ಹಳಿಯಾಳ:- ಭಾರತ ದೇಶದಲ್ಲಿ ಮತದಾನವನ್ನು ಕಡ್ಡಾಯಗೊಳಿಸಬೇಕು ಹಾಗೂ ಮತದಾನ ಮಾಡದೇ ಇದ್ದರೇ ಅದನ್ನು ಅಪರಾಧವೆಂದು ಪರಿಗಣಿಸುವ ಕಾನೂನು ಜಾರಿಯಾಗಬೇಕು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಂದು ಹಂತದ ಮತದಾನ ಮುಕ್ತಾಯಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭಧ್ರವಾಗಿದೆ ಎಂದರು.
ಇನ್ನೂ ಸಿಲಿಕಾನ್ ಸೀಟಿ, ಸಿಲಿಕಾನ್ ವ್ಯಾಲಿ, ಗಾರ್ಡನ್ ಸೀಟಿ, ಐಟಿ-ಬಿಟಿ ನಗರ ಎಂದು ಕರೆದುಕೊಳ್ಳುವ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಉನ್ನತ ಪದವಿಧರರು, ಸುಶೀಕ್ಷಿತರು, ಆರ್ಥಿಕ ಸಂಪನ್ನರನ್ನು ಹೆಚ್ಚು ಒಳಗೊಂಡಿರುವ ಬೆಂಗಳೂರಿನಲ್ಲಿ ಪ್ರತಿಬಾರಿ ಕಡಿಮೆ ಮತದಾನವಾಗುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಮತದಾನ ಮಾಡದಿರುವುದು ಸರಿಯಾದ ಕ್ರಮವಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ರಾಷ್ಟ್ರದ ಚುಕ್ಕಾಣಿ ಯಾರ ಬಳಿ ಇರಬೇಕೆಂಬ ನಿರ್ಣಯ ಕೈಗೊಳ್ಳುವ ಹಾಗೂ ರಾಷ್ಟ್ರದ ಸರ್ವಾಂಗೀಣ ಅಭಿವೃದ್ದಿಗೆ ಪವಿತ್ರವಾದ ಮತದಾನ ಮಾಡುವುದು ಅವಶ್ಯಕವಾಗಿದೆ. ಐದು ವರ್ಷಕ್ಕೆ ಕೇವಲ 2-3 ಬಾರಿ ಮಾತ್ರ ಮತ ಚಲಾಯಿಸುವ ಅವಕಾಶವಿರುತ್ತದೆ ಆದರೂ ಸುಶೀಕ್ಷಿತ, ಪ್ರಜ್ಞಾವಂತ ಜನರೇ ಮತದಾನ ಮಾಡದೇ ಅಸಡ್ಡೆ ತೊರುವುದು ಸರಿಯಲ್ಲ ಎಂದರು.
ಪ್ರತಿದಿನ ಯಾರು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೋ, ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಾರೋ ಅವರೇ ಮತ ಚಲಾಯಿಸುವುದಿಲ್ಲ ಎಂದ ಸಚಿವರು ಪವಿತ್ರವಾದ ಮತ ಚಲಾಯಿಸುವ ಮೂಲಕ ಮಾತನಾಡುವ ಕೆಲಸವನ್ನು ಜನತೆ ಮಾಡಬೇಕು. ಮತ ಚಲಾಯಿಸಿದರೇ ಅಭಿವೃದ್ದಿ ಎನ್ನುವುದನ್ನು ಪ್ರತಿಯೊಬ್ಬ ಪ್ರಜೆ ಅರಿತು ನಡೆಯಬೇಕು ಎಂದು ಕಿವಿ ಮಾತು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ತೀರಾ ಮಹತ್ವವಿದೆ. ಮತದಾನ ಕಡ್ಡಾಯವಾಗಬೇಕಾದ ಅನಿವಾರ್ಯತೆ ಕಾಣಿಸುತ್ತಿದೆ ಎಂದ ಸಚಿವ ದೇಶಪಾಂಡೆ ದಿ.23 ರಂದು ಎಲ್ಲರೂ ಕಡ್ಡಾಯವಾಗಿ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಕರೆ ನೀಡಿದರು.
ಇನ್ನೂ ರಾಜ್ಯದಲ್ಲಿ ಕಾಂಗ್ರೇಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು 21-22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
Leave a Comment