜಿಲ್ಲಾಅರಣ್ಯ ಸಂರಕ್ಷಕ ದಳದ ಡಿ.ಎಫ್.ಓ. ಯು.ಡಿ.ನಾಯ್ಕರು ಮಾಸ್ಕೇರಿಯವರ ಕರಿಕಂಬಳಿ ನಾಟಕದಲ್ಲಿಯ ದಾಂಡೇಲಿಯಪ್ಪನ ಚಿತ್ರಣದಲ್ಲಿ ಸಾಮಾಜಿಕ ನೂನ್ಯತೆಗಳ ಬರಿಸೂಕ್ಷ್ಮಗಳಿವೆ. ಸಾಮಾಜಿಕ ಅಸಮತೋಲನ ನಿವಾರಿಸಲು ಯತ್ನಿಸಿದ ಸಂಶೋಧನೆಗಳ ಎಳೆಗಳಿವೆ. ಅಂತಹ ಎಳೆಗಳನ್ನು ಹುಡುಕಾಡಿದಾಗ ಮಾತ್ರ ಸಮಾಜಕ್ಕೆ ನಿಜಸ್ವರೂಪವನ್ನು ತೋರಿಸಬಹುದು. ದಾಂಡೇಲಿಯಲ್ಲಿಯೇ ದಾಂಡೇಲಪ್ಪನ ಮುಖ ಅನಾವರಣವಾಗಿರುವುದು ಸಂತೊಷದ ಸಂಗತಿ ಎಂದರು.
ಜೀತದಾಳಾಗಿ ಒಂದು ಮುಷ್ಠಿ ಹಿಟ್ಟಿಗಾಗಿ ಚಡಪಡಿಸಿರುವ ಅನುಭವ ಹಂಚಿಕೊಂಡ ಕಾರ್ಮಿಕ ಸಮಾಜ ಸೇವಕ ಕಾರ್ಪೆಂಟರ್ ರವಿ ಚವ್ಹಾಣ ಅವರನ್ನು ದಾಂಡೇಲಿ ಬಾಗಿನದ ಸತ್ಪುರುಷಗೌರವ ನೀಡಿ ಸತ್ಕರಿಸಲಾಯಿತು. ವಿವಿಧರಂಗದಲ್ಲಿ ಮುಂಚೂಣಿಯಲ್ಲಿರುವ ಹನುಮಂತ ಬೊಮ್ಮನಳ್ಳಿ, ಗೌರೀಶ ಬಾಬ್ರೇಕರ, ಅಶೋಕ ಪಾಟೀಲ, ಶಿವಾನಂದ ಗಗ್ಗರಿ, ವಹಾಬ ಬನ್ಸಾರಿ, ಗುಂಡುಪಕರ, ರಮೇಶಚಂದಾವರ, ಸದಾನಂದ ಭಟ್ಟರು ಮೊದಲಾದವರನ್ನು ಗೌರವಿಸಿದರು.
ವೇದಿಕೆಯಲ್ಲಿ ಡಾ|| ಜಿ.ವಿ.ಭಟ್ಟರವರು, ಆಶಾ ಕಿಂದಳಕರ, ಕಣಸೋಗಿ, ಎಚ್.ಎಸ್.ಉದ್ಧಂಡಿ, ಮಂಜುಳಾ ಪುರಾಣಿಕ ಇದ್ದರು.
Leave a Comment