ಹೊನ್ನಾವರ . ಇಂದು ನಾವು ಮಕ್ಕಳಿಗೆ ಸಹಜವಾಗಿ ಏನು ಬೇಕು ಎನ್ನುವ ಚಿಂತನೆ ನಡೆಸದೇ, ಕೇವಲ ಮಾಕ್ರ್ಸಗಳನ್ನು ತೆಗೆದುಕೊಳ್ಳುವ ಮಷಿನ್ಗಳಾಗಿ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಹೊಸ ಹೊಸ ಆಲೋಚನೆಗಳನ್ನು ಹುಟ್ಟು ಹಾಕಲು ಮತ್ತು ಯಾಂತ್ರೀಕೃತ ಬದುಕಿನಿಂದ ಹೊರ ಬರಲು ಸಹಾಯಕ ಎಂದು ಹೊನ್ನಾವರ ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿರೂಪಾಕ್ಷ ಎಚ್. ಪಾಟೀಲ್ ಹೇಳಿದರು.
ಅವರು ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ, ಹೊನ್ನಾವರ ಆಶ್ರಯದಲ್ಲಿ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ, ಕೆರೆಕೋಣ್ನಲ್ಲಿ 10 ದಿನಗಳ ಕಾಲ ನಡೆಯುವ ಮಕ್ಕಳ ಬೇಸಿಗೆ ಶಿಬಿರವನ್ನು ತಮಟೆ ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿಕ್ಷಣ ಅಂದರೆ ಕೇವಲ ಮಾಕ್ರ್ಸ್ ಅಷ್ಟೇ ಅಲ್ಲ, ಎಲ್ಲಾ ರೀತಿಯಿಂದಲೂ ಸಂಸ್ಕಾರವನ್ನು ಹೊತ್ತುಕೊಂಡು ಸಮಾಜದಲ್ಲಿ ಪ್ರಬುದ್ಧ ಮಗುವಾಗಿ ಬೆಳೆಯುವ ರೀತಿಯದ್ದಾಗಿರಬೇಕು. ಅದು ಬಿಟ್ಟು ಓದು ಓದು ಎನ್ನುವ ಒತ್ತಡದಿಂದಾಗಿ ನಿಜವಾಗಿ ಓಡಬೇಕಾದ(ಮುಂದೆ ಹೋಗಬೇಕಾದ) ಸಂದರ್ಭದಲ್ಲಿಯೇ ಕುಸಿದು ಬೀಳುವಂತಹ ಅಪಾಯದಲ್ಲಿ ಮಗು ನೂಕಲ್ಪಡುವ ಸ್ಥಿತಿಯಾಗಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊನ್ನಾವರ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳಾದ ಸುರೇಶ ನಾಯ್ಕ ಮಾತನಾಡಿ ನಾವು ಯಾರೂ ಆಸ್ತಿ ಮಾಡುವುದು ಬೇಡ ಬದಲಾಗಿ ಮಗುವನ್ನೇ ಒಂದು ಆಸ್ತಿಯನ್ನಾಗಿ ಮಾಡುವ ಹಾಗೆ ಪ್ರಯತ್ನ ಮಾಡಬೇಕು ಅದರಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಪ್ರಮುಖವಾದುದು ಆ ನಿಟ್ಟಿನಲ್ಲಿ ಎಲ್ಲಾ ವಿಭಾಗದ ಶಿಕ್ಷಕರು ರೋಲ್ ಮಾಡೆಲ್ಗಳಾಗಬೇಕು, ಆಗಲೇ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಮಕ್ಕಳು ರೂಪುಗೊಳ್ಳುತ್ತಾರೆ, ಇದಕ್ಕೆಲ್ಲಾ ಶಿಬಿರ ಅನುವು ಮಾಡಿಕೊಡುತ್ತದೆ ಎಂದರು.
ವೇದಿಕೆಯ ಮೇಲಿದ್ದ ನಿವೃತ್ತ ಶಿಕ್ಷಕ, ಕಲಾವಿದ ಬಿ.ವಿ. ಭಂಡಾರಿ, ಎಸ್.ಡಿ.ಎಮ್. ಪಿ.ಯು. ಕಾಲೇಜಿನ ಉಪನ್ಯಾಸಕ, ಸಂಪನ್ಮೂಲ ವ್ಯಕ್ತಿ ವಿದ್ಯಾಧರ ನಾಯ್ಕ ಕಡತೋಕ ಮತ್ತು ಖ್ಯಾತ ಯಕ್ಷಗಾನ ಸ್ತ್ರೀ ವೇಷಧಾರಿ ಗಣೇಶ ನಾಯ್ಕ ಮುಗ್ವಾ ಮಾತನಾಡಿದರು.
ಎಮ್ ಎಸ್ ಶೆಟ್ಟಿ ಸ್ವಾಗತಿಸಿದರು, ಅಂಗನವಾಡಿ ಮೇಲ್ವಿಚಾರಕಿ ಜ್ಯೋತಿ ಪಟಗಾರ ವಂದಿಸಿದರು, ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment