ಹಳಿಯಾಳ : ಅನಾಮೇಧೆಯ ಮೊಬೈಲ್ ಕರೆಗೆ ಮೋಸ ಹೋದ ಗ್ರಾಮೀಣ ಭಾಗದ ಮುಗ್ದ ಬಡ ರೈತ ಮಹಿಳೆಯು ಸಾವಿರಾರು ರೂಗಳನ್ನು ಕಳೆದುಕೊಂಡು ಕಂಗಾಲಾಗಿ ನ್ಯಾಯಕ್ಕಾಗಿ ಇದೀಗ ಹಳಿಯಾಳ ಪೋಲಿಸ್ ಠಾಣೆಯ ಮೋರೆ ಹೋದ ಘಟನೆ ನಡೆದಿದೆ.
ತಾಲೂಕಿನ ಗರಡೊಳ್ಳಿ ಗ್ರಾಮದ ಬಡ ರೈತ ಮಹಿಳೆಯಾದ ಸುವರ್ಣಾ ಆನಂದ ಮಾಸೇಕರ ಅವರು ಹಣ ಕಳೆದುಕೊಂಡು ಮೋಸದ ಕರೆಗೆ ಬಲಿಯಾದ ದುರ್ದೈವಿಯಾಗಿದ್ದಾಳೆ. ಇದೇ ಮೇ 9 ರಂದು ಉತ್ತರ ಭಾರತದಿಂದ ಹಿಂದಿ ಭಾಷೆಯಲ್ಲಿ ಬ್ಯಾಂಕಿನ ಮ್ಯಾನೇಜರ ರಾಜಕುಮಾರ ಎಂದು ಪರಿಚಯಿಸಿಕೊಂಡು ಮೊಬೈಲ್ ಸಂಖ್ಯೆ 7808014598 ಇಂದ ಮಾತನಾಡಿ, ಮಹಿಳೆಯಿಂದ ಉಳಿತಾಯ ಖಾತೆಯ ಸಂಖ್ಯೆ, ಬ್ಯಾಂಕ್ನ ವಿವರ, ಎಟಿಎಂ ಸಂಖ್ಯೆ ಅದರ ಹಿಂಬದಿಯ ವಿವರ ಸೇರಿದಂತೆ ಇನ್ನಿತರ ಮಾಹಿತಿಗಳನ್ನು ಪಡೆದು ಕ್ಷಣಾರ್ಧದಲ್ಲಿಯೇ ಅವರ ಉಳಿತಾಯ ಖಾತೆಯಲ್ಲಿದ್ದ ರೂ 25.009 ಪೈಕಿ 25 ಸಾವಿರ ರೂಗಳನ್ನು ವಿಥ್ಡ್ರಾ ಮಾಡಿದ್ದಾನೆ. ಅದರ ಎಸ್.ಎಮ್.ಎಸ್. ಮಹಿಳೆಯ ಗಂಡನ ಮೊಬೈಲ್ ಹೋಗಿದೆ. ಆದರೆ ಆತ ಅವಿದ್ಯಾವಂತನಾಗಿದ್ದರಿಂದ ಅದರ ಕುರಿತು ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ.
ಖಾತೆಯನ್ನು ಹೊಂದಿರುವ ಗರಡೊಳ್ಳಿ ಗ್ರಾಮ ಪಕ್ಕದ ಸಾಂಬ್ರಾಣಿಯ ಸಿಂಡಿಕೇಟ್ ಬ್ಯಾಂಕ್ಗೆ ಹಣವನ್ನು ವಿಥ್ ಡ್ರಾ ಮಾಡಲು ಮಂಗಳವಾರ ಮುಂಜಾನೆ ಬ್ಯಾಂಕಿಗೆ ತೆರಳಿದಾಗ ಹಣ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಕಾರ್ಯಪ್ರವೃತರಾದ ಅವರು ಕರೆ ಬಂದ ಮೊಬೈಲ್ಗೆ ಪೋನ್ ಮಾಡಿ ವಿಚಾರಿಸಿದಾಗ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ನೊಂದ ಮಹಿಳೆ ತಮ್ಮ ಕುಟುಂಬದ ಸಮೇತ ಹಳಿಯಾಳ ಪಟ್ಟಣಕ್ಕೆ ಆಗಮಿಸಿ ಹಣ ವಂಚನೆ ಪ್ರಕರಣ ಬೇಧಿಸುವಂತೆ ಪೋಲಿಸರ ಮೋರೆ ಹೋಗಿದ್ದಾರೆ.
ಇಗಾಗಲೇ ಇಂತಹ ಹತ್ತಾರು ಪ್ರಕರಣಗಳು ಪಟ್ಟಣದಲ್ಲಿ ನಡೆದಿದ್ದು ಬ್ಯಾಂಕಿನ ಗ್ರಾಹಕರು ಸುಳ್ಳು ಕರೆಗಳಿಗೆ ಕಿವಿಗೊಡದೇ ಖಾತೆಯು ಸೇರಿದಂತೆ ಎಟಿಎಂನ ಯಾವುದೇ ಮಾಹಿತಿಗಳನ್ನು ನೀಡದಂತೆ ಹಲವು ಬಾರಿ ಅರಿವು ಮತ್ತು ಪ್ರಚಾರ ನಡೆಸಿದರು ಸಹ ಮುಗ್ದ ಜನರನ್ನು ಗುರುತಿಸಿ ಇಂತಹ ವಂಚನೆ ಘಟನೆಗಳು ನಡೆಯುತ್ತಿರುವುದು ವಿಷಾಧನೀಯ ಎಂದು ಬ್ಯಾಂಕ್ನ ಮ್ಯಾನೇಜರಗಳು ಖೇಧ ವ್ಯಕ್ತಪಡಿಸಿದ್ದಾರೆ.
Leave a Comment