ಹಳಿಯಾಳ:- “ಕಾಂಗ್ರೇಸ್ ನಂಬಿ ಉದ್ದಾರ ಆದವರಿಲ್ಲಾ, ದೇವೆಗೌಡರ ಕುಟುಂಬ ನಂಬಿ ಬದುಕಿದವರು ಇಲ್ಲಾ” ಈಗ ರಾಜ್ಯದಲ್ಲಿ ಈ ಕಳ್ಳ-ಕುಳ್ಳರು ಇಬ್ಬರು ಜೋಡಿಯಾಗಿದ್ದು ಅವರಲ್ಲೇ ಕಚ್ಚಾಟ-ಗುದ್ದಾಟಗಳು, ಆಂತರಿಕ ಕಲಹಗಳು ಜೋರಾಗಿದ್ದು ಸದ್ಯದಲ್ಲೇ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು ಜುಲೈ ಅಥವಾ ಆಗಸ್ಟ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ, ಕೆನರಾ ಲೋಕಸಭಾ ಅಭ್ಯರ್ಥಿ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು.
ಚುನಾವಣಾ ಪ್ರಚಾರಾರ್ಥ ಗುರುವಾರ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಆಯೋಜಿಸಿದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಕಳ್ಳ-ಕುಳ್ಳರು ಒಟ್ಟಾಗಿ ಸೇರಿದ್ದು ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಒಳ್ಳೆಯ ದಿನಗಳು-ಒಳ್ಳೆಯ ಭವಿಷ್ಯವಿದೆ. ಇವರಿಬ್ಬರ ಕಚ್ಚಾಟದಿಂದ ಸಮ್ಮಿಶ್ರ ಸರ್ಕಾರ ಪತನವಾಗಲಿದೆ. ಮುಂದೆ ಜನರ ಪ್ರೀತಿ ವಿಶ್ವಾಸದಿಂದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದ ಅನಂತಕುಮಾರ ಹಳಿಯಾಳ ಕ್ಷೇತ್ರದಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರನ್ನು ಗೆಲ್ಲಿಸುವಂತೆ ಈಗಲೇ ಕರೆ ನೀಡಿದರು.
ಸ್ವಾತಂತ್ರ್ಯಾ ನಂತರ ಜನರ ಅನುಭವಕ್ಕೆ ಸರ್ಕಾರ ಬಂದಿದ್ದು. ನಮಗಾಗಿ ಯೋಚನೆ ಮಾಡೋ ಸರ್ಕಾರ ಬಂದಿದೆ ಎಂದು ಜನ ಅರಿತಿದ್ದು ಈಗಾಗಲೇ ಜನರು ಮತ್ತೋಮ್ಮೆ ಮೋದಿಜಿಯವರನ್ನು ಪ್ರಧಾನಮಂತ್ರಿಯಾಗಿ ನೋಡಲು ತೀರ್ಮಾನಿಸಿದ್ದಾರೆ ಎಂದ ಅವರು ಜಗತ್ತಿಗೆ ಮೋದಿ ಇನ್ನೊಮ್ಮೆ ಪ್ರಧಾನಿ ಆಗುವುದು ಬೇಕಾಗಿದೆ ಆದರೇ ದೇಶವನ್ನು ಲೂಟಿ ಹೋಡೆಯಲು ಭ್ರಷ್ಟಾಚಾರಿಗಳು ಒಂದಾಗಿದ್ದು ಪ್ರಾಮಾಣಿಕ ಆಡಳಿತಗಾರ ಮೋದಿಜಿಯವರನ್ನು ಸೋಲಿಸಲು ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದು ಇದು ಸಫಲವಾಗುವುದಿಲ್ಲ ಜನ ಮೋದಿಯವರ ಪರವಾಗಿದ್ದಾರೆಂದು ವಿಶ್ವಾಸದಿಂದ ನುಡಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಕಾಂಗ್ರೇಸ್-ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಾ ದೇಶದ ಸಂಪತ್ತು ಲೂಟಿ ಮಾಡಿದ್ದಾರೆ. ದೇಶದ ಅಧೋಗತಿಗೆ ಕಾಂಗ್ರೇಸ್ ಕಾರಣ. ರಾಹುಲ್-ಸೋನಿಯಾ ಗಾಂಧಿಯವರ ಈಡಿ ಕುಟುಂಬಕ್ಕೆ ಝಡ್ ಪ್ಲಸ್ ಸೆಕ್ಯೂರಿಸಿ ನೀಡಿ ಜನರ ಕೊಟ್ಯಂತರ ರೂ. ತೆರಿಗೆ ಹಣವನ್ನು ಪೋಲು ಮಾಡಲಾಗಿದೆ. ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡದ ಕಾಂಗ್ರೇಸ್ ತನ್ನ ಸರ್ಕಾರದ ಅವಧಿಯಲ್ಲಿ ಹಲವಾರು ಹಗರಣಗಳನ್ನು ನಡೆಸಿ ಸಾವಿರಾರು ಕೋಟಿ ರೂ. ಹಣವನ್ನು ಹಗಲು ದರೊಡೆ ಮಾಡಿದ್ದಾರೆಂದು ಆರೋಪಗಳ ಸುರಿಮಳೆಗೈದರು.
ಕೇಂದ್ರ ಸರ್ಕಾರ ಪಿಎಮ್ಜಿಎಸ್ವೈ, ಗ್ಯಾಸ್ ಸಿಲಿಂಡರ್, ಬಲ್ಬ್, ವಿದ್ಯುತ್ ಸಂಪರ್ಕ, ರಸ್ತೆ, ಮೂಲಭೂತ ಸೌಕರ್ಯಗಳು, ವಸತಿ ಯೋಜನೆ ಸೇರಿದಂತೆ ನೂರಾರು ಯೋಜನೆಗಳನ್ನು ಯಾವುದೇ ಭ್ರಷ್ಟಾಚಾರಕ್ಕೆ ಅನುವು ಮಾಡಿಕೊಡದೆ ಪ್ರಾಮಾಣಿಕ ಹಾಗೂ ಪರಿಣಾಮಕಾರಿಯಾಗಿ ಜನರ ಮನೆಬಾಗಿಲಿಗೆ ತಲುಪಿಸಿದ್ದು ಜನ ಮೋದಿ ಸರ್ಕಾರದ ಮೇಲೆ ನಂಬಿಕೆ-ವಿಶ್ವಾಸ ಹೊಂದಿದ್ದು ಬಿಜೆಪಿ ಅಭ್ಯರ್ಥಿಗಳನ್ನು ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡುವಂತೆ ಕರೆ ನೀಡಿದರು.
ಆನಂದ ಎಲ್ಲಿದಿಯಪ್ಪಾ ? :-ಇನ್ನೂ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ತನ್ನ ಸ್ವಾರ್ಥ ರಾಜಕಾರಣಕ್ಕಾಗಿ ಪಕ್ಷಾಂತರ ಮಾಡುತ್ತಲೇ ಇರುವ ವ್ತಕ್ತಿಯಾಗಿದ್ದಾರೆ. ಚುನಾವಣೆ ಬಳಿಕ ನಾಪತ್ತೆಯಾಗುವ ಅಸ್ನೋಟಿಕರ ಅವರು ಮತ್ತೇ ಚುನಾವಣೆ ಸಮಯಕ್ಕೆ ಪ್ರತ್ಯಕ್ಷರಾಗುತ್ತಾರೆ. ಹೀಗಾಗಿ ನಿಖಿಲ್ ಎಲ್ಲಿದಿಯಪ್ಪಾ ಎಂದು ಕೆಳೋ ಹಾಗೆ ಕಾರವಾರ-ಅಂಕೋಲಾ ಕ್ಷೇತ್ರದ ಜನತೆ ಆನಂದ ಎಲ್ಲಿದಿಯಪ್ಪಾ ?? ಎಂದು ಕೆಳೋ ಪರಿಸ್ಥಿತಿ ಇದೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದು ಸಭೆ ನಗೆ ಗಡಲಿನಲ್ಲಿ ತೆಲಿದ ವಿದ್ಯಮಾನ ನಡೆಯಿತು.
ಪಕ್ಷದ ಹಿರಿಯ ಮುಖಂಡ ಮಂಗೇಶ ದೇಶಪಾಂಡೆ ಮಾತನಾಡಿ ಹೋರಾಟಗಾರ ಅನಂತಕುಮಾರ ಹೆಗಡೆ ಭಟ್ಕಳದಲ್ಲಿ ಹಿಂದೂಗಳ ರಕ್ಷಣೆ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದರು ಅಲ್ಲದೇ ಈದ್ಗಾ ಮೈದಾನದಲ್ಲಿ ದೇಶದ ತ್ರಿವರ್ಣ ಧ್ವಜ ಹಾರಿಸಿ ದೇಶಾಭಿಮಾನ ಮೆರೆದಿದ್ದರು. ಆ ಸಂದರ್ಭದಲ್ಲೇ ಅವರ ಮೇಲೆ 30ಕ್ಕೂ ಅಧಿಕ ಪ್ರಕರಣಗಳನ್ನು ಹಾಕಲಾಗಿತ್ತು ಅದನ್ನೆಲ್ಲ ಮೆಟ್ಟಿ ನಿಂತ ಹೆಗಡೆ ಅವರು ಮತ್ತೊಮ್ಮೆ 6ನೇ ಬಾರಿ ಸಂಸದರಾಗಿ ದೇಶಕ್ಕಾಗಿ ಸೇವೆ ಸಲ್ಲಿಸಬೇಕಿದೆ ಎಂದರು.
ವೇದಿಕೆಯ ಮೇಲೆ ಬಿಜೆಪಿ ತಾಲೂಕಾಧ್ಯಕ್ಷ ಶೀವಾಜಿ ನರಸಾನಿ, ಮುಖಂಡರಾದ ಶ್ರೀಕಾಂತ ಸೋನಾರ, ಬಸಣ್ಣ ಕುರುಬಗಟ್ಟಿ, ಕೃಷ್ಣಾ ಪಾಟೀಲ್, ಗಣಪತಿ ಕರಂಜೆಕರ, ಮೋಹನ ಪಾಟೀಲ್, ಬಾಬುನಿ, ಅನಿಲ ಮುತ್ನಾಳ್, ವಿಎಮ್ ಪಾಟೀಲ್ ಮೊದಲಾದವರು ಇದ್ದರು.
Leave a Comment