ಹಳಿಯಾಳ:- ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ 2ಎ ಗೆ ಸೇರಿಸುವಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪ್ರಯತ್ನಿಸದೆ ಇರುವುದರಿಂದ ಮರಾಠಾ ಸಮಾಜದ ಮತ ಕೇಳುವ ನೈತಿಕ ಹಕ್ಕು ಅವರಿಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದ್ದಾರೆ.
ಈ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಕೆನರಾ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹೀಗೆ ಎಲ್ಲ ರಂಗದಲ್ಲೂ ಹಿಂದೂಳಿದಿರುವ ಮರಾಠಾ ಸಮುದಾಯದವರು ಸಮುದಾಯದ ಅಭಿವೃದ್ದಿಗಾಗಿ ಪ್ರವರ್ಗ 3ಬಿ ಇಂದ ಪ್ರವರ್ಗ 2ಎ ಗೆ ಮೀಸಲಾತಿ ನೀಡುವಂತೆ ನೂರಾರು ಬಾರಿ ಪ್ರತಿಭಟನೆ ನಡೆಸಿ ಮನವಿಗಳನ್ನು ಸಲ್ಲಿಸಲಾಗಿದ್ದರು ಸಮಾಜದ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಮರಾಠಾ ಸಮಾಜದವರು ಕಳೆದ 25 ವರ್ಷಗಳಿಂದ ಅನಂತಕುಮಾರ ಹೆಗಡೆ ಅವರಿಗೆ ಮತದಾನ ಮಾಡುತ್ತಾ ಬಂದಿದ್ದರು ಕೂಡ ಸಮಾಜದ ಬೇಡಿಕೆಗೆ ಸ್ಪಂದಿಸುವಲ್ಲಿ ಹಾಗೂ ಸರ್ಕಾರದ ಗಮನ ಸೆಳೆದು ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿರುವ ಹೆಗಡೆ ಹಿಂದುತ್ವದ ಬಗ್ಗೆ ಮಾತನಾಡುತ್ತಾ ಸಾಗುತ್ತಾರೆ. ಆದರೇ ಹಿಂದವಿ ಸಾಮ್ರಾಜ್ಯವನ್ನು ಕಟ್ಟಿರುವಂತಹ ಛತ್ರಪತಿ ಶಿವಾಜಿ ಮಹಾರಾಜರ ಹೆಸರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಅನಂತಕುಮಾರ ಹೆಗಡೆ ಹಿಂದುತ್ವದ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಮರಾಠರಿಂದ ಹೆಗಡೆ ಹಿಂದುತ್ವ ಕಲಿಯಬೇಕಾಗಿದೆ ಎಂದಿರುವ ಘೋಟ್ನೇಕರ ಹಿಂದುತ್ವದ ಬಗೆಗಿನ ಆಡಂಬರದ ಮಾತುಗಳನ್ನು ನಿಲ್ಲಿಸುವಂತೆ ಹೆಗಡೆಗೆ ಕರೆ ನೀಡಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಮರಾಠಾ ಮುಖಂಡರಾದ ಎಸ್.ಎ.ಶೇಟವಣ್ಣವರ, ಅನಿಲ ಚವ್ವಾಣ, ಜಿಎನ್ ಬೆಕನಿ, ಎಲ್.ಎಸ.ಅರಿಶೀನಗೇರಿ, ಸುರೇಶ ಬೆಣಚೆಕರ, ಎಮ್.ವಿ.ಘಾಡಿ, ಅಪ್ಪಾರಾವ ಪೂಜಾರಿ, ಕೃಷ್ಣಾ ಶಹಾಪುರಕರ ಸೇರಿದಂತೆ ಅನೇಕರ ಸಹಿಗಳನ್ನು ಒಳಗೊಂಡಿದೆ.
Leave a Comment