ಹೊನ್ನಾವರ. ಲಯನ್ಸ್ ಕ್ಲಬ್ಗೆ ಜಿಲ್ಲಾ ಗವರ್ನರ್ ಎಂ.ಜೆ.ಎಫ್. ಮೋನಿಕಾ ಸಾವಂತ್ ಭೇಟಿ ನೀಡಿ ಪ್ರಸಕ್ತ ಸಾಲಿನಲ್ಲಿ ನಡೆದ ವಿವಿಧ ಸೇವಾ ಕಾರ್ಯಗಳನ್ನು ಪರಿಶೀಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ, ಹೊನ್ನಾವರ ಲಯನ್ಸ್ ಕ್ಲಬ್ಬಿನಿಂದ ಪ್ರಸಕ್ತ ಸಾಲಿನಲ್ಲಿ ನಡೆದ ವಿವಿಧ ಸೇವಾ ಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲಿ ಎಂದು ತಿಳಿಸುತ್ತಾ ನಡೆದ ಸೇವಾ ಚಟುವಟಿಕೆಗಳನ್ನು ಶ್ಲಾಘಿಸಿದರು. ಮುಂದುವರಿದು ಮಾತನಾಡುತ್ತಾ, ಕುಟುಂಬವನ್ನು ಪ್ರೀತಿಸುವ ಜೊತೆಗೆ ಕುಟುಂಬ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ನಮ್ಮ ಸೇವೆಯು ಸಮಾಜಕ್ಕೆ ವರ್ಗಾವಣೆ ಯಾವಾಗ ನಮ್ಮ ಬದುಕು ಆಕರ್ಷಣೀಯವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಸಂಶೋಧನಾ ಕ್ಷೇತ್ರದ ಸಾಧನೆಗಾಗಿ ಡಾ|| ಆರ್.ಕೆ. ಮೇಸ್ತ, ಕ್ರೀಡಾ ಕ್ಷೇತ್ರದ ಸಾಧಕ ಶಿಕ್ಷಕರಾದ ಭಾಸ್ಕರ ನಾಯ್ಕ, ಮಾದರಿ ಕೃಷಿಕರಾದ ಗಣಪತಿ ಆರ್. ಭಟ್ಟ, ಹಡಿನಬಾಳ, ಅಂಚೆ ಇಲಾಖೆಯ ನಾಗೇಶ ಮರ್ತು ನಾಯ್ಕ, ಸಾಹಸಿ ಮೀನುಗಾರ ಸುಬ್ರಾಯ ಮೇಸ್ತ, ಪಟ್ಟಣ ಪಂಚಾಯತದ ವಾಹನ ಚಾಲಕರಾದ ರಾಜು ಗೊಂಡ ಹಾಗೂ ಪೌರ ಕಾರ್ಮಿಕರಾದ ನಾಗರಾಜ ಹರಿಜನ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಡಾ|| ಆರ್. ಕೆ. ಮೇಸ್ತ ಮಾತನಾಡಿದರು.
ಕಳೆದ ವರ್ಷ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ನಗದು ಬಹುಮಾನದೊಂದಿಗೆ ಪುರಸ್ಕರಿಸಲಾಯಿತು. ಅಲ್ಲದೇ ರಸ್ತೆ ಬದಿಯ ಬಡ ವ್ಯಾಪಾರಿಗಳಿಗೆ 10 ಕೊಡೆ ವಿತರಣೆ, ವಿವಿಧ ಶಾಲೆಗಳಿಗೆ ವಾಲಿಬಾಲ್ ವಿತರಣೆ ಮಾಡಲಾಯಿತು. ಕ್ಲಬ್ಬಿನ “ನಿರ್ಮಲ” ವಾರ್ಷಿಕ ಪತ್ರಿಕೆಯನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನೂತನ ಸದಸ್ಯರಾಗಿ ಆರ್.ಎಸ್. ನಾಯ್ಕ, ಶಿಕ್ಷಕರು, ಎಂಜಿ. ನಾಯ್ಕ ಶಿಕ್ಷಕರು, ವನಿತಾ ಫರ್ನಾಂಡೀಸ್, ಶಿಕ್ಷಕರು, ಸಾಜಿತಾ ಶಿವಪ್ರಸಾದ, ಶಿಕ್ಷಕರು, ಮಹೇಶ ನಾಗೇಶ ನಾಯ್ಕ ಹಳದೀಪುರ, ಜನಾರ್ಧನ ಸಿ. ನಾಯ್ಕ, ಹಳದೀಪುರ ಪ್ರಮಾಣ ವಚನ ಬೋಧಿಸಿ ಕ್ಲಬ್ಬಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿರುವ GMT. Co-coordinator ಪಿ.ಎಂ.ಜೆ.ಎಫ್. ಲಯನ್ ಜಿ.ವಿ. ಬಿಂದಗಿ ಮಾತನಾಡಿದರು. ಅಧ್ಯಕ್ಷರಾದ ರಾಜೇಶ ಸಾಲೇಹಿತ್ತಲ್ರವರು ಸರ್ವರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಸುರೇಶ ಎಸ್. ವರದಿ ವಾಚಿಸಿದರು. ಶಾಂತಾರಾಮ ಭಟ್ಟ ತಂಡದವರು ಪ್ರಾರ್ಥಿಸಿದರು. ಎಂ.ಜೆ.ಎಫ್. ಕೈರನ್ನ ಧ್ವಜವಂದನೆ ಮಾಡಿದರು. ಜೀವೋತ್ತಮ ನಾಯ್ಕ ಪರಿಚಯಿಸಿದರು. ಡಿ.ಎಲ್. ಹೆಬ್ಬಾರ ಹಾಗೂ ಉದಯ ನಾಯ್ಕ ನಿರೂಪಿಸಿದರು. ಖಜಾಂಚಿ ಯೋಗೇಶ ರಾಯ್ಕರ ವಂದಿಸಿದರು. ಈ ಕಾರ್ಯಕ್ರಮಕ್ಕೆ ಮುರ್ಡೇಶ್ವರ, ಕುಮಟಾ, ಅಂಕೋಲಾ ಕ್ಲಬ್ಬಿನ ಸದಸ್ಯರು ಹಾಜರಿದ್ದರು.
Leave a Comment